ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ರಹಾನೆಗೆ ಸಚಿನ್ ತೆಂಡುಲ್ಕರ್ ಹೇಳಿದ್ದೇನು…?
ಟೆಸ್ಟ್ ಪಂದ್ಯವನ್ನಾಡುವುದು ಪ್ರತಿಯೊಬ್ಬನ ಕ್ರಿಕೆಟಿಗನ ಕನಸು. ಚೊಚ್ಚಲ ಟೆಸ್ಟ್ ಪಂದ್ಯದ ಸವಿ ಸವಿ ನೆನಪು ಎಂದಿಗೂ ಇರುತ್ತೆ. ಅದೇ ರೀತಿ ಅಜ್ಯಂಕ್ಯಾ ರಹಾನೆ ಕೂಡ. ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜ್ಯಂಕ್ಯಾ ರಹಾನೆ ಗಮನ ಸೆಳೆಯುವಂತಹ ಪ್ರದರ್ಶನ ನೀಡಿರಲಿಲ್ಲ. ಆದ್ರೆ ಆ ಪಂದ್ಯದ ನೆನಪು ಮಾತ್ರ ಅವಿಸ್ಮರಣೀಯವಾಗಿದೆ. ಅದ್ರಲ್ಲೂ ಚೊಚ್ಚಲ ಟೆಸ್ಟ್ ಪಂದ್ಯದ ವೇಳೆ ಮಾಸ್ಟರ್ ಬ್ಲ್ಯಾಸ್ಟರ್ ಸಚಿನ್ ತೆಂಡುಲ್ಕರ್ ನೀಡಿರುವಂತಹ ಸಲಹೆ ಹಾಗೂ ಕಿವಿ ಮಾತನ್ನು ರಹಾನೆ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಹಾಗಿದ್ರೆ ಸಚಿನ್ ರಹಾನೆ ನೀಡಿರುವ ಸಲಹೆ ಏನು ? ಅದು ರಹಾನೆ ಕ್ರಿಕೆಟ್ ಆಟದ ಮೇಲೆ ಬೀರಿದ ಪರಿಣಾಮವೇನು ಎಂಬುದನ್ನು ಅಜ್ಯಂಕ್ಯಾ ರಹಾನೆ ದೀಪ್ದಾಸ್ ಗುಪ್ತಾ ಅವರ ಜೊತೆಗಿನ ಸಂವಾದಲ್ಲಿ ಹೇಳಿಕೊಂಡಿದ್ದಾರೆ.
ಅದು 2013. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ. ಈಗಿನ (ಅರುಣ್ ಜೈಟ್ಲಿ ಕ್ರೀಡಾಂಗಣ) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ. ಆ ಪಂದ್ಯ ಅಜ್ಯಂಕ್ಯಾ ರಹಾನೆ ಪಾಲಿಗೆ ಚೊಚ್ಚಲ ಟೆಸ್ಟ್ ಪಂದ್ಯವಾಗಿತ್ತು. ನನಗೆ ಏನು ಹೇಳಬೇಕು ಎಂದು ತಿಳಿಯುತ್ತಿಲ್ಲ. ಆದ್ರೆ ಇದೊಂದು ನನಗೆ ವಿಶೇಷವಾದ ಕ್ಷಣ. ಈ ಪಂದ್ಯದಲ್ಲಿ ನಾನು ಎಷ್ಟು ರೋಮಾಂಚನಗೊಂಡಿದ್ದೇನೋ ಅಷ್ಟೇ ಒತ್ತಡಕ್ಕೂ ಸಿಲುಕಿದ್ದೆ ಎಂದು ಹೇಳ್ತಾರೆ ಅಜ್ಯಂಕ್ಯಾ ರಹಾನೆ.
ರಹಾನೆ ಭಾರತದ ಮೂರು ವಿಕೆಟ್ ಪತನಗೊಂಡ ಬಳಿಕ ಕ್ರೀಸ್ಗೆ ಆಗಮಿಸಿದ್ದರು. ಆಗ ಭಾರತದ ಮೊತ್ತ 148 ರನ್. ಇನ್ನೊಂದು ತುದಿಯಲ್ಲಿ ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ಮಾಡುತ್ತಿದ್ದರು. ನಾನು ಒತ್ತಡದಿಂದಲೇ ಕ್ರೀಸ್ನತ್ತ ಬರುತ್ತಿದೆ. ನನ್ನನ್ನು ನೋಡಿದ್ದ ಸಚಿನ್ ತೆಂಡುಲ್ಕರ್ ನನಗೆ ಕೆಲವೊಂದು ಸಲಹೆಗಳನ್ನು ನೀಡಿದ್ದರು. ಇದು ಇನ್ನೂ ನನಗೆ ನೆನಪಿದೆ ಅಂತಾರೆ ರಹಾನೆ.
ನಾನು ಬ್ಯಾಟಿಂಗ್ ಮಾಡಲು ಬಂದಾಗ ಮತ್ತೊಂದು ತುದಿಯಲ್ಲಿ ಸಚಿನ್ ಪಾಜಿ ಇದ್ರು. ಅವರು ನನಗೆ ಹೇಳಿದ್ದು ಇಷ್ಟೇ. ನೋಡು… ಒಬ್ಬ ಆಟಗಾರನಾಗಿ ನೀನು ನಿನ್ನ ಚೊಚ್ಚಲ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಬೇಕು. ಹಾಗೇ ಪ್ರತಿ ಪಂದ್ಯದಲ್ಲೂ. ಈಗ ನೀನು ಎಲ್ಲವನ್ನೂ ಮರೆತುಬಿಡಬೇಕು. ಈ ಕ್ಷಣವನ್ನು ನೀನು ಆನಂದಿಸಬೇಕು. ಹೀಗೆ ಸಚಿನ್ ಪಾಜಿ ಸಲಹೆ ನೀಡಿದ್ದರು. ಆದ್ರೆ ನನ್ನ ಚೊಚ್ಚಲ ಪಂದ್ಯ ನನಗೆ ಸಿಹಿಯಾಗಿರಲಿಲ್ಲ. ಆದ್ರೆ ಸಚಿನ್ ಪಾಜಿ ನೀಡಿರುವ ಸಲಹೆ ಮಾತ್ರ ಇಂದಿಗೂ ನೆನಪಿನಲ್ಲಿದೆ ಎಂದು ಹೇಳಿಕೊಂಡಿದ್ದಾರೆ ಅಜ್ಯಂಕ್ಯಾ ರಹಾನೆ.
ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಜ್ಯಂಕ್ಯಾ ರಹಾನೆ ಗಳಿಸಿದ್ದು ಕೇವಲ ಏಳು ರನ್ ಮಾತ್ರ. ಅದು ಕೂಡ 19 ಎಸೆತಗಳಲ್ಲಿ. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಐದು ಎಸೆತಗಳಲ್ಲಿ ಗಳಿಸಿದ್ದು ಒಂದು ರನ್. ಇನ್ನು ಮಾತು ಮುಂದುವರಿಸಿದ ರಹಾನೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋದು ಯಾವಾಗಲೂ ಸವಾಲು ಆಗಿರುತ್ತದೆ. ನಾನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೆ. (ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದೆ) ಇದು ಒಂಥರಾ ಸವಾಲು. ನೀವು ಟೀಮ್ ಇಂಡಿಯಾ ಪರ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಚೆಂಡು ಹಳೆಯದಾಗಿರುತ್ತದೆ ಎಂದ ಅವರು, ಕೆಲವೊಂದು ಬಾರಿ ನಾವು ತಾಳ್ಮೆಯಿಂದ ಇರಬೇಕಾಗುತ್ತದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು. ನಾನು ಆ ಕ್ಷಣ ನನ್ನ ಬ್ಯಾಟಿಂಗ್ ಅನ್ನು ಎಂಜಾಯ್ ಮಾಡುತ್ತಿರುತ್ತೇನೆ. ನಾನು ಭಾರತ ದೇಶಕ್ಕಾಗಿ ಆಡುತ್ತೇನೆ. ನನ್ನ ದೇಶಕ್ಕೊಸ್ಕರ ನಾನು ಆಡುತ್ತೇನೆ. ಇದು ಮಾತ್ರ ನನ್ನ ತಲೆಯಲ್ಲಿರುತ್ತದೆ ಎಂದು ಅಜ್ಯಂಕ್ಯಾ ರಹಾನೆ ಹೇಳಿದ್ದಾರೆ.