ರಾಷ್ಟ್ರ ರಾಜಧಾನಿಯಲ್ಲಿ ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಆರಂಭವಾಗಿರುವ ಹಿಂಸಾಚಾರವು ತಾರಕಕ್ಕೇರಿದ್ದು, ಸಾವಿನ ಸಂಖ್ಯೆ 20ಕ್ಕೆ ಏರಿದೆ. ಈಶಾನ್ಯ ದಿಲ್ಲಿಯ ನಾಲ್ಕು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಉತ್ತರ ದಿಲ್ಲಿಯ ಹಿಂಸಾ ಪೀಡಿತ ಕೆಲವು ಪ್ರದೇಶಗಳಲ್ಲಿ ಕಂಡಲ್ಲಿ ಗುಂಡಿಗೆ ಆದೇಶಿಸಲಾಗಿದೆ. ಪ್ಯಾರ ಮಿಲಿಟರಿಯನ್ನು ಕೇಂದ್ರ ಸರಕಾರ ಕಳುಹಿಸಿ ಕೊಟ್ಟಿದ್ದು, ಹಿಂಸಾಚಾರ ತಡೆ ಸಂಬಂಧ ವಿಶೇಷ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಿರಿಯ ಅಧಿಕಾರಿಗಳ ಜತೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಪೊಲೀಸರು, ಶಾಸಕರ ಸಮನ್ವಯತೆಯಲ್ಲಿ ಎಲ್ಲಾ ವರ್ಗಗಳ ನಾಯಕರು, ಧಾರ್ಮಿಕ ಮುಖಂಡರನ್ನು ಒಳಗೊಂಡ ಶಾಂತಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೂಡ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.








