ಸಮಯ ಬೆಳಿಗ್ಗೆ ನಾಲ್ಕೂವರೆ ಗಂಟೆ ಟ್ರಿಣ್ ಟ್ರಿಣ್ ಅಂತಾ ಮೊಬೈಲು ಅಲರಂ ಹೊಡೆಯುತ್ತಲೇ ಇತ್ತು . ಸೀತಮ್ಮ ಹತ್ತಿರವೇ ಇದ್ದ ಎಣ್ಣೆ ದೀಪ ಉರಿಸಿ ಮಗನ ಕಡೆ ನೋಡುತ್ತಲೇ ಮಗಾ… ಮಗಾ…. ಎದ್ದೇಳು ಇವತ್ತು ಪೇಪರ್ ಹಾಕಲು ಹೋಗುದಿಲ್ವಾ.?. ಎಂದು ಕೇಳಿದಳು. ಮೊಬೈಲು ತಲೆಯ ಹತ್ತಿರವೇ ಇಟ್ಟುಕೊಂಡಿದ್ದರೂ ನಿದ್ದೆಯ ಮಂಪರಿನಲ್ಲಿದ್ದ ಮಗ ವಿಶ್ವಾಸನಿಗೆ ಎಚ್ಚರವಾಗಿರಲಿಲ್ಲ ಅಲ್ಲೇ ಮಲಗಿದ್ದ ಮಗಳು ಆಶಾಳಿಗೆ ಸೀತಮ್ಮ ಎರಡನೇ ಬಾರಿ ಕರೆದಾಗ ತಕ್ಷಣ ಎಚ್ಚರವಾಗಿ ತಮ್ಮನನ್ನು ಮುಟ್ಟಿ ಮುಟ್ಟಿ ಕರೆದಳು ಎಚ್ಚರ ಗೊಂಡ ವಿಶ್ವಾಸ ಗಲಿಬಿಲಿಯಿಂದ ತಡವಾಯಿತೇನೋ ಎಂದು ಎದ್ದು ಲೈಟ್ ಸ್ವೀಚ್ ಹಾಕಿ ಬಚ್ಚಲು ಮನೆಗೆ ಹೋಗಿ ಮುಖತೊಳೆದು ಬಂದು ಮತ್ತೆ ಸೈಕಲ್ ಹೇರಿಕೊಂಡು ಪತ್ರಿಕೆ ವಿತರಿಸುವ ಸ್ಕಳಕ್ಕೆ ಹೋದನು. ಆಶಾ ಆ ನಸುಕಿನ ಬೆಳಕಿನಲ್ಲಿ ಕಲ್ಲು ತಗ್ಗು ಸಣ್ಣ ಹೊಂಡವಿರುವ ದಾರಿಯಲ್ಲಿ ವೇಗವಾಗಿ ಹೋಗುತ್ತಿರುವ ತಮ್ಮನನ್ನೇ ದಿಟ್ಟಿಸಿ ನೋಡಿದಳು. ಒಳಗಿನಿಂದ ಸೀತಮ್ಮ ಮತ್ತೆ ಮಗಳೇ…. ಮಗಳೇ… ಬಾ ಮಲಗಿಕೋ ಎಂದು ಕರೆದು ದೇವರೇ ಬಡತನವಿರಲಿ ಆದರೆ ಆರೋಗ್ಯ ಸುಧಾರಿಸಿದರೇ ಸಾಕಿತ್ತು ಎಂದು ತನ್ನಷ್ಟಕ್ಕೆ ಗೊಣಗಿಕೊಂಡಳು. ಆಶಾ ಸ್ವಲ್ಪ ಹೊತ್ತು ಮಲಗಿಕೊಂಡು ಮೇಲೆಯೇ ದಿಟ್ಟಿಸಿ ನೋಡುತ್ತಾ ಅಮ್ಮನ ಆರೋಗ್ಯ ಮತ್ತು ತಮ್ಮನಲ್ಲಿರುವ ಮನೆಯ ಕಾಳಜಿ ಯೋಚಸುತ್ತಲೇ ಇದ್ದಳು ಹೊರತು ನಿದ್ದೆ ಮಾಡಿರಲಿಲ್ಲ .ಮತ್ತೆ ಪುನಃ ಎದ್ದು ಎಂದಿನಂತೆ ಮನೆಕೆಲಸ ಶುರು ಮಾಡಿದಳು .ವಿಶ್ವಾಸನಿಗೂ ಎಚ್ಚರವಾಗದಷ್ಟು ನಿದ್ದೆ ಬರಲು ಕಾರಣವಿತ್ತು .ಎರಡು ದಿನಗಳ ಹಿಂದೆ ಬೆಳಗ್ಗೆ ಸುರಿದ ಮಳೆಗೆ ಒದ್ದೆಯಾಗಿ ಸಣ್ಣಗೆ ಶೀತ ಜ್ವರ ಬಂದು ರಾತ್ರಿಯಿಡೀ ಕಿರಿ ಕಿರಿಯಾಗಿ ನಿದ್ದೆ ಇಲ್ಲದೇ ಮತ್ತೆ ಎರಡೂವರೆಗೆ ಗಂಟೆಗೆ ಹಾಗೆನೇ ನಿದ್ದೆ ಬಂದಿತ್ತು.
ಸೀತಮ್ಮಳೂ ಕಳೆದ ಒಂದು ವರ್ಷದಿಂದೀಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮಲಗಿದ್ದಳು . ಆದರೆ ಮಗಳು ಆಶಾ ಮನೆಕೆಲಸ ಎಲ್ಲವನ್ನೂ ಮಾಡುತ್ತಾ ಅಮ್ಮನಿಗೆ ತಮ್ಮನಿಗೆ ಹೊತ್ತುಹೊತ್ತಿಗೆ ಊಟ ತಿಂಡಿ ಮಾಡಿಕೊಡುತ್ತಿದ್ದಳು. ಸೀತಮ್ಮ ಕ್ಷಣ ಕ್ಷಣಕ್ಕೂ ಹಾಗೆ ಮಾಡು ಮಗಳೇ ಹೀಗೆ ಮಾಡು ಮಗಾ ಎಂದೂ ಮಗಳಿಗೆ ಮಲಗಿಕೊಂಡಲ್ಲೇ ಹೇಳಿಕೊಡುತ್ತಿದ್ದಳು. ಮನೆಯ ಬಡತನ ಹಾಗೂ ಆರೋಗ್ಯ ಸ್ಥಿತಿ ಅವಳ ಎಲ್ಲಾ ಉತ್ಸಾಹವನ್ನು ನುಂಗಿ ಹಾಕಿತ್ತು ಮಗ ವಿಶ್ವಾಸ ಈಗಾಗಲೇ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ .ಆದರೆ ಬಡತನ ಹೊರತಾಗಿ ಜಾಣತನದಲ್ಲಿ ಕಡಿಮೆಯವನಾಗಿರಲಿಲ್ಲ . ಎರಡನೇ ತರಗತಿಯಲ್ಲಿರುವಾಗಲೇ ಅಪ್ಪನನ್ನು ಕಳೆದುಕೊಂಡನು. ಈ ಮೊದಲು ಸೀತಮ್ಮಳ ಬದುಕಿನಲ್ಲಿ ಎಲ್ಲಾ ಜವಾಬ್ದಾರಿಯೂ ಹೇಗಿತ್ತೆಂದರೆ ಗಂಡನ ಕಳೆದುಕೊಂಡಾಗ ಮುಂದೇನೂ ಎಂಬ ಆಘಾತಕ್ಕೊಳಗಾದರೂ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ನೋವು ನುಂಗಿ ಬದುಕು ಮುಂದುವರಿಸುತ್ತಾ ಬಂದವಳು ಒಂದುನಿಮಿಷವೂ ಸುಮ್ಮನಿರದೇ ಮನೆ ಕೆಲಸ ಮಾಡಿಕೊಂಡು ಹತ್ತಿರದ ಅಂಗನವಾಡಿಯಲ್ಲಿ ಸಹಾಯಕಳಾಗಿ ಕೆಲಸ ನಿರ್ವಹಿಸುತ್ತಿದ್ದು ಸಂಜೆ ಬಂದು ಬೀಡಿ ಕಟ್ಟುತ್ತಿದ್ದಳು .ಮಗಳು ಆಶಾ ಕಲಿಕೆಯಲ್ಲಿ ತುಂಬಾ ಜಾಣೆಯಾಗಿದ್ದಳು .ಅಪ್ಪನನ್ನು ಕಳದುಕೊಂಡ ಮೇಲೆ ಹತ್ತನೇ ತರಗತಿ ಪಾಸಾದರೂ ಕಾಲೇಜು ಸೇರಲಿಲ್ಲ ಬೀಡಿ ಕಟ್ಟಿ ಮನೆ ಅಮ್ಮನ ಮದ್ದು ಮತ್ತು ತಮ್ಮನನ್ನು ಶಾಲೆ ಕಳುಹಿಸುತ್ತಿದ್ದಳು . ವಿಶ್ವಾಸ ಎಂಟನೇ ತರಗತಿಯಿಂದಲೇ ತನ್ನ ಸ್ನೇಹಿತರ ಜೊತೆ ಸೇರಿ ಬೆಳ್ಳಂಬೆಳಗೆ ತನ್ನ ಆಸುಪಾಸಿನಲ್ಲಿ ದಿನ ಪತ್ರಿಕೆ ಹಾಕುತ್ತಿದ್ದನು. ಅವನ ಪತ್ರಿಕೆ ಏಜೆಂಟ್ ತಿಂಗಳಿಗೆ ಕೊಡುತ್ತಿದ್ದ ದುಡ್ಡಿನಲ್ಲಿ ಹೊಸ ಬಟ್ಟೆ ಮನೆಗೆ ಬೇಕಾದ ಸ್ವಲ್ಪ ದಿನಸಿ ತಂದು ಉಳಿದ ಹಣವನ್ನು ತನ್ನ ಉಳಿತಾಯ ಖಾತೆಗೆ ಹಾಕುತ್ತಿದ್ದನು. ಒಂಬತ್ತನೇ ತರಗತಿಯಲ್ಲಿರುವಾಗ ಒಂದು ಸಾಮಾನ್ಯವಾದ ಮೊಬೈಲ್ ಕೊಂಡನು ಇದು ಆತನಿಗೆ ಪೇಪರು ಹಾಕುವಾಗ ಮತ್ತು ಮನೆಯಲ್ಲಿ ಸಂಪರ್ಕಕ್ಕಾಗಿ ಅವಶ್ಯಕತೆ ಇತ್ತು. ಅಷ್ಟೇ ಬಿಟ್ಟರೆ ಆಟ ಚಾಟ್ ಅಂತಾ ಯಾವ ಹುಚ್ಚು ಅವನಲ್ಲಿ ಇರಲಿಲ್ಲ ಶಾಲಾ ಕಲಿಕೆಯಲ್ಲೂ ತರಗತಿಗೆ ಪ್ರಥಮ ಸ್ಥಾನ ಬರುತ್ತಿದ್ದನು. ಐದನೇ ತರಗತಿಯಿಂದಲೇ ಅವನ ಕಲಿಕಾ ಕ್ರಮವನ್ನು ಶಿಕ್ಷಕರು ಪ್ರಶಂಶಿಸಿದರೆ ವಿನಯ ವಿಧೇಯತೆಯ ಬಗ್ಗೆ ನೆರೆಹೊರೆಯವರೂ ಮಾತಾನಾಡಿಕೊಳ್ಳುತ್ತಿದ್ದರು. ಹಾಗೆಯೇ ಬಹಳಷ್ಟು ಜವಾಬ್ದಾರಿಯುತ ಗುಣಗಳನ್ನು ಬೆಳೆಸಿಕೊಂಡಿದ್ದನು.
ಪ್ರತಿದಿನ ಸಂಜೆ ಹೊತ್ತು ಅಲ್ಲೇ ಹತ್ತಿರವಿರುವ ಧ್ಯಾನಕೇಂದ್ರಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದನು . ಮನೆಗೆ ಬಂದು ಅಮ್ಮನಿಗೆ ಅಕ್ಕನಿಗೆ ಸಹಾಯ ಮಾಡುವುದು ಅಕ್ಕನ ಜೊತೆ ಸಂಜೆ ಸ್ವಲ್ಪ ಹೊತ್ತು ಆಟವಾಡುವುದು ರಜಾ ಸಮಯದಲ್ಲಿ ಅಪರೂಪಕ್ಕೊಮ್ಮೆ ಹತ್ತಿರದ ಮೈದಾನಕ್ಕೆ ಹೋಗಿ ಗೆಳೆಯ ಜೊತೆ ಆಟವಾಡಿ ಬರುವುದು ಇತ್ತು. ಮುಸ್ಸಂಜೆ ಹೊತ್ತಿನಲ್ಲಿ ಎಂದಿನಂತೆ ಅಕ್ಕ ಜೊತೆ ದೇವರ ಭಜನೆ ಮಾಡುತ್ತಿದ್ದನು. ಆಗ ಸೀತಮ್ಮಳು ಎದ್ದು ಕುಳಿತು ಮಕ್ಕಳ ಭಜನೆಯನ್ನು ಕೇಳುತ್ತಿದ್ದಳು . ಬಳಿಕ ವಿಶ್ವಾಸ ಎಂದಿನಂತೆ ತನ್ನ ಓದುವುದು ಬರೆಯುವುದರಲ್ಲಿಯೇ ತಲ್ಲೀನನಾಗುತ್ತಾ ರಾತ್ರಿ ಹತ್ತು ಗಂಟೆಯವರೆಗೆ ಓದುತ್ತಿದ್ದನು.ಬಳಿಕ ಅರ್ಧಗಂಟೆ ಪತ್ರಿಕೆ ಓದಿ ಮಲಗುತ್ತಿದ್ದನು ಮರುದಿನ ಬೆಳಿಗ್ಗೆ ಎಂದಿನಂತೆ ಪೇಪರು ಹಾಕಿ ಬಂದು ಆರೂವರೆ ಗಂಟೆಯಿಂದ ಎಂಟು ಗಂಟೆಯವರೆಗೆ ಓದಿ ಬರೆದು ಸರಿಯಾಗಿ ಒಂಬತ್ತು ಗಂಟೆಗೆ ಶಾಲೆಗೆ ಹಾಜರಾಗುತ್ತಿದ್ದನು. ಶಾಲೆಯಲ್ಲೂ ಕೂಡ ಅಷ್ಟೇ ಅವನ ಗುರುಗಳೆಲ್ಲರೂ ಅವನ ಕುರಿತು ಮಾತಾನಾಡಿಕೊಳ್ಳುತ್ತಿದ್ದರು. ಭವಿಷ್ಯ ದಲ್ಲಿ ಒಂದು ಒಳ್ಳೆಯ ಸರಕಾರಿ ಉದ್ಯೋಗ ಸಿಕ್ಕಿದ್ದರೆ ಅವನ ಮನೆಯ ಕಷ್ಟಗಳೆಲ್ಲವೂ ದೂರವಾಗುತ್ತಿತ್ತು ಎನ್ನುತ್ತಿದ್ದರು . ವಿಶ್ವಾಸ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದನು ತರಗತಿಯಲ್ಲೂ ಅಷ್ಟೇಇತಿಹಾಸ ಸಾಮಾಜಿಕ ರಾಜಕೀಯ ಆರ್ಥಿಕ ಮತ್ತೆ ವೈಜ್ಞಾನಿಕ ವಿಷಯಗಳ ಬಗ್ಗೆ ಸಂದೇಹ ಬಂದಾಗಲೆಲ್ಲ ಪ್ರಶ್ನಿಸುತ್ತಿದ್ದನು ತಾನು ತಂಡದ ನಾಯಕನಾಗಿ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯದಲ್ಲಿ ತನ್ನ ಶಾಲೆ ಮತ್ತು ಊರನ್ನು ಪರಿಚಯವಾಗುವಂತೆ ಮಾಡಿದನು ತಾನೂ ಚೆನ್ನಾಗಿ ಅಧ್ಯಯನ ಮಾಡುತ್ತಾ ಎಲ್ಲರ ವಿಶ್ವಾಸ ವನ್ನು ಸಾಕಾರಗೊಳಿಸಲು ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಉತ್ತಮವಾಗಿ ಸಿದ್ಧತೆ ಮಾಡುತ್ತಿದ್ದನು. ಬದುಕು ಮನೆ ಭವಿಷ್ಯದ ಕನಸಿನ ಬಗ್ಗೆ ಎಲ್ಲವನ್ನೂ ಅರ್ಥೈಸಿಕೊಂಡು ಯೋಜನೆಯನ್ನು ಯೋಚಿಸಿಕೊಂಡಿದ್ದಾನೆ . ಊರ ದಾನಿಗಳೆಲ್ಲರೂ ಈ ಹುಡುಗನ್ನು ನಮ್ಮೂರಿಗೆ ಕೀರ್ತಿ ತರುವಂತೆ ಎಲ್ಲಾ ಪ್ರೋತ್ಸಾಹವನ್ನು ನಿಡೋಣವೆಂಬ ಪ್ರೀತಿಯನ್ನು ವಿಶ್ವಾಸನಿಗೆ ತೋರಿಸುತ್ತಾ ಬಂದರು. ವಿಶ್ವಾಸ ಪರೀಕ್ಷೆ ಬರೆದು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದು ಊರಿನಲ್ಲಿರುವ ಸರಕಾರಿ ಕಾಲೇಜೊಂದನ್ನು ಸೇರಿದನು . ಅಂತೆಯೇ ಪಿ ಯು ಹಾಗೂಡಿಗ್ರಿ ಪದವಿಯನ್ನು ಪೂರೈಸಿದನು .
ಈಗ ವಿಶ್ವಾಸನಿಗೆ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಚಿಗುರೊಡೆಯಿತು. ಕಾರಣ ಪ್ರತಿನಿತ್ಯ ಪತ್ರಿಕೆ ಓದುತ್ತಿರಲು ಸಮಾಜದಲ್ಲಿ ನಡೆಯುವ ಅನ್ಯಾಯ ಭ್ರಷ್ಟಾಚಾರ ಬಡವರ ಮೇಲಾಗುವ ಶೋಷಣೆಯನ್ನು ಕೇಳಿ ರೋಸಿ ಹೋಗಿ ಮುಂದೊಂದು ದಿನ ಅವಕಾಶ ದೊರೆತರೆ ಇದಕ್ಕೆಲ್ಲಾ ಇತಿಶ್ರೀ ಹಾಡಬೇಕೆಂದು ದೂರದ ಕನಸು ಕಾಣುತ್ತಿದ್ದನು. ಸ್ನಾತಕೋತ್ತರ ಪದವಿ ಹಾಗೂ ಯು ಪಿ ಎಸ್ ಸಿ ಪರೀಕ್ಷಾ ತರಬೇತಿಗಾಗಿ ದೂರ ಹೋಗಬೇಕಾದುದರಿಂದ ಪತ್ರಿಕೆ ಹಾಕುವುದಕ್ಕೆ಼. ಹೋಗುವುದನ್ನು ನಿಲ್ಲಿಸಬೇಕಾಯಿತು. ಆದರೆ ತಾನೂ ಪತ್ರಿಕೆ ತರಿಸಿಕೊಂಡು ಸಾಮಾನ್ಯ ಜ್ಞಾನವನ್ನು ಗಳಿಸಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ಉತ್ತೀರ್ಣನಾಗಿ ತನ್ನ ಆಸಕ್ತಿ ಕ್ಷೇತ್ರವಾಗಿ ಐ ಎ ಎಸ್ ಅಧಿಕಾರಿ ಹುದ್ದೆಯನ್ನು ಆಯ್ಕೆ ಮಾಡಿಕೊಂಡನು .
ವಿಶ್ವಾಸ ತನ್ನ ಕರ್ತವ್ಯ ದಲ್ಲಿ ದಕ್ಷ ಅಧಿಕಾರಿಯೆಂಬ ಹೆಗ್ಗಳಿಕೆಗೆ ಪಾತ್ರನಾಗಿ ಊರಿಗೆ ಕೀರ್ತಿ ತಂದನು. ವಿಷಯ ತಿಳಿದ ಪತ್ರಿಕೆಯವರು ಟಿ ವಿ ಮಾಧ್ಯಮದವರು ಸಂದರ್ಶನ ಮಾಡಿದಾಗ ಆತ ತನ್ನ ಸಾಧನೆಯ ದೊಡ್ಡ ಪ್ರಯಾಣವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಕೊನೆಗೆ ಹೇಳಿದ ಒಂದು ಮಾತು ಎಲ್ಲರಿಗೂ ಒಂದು ಸಂದೇಶವೆಂಬಂತೆ ಹೇಳಿದನು.’ ಬಡತನ ಶಾಪವಲ್ಲ ನಮ್ಮೊಳಗಿರುವ ಕೀಳರಿಮೆ ಮತ್ತು ಔದಾಸಿನ್ಯವೇ ಮಹಾಶಾಪ ‘ ಎಂದನು . ಮುಂದೆ ಮನೆಯ ಸ್ಥಿತಿಗತಿಯನ್ನು ಸರಿಪಡಿಸಿದನು. ಹಾಗೆಯೇ ಅಮ್ಮನ ಆರೋಗ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸಿ ಚಿಕಿತ್ಸೆ ಕೊಡಿಸಿ ಗುಣಮುಖಗೊಳಿಸಿದನು. ಅಮ್ಮನ ಅಕ್ಕನ ಹಾಗೆಯೇ ಮನೆಯ ಕಷ್ಟಗಳೆಗಳೆಲ್ಲವೂ ದೂರವಾಯಿತು. ಇದೀಗ ತನ್ನನ್ನು ಭೇಟಿಯಾಗಲು ಬರುವ ಎಲ್ಲಾ ಹಿರಿಯ ಕಿರಿಯ ಬಂಧುಗಳನ್ನು ಬರಮಾಡಿ ಸರಳತೆಯಿಂದಲೇ ಅವರ ಜೊತೆ ಮಾತಾನಾಡುತ್ತ ಜೀವನ ಸ್ವಾರಸ್ಯವನ್ನು ತಿಳಿಸಿದನು. ಸೋಲಿನ ಕ್ಷಣಗಳೂ ಬಂದಾಗ ಧೃತಿಗೆಡದೇ ಮುನ್ನುಗ್ಗುವ ಧೈರ್ಯ ನಮ್ಭಲ್ಲಿದ್ದರೇ ಏನನ್ನೂ ಸಾಧಿಸಬಹುದು ಹೇಳುತ್ತಾ ತಾನೂ ಅನುಭವಿಸಿದ ಕಷ್ಟಕರವಾದ ನೈಜ ಘಟನೆಯನ್ನು ಉದಾರಿಸುತ್ತಾ ಅದರಿಂದ ಪಾರಾದ ಬಗೆಯನ್ನು ತಿಳಿಸಿದನು ಬದುಕು ನಡೆದು ಬಂದ ಹಾದಿಯ ಅವಿಸ್ಮರಣೀಯ ಸಾಧನೆಯ ಬಗ್ಗೆ ಸ್ಮರಣೆ ಮಾಡುತ್ತಾ ಹೆಮ್ಮೆಪಡುತ್ತಿದ್ದಾನೆ .
ಅಂದು ಮನೆ ಮನೆಗೆ ಪೇಪರ್ ಹಾಕುತ್ತಿದ್ದ ವಿಶ್ವಾಸ ಈಗ ಐ ಎ ಎಸ್ ಅಧಿಕಾರಿ ಜೊತೆಗೆ ಪತ್ರಿಕೆಯೊಂದರಲ್ಲಿ ಅಂಕಣಕಾರ ಬರಹಗಾರನಾಗಿ ‘ ಸಾಧನೆ – ಶೋಧನೆ ‘ ಎಂಬ ಶೀರ್ಷಿಕೆ ಯಲ್ಲಿ ಸ್ಪೂರ್ತಿದಾಯಕ ಲೇಖನ ಬರೆಯುತ್ತಿದ್ದಾನೆ .ಊರಿನಲ್ಲಿ ಎಲ್ಲರ ಪ್ರೀತಿಗೆ ಪಾತ್ರನಾದ ವಿಶ್ವಾಸ ತನ್ನಂತೆಯೇ ಇಂದು ಯಾರು ಬಡತನದ ಬೇಗೆಯಿಂದಾಗಿ ಕಷ್ಟ ಪಟ್ಟು ಕಲಿಯುತ್ತಿದ್ದಾರೋ ಅವರೆಲ್ಲರ ಪಾಲಿಗೆ ಹೊಂಗಿರಣವನ್ನು ಬೀರುವ ಸೂರ್ಯನಂತೆ ಆದರ್ಶ ವ್ಯಕ್ತಿಯಾಗಿ ಅವರೆಲ್ಲರಿಗೂ ಬೆಳಕು ಚೆಲ್ಲುತ್ತಿದ್ದಾನೆ . ಬದುಕಿನುದ್ದಕ್ಕೂ ಅಪ್ಪನ ಪ್ರೀತಿಯಿಂದಫ ವಂಚಿತನಾದರೂ ಅಪ್ಪನನ್ನು ಸ್ಮರಿಸಿ ಆಶೀರ್ವಾದ ಪಡೆಯುತ್ತಾ ತಾಯಿಯ ಮಮತೆ ಅಕ್ಕನ ವಾತ್ಸಲ್ಯ ಗುರುಗಳು ಹೇಳಿದ ಆತ್ಮ ವಿಶ್ವಾಸದ ನುಡಿಗಳು ಪತ್ರಿಕಾ ಏಜಂಟರ ಪ್ರೀತಿಯ ಪ್ರೋತ್ಸಾಹ ಹಾಗೂ ಊರಿನ ಹಿರಿಯ ದಾನಿಗಳ ಸಹಕಾರವನ್ನು ಪ್ರತೀ ಕ್ಷಣ ನೆನೆಯುತ್ತಿದ್ದಾನೆ . ಘನತೆ ಗೌರವ ಹೊಂದಿದ ಹುದ್ದೆಯಲ್ಲಿ ವಿಶ್ವಾಸ ಸರ್ ಐ ಎ ಎಸ್ ಅಧಿಕಾರಿ ಎಂಬ ಗೌರವ ಎಲ್ಲೆಡೆ ದೊರೆಯುತ್ತಿದೆ.
– ಗಣೇಶ್ ಜಾಲ್ಸೂರು