ಭಾರತೀಯ ಸೈನಿಕರ ಹತ್ಯೆಗೆ ಪ್ರತೀಕಾರ ತೀರಿಸಲು ಚೀನಾಕ್ಕೆ ಹೊರಟ 10 ಮಂದಿ ಮಕ್ಕಳು
ಅಲಿಗರ್, ಜೂನ್ 22: ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಚೀನಾಕ್ಕೆ ತೆರಳುತ್ತಿದ್ದ ಹತ್ತು ಜನ ಮಕ್ಕಳನ್ನು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಗಳು ತಡೆದು ಮಕ್ಕಳ ದೇಶ ಪ್ರೇಮ ಕಂಡು ಆಶ್ಚರ್ಯಗೊಂಡ ಘಟನೆ ಆಲಿಗರ್ ನಲ್ಲಿ ವರದಿಯಾಗಿದೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಗಡಿ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದಾಗಿನಿಂದ, ನಾಗರಿಕರು ಕೋಪಗೊಂಡಿದ್ದಾರೆ ಮತ್ತು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವ ಬಗ್ಗೆ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಆದರೆ ಉತ್ತರ ಪ್ರದೇಶದ ಆಲಿಗರ್ ನಲ್ಲಿ 7 ರಿಂದ 10 ವರ್ಷದೊಳಗಿನ 10 ಮಕ್ಕಳು ನಮ್ಮ ಜವಾನರು ಮತ್ತು ಅಧಿಕಾರಿಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಚೀನಾ ಗಡಿಗೆ ಹೋಗಲು ಹೆದ್ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಅವರನ್ನು ಪೊಲೀಸರು ತಡೆದು ಎಲ್ಲಿಗೆ ಹೊರಟಿರುವಿರಿ ಎಂದು ವಿಚಾರಿಸಿದ್ದಾರೆ. ಪೊಲೀಸರು ಅವರನ್ನು ವಿಚಾರಿಸಿದ್ದಾಗ , “ಚೀನ್ ಸೆ ಬಡ್ಲಾ ಲೆನೆ ಜಾ ರಾಹೆ ಹೈ, ಉಸ್ನೆ ಹಮರೆ ಜವಾನೋ ಕೋ ಮಾರ್ ದಿಯಾ ಹೈ” (ನಾವು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದ್ದೇವೆ , ಅವರು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದಾರೆ ) ಎಂದು ಮಕ್ಕಳು ಉತ್ತರಿಸಿದ್ದಾರೆ.
ಪೊಲೀಸರು ಮಕ್ಕಳ ದೇಶಭಕ್ತಿಯ ಮನೋಭಾವವನ್ನು ನೋಡಿ ಬೆರಗಾಗಿದ್ದು, ಮಕ್ಕಳ ತಾಯ್ನಾಡಿನ ಮೇಲಿನ ಪ್ರೀತಿಯನ್ನು ನೋಡಿ ಅವರನ್ನು ಶ್ಲಾಘಿಸಿದ್ದಾರೆ. ಬಳಿಕ ಮಕ್ಕಳಿಗೆ ಸಲಹೆ ನೀಡಿದ ಪೊಲೀಸರು,ಈಗ ಅವರವರ ಮನೆಗಳಿಗೆ ಮರಳಲು ತಿಳಿಸಿ, ಬೆಳೆದು ದೊಡ್ಡವರಾಗಿ ಉದ್ಯೋಗಕ್ಕೆ ಅರ್ಹರಾಗುವವರೆಗೂ ಶತ್ರುಗಳ ವಿರುದ್ಧ ಹೋರಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ನಾವು ಇರುವವರೆಗೂ ನೀವು ಹೋರಾಡಬೇಕಾಗಿಲ್ಲ, ನೀವು ಮನೆಯಲ್ಲಿಯೇ ಇದ್ದು ಅಧ್ಯಯನದಲ್ಲಿ ಗಮನಹರಿಸಿ ಎಂದು ಪೊಲೀಸರು ಮಕ್ಕಳಿಗೆ ತಿಳಿ ಹೇಳಿದ್ದಾರೆ.