ದಾವಣಗೆರೆ: ಕೇವಲ 25 ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳ ನೂರಾರು ಜನರ ಬ್ಯಾಂಕ್ ಖಾತೆಗಳಿಂದ ಬರೋಬ್ಬರಿ 150 ಕೋಟಿ ರೂಪಾಯಿ ದೋಚಿದ್ದ ಬೃಹತ್ ಸೈಬರ್ ವಂಚನಾ ಜಾಲದ ಪ್ರಮುಖ ಆರೋಪಿಯನ್ನು ದಾವಣಗೆರೆ ಸೈಬರ್ ಕ್ರೈಂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆ ಬೇಲೂರಿನ ಸಿಸಿ ಕ್ಯಾಮರಾ ಟೆಕ್ನಿಷಿಯನ್ ಸಯ್ಯದ್ ಅರ್ಫಾತ್ (28) ಬಂಧಿತನಾಗಿದ್ದು, ಈತನ ಬಂಧನದಿಂದ ರಾಷ್ಟ್ರವ್ಯಾಪಿ ಹಬ್ಬಿದ್ದ ಆನ್ಲೈನ್ ದರೋಡೆಯ ಭಯಾನಕ ಜಾಲವೊಂದು ಬೆಳಕಿಗೆ ಬಂದಿದೆ.
ದಾವಣಗೆರೆಯ ದೂರುದಾರನಿಂದ ಬಯಲಾದ ಸತ್ಯ
ಈ ಬೃಹತ್ ಜಾಲ ಪತ್ತೆಯಾಗಲು ಕಾರಣವಾಗಿದ್ದು ದಾವಣಗೆರೆಯಲ್ಲಿ ನಡೆದ ಒಂದು ವಂಚನೆ ಪ್ರಕರಣ. ನಗರದ ನಿಟುವಳ್ಳಿ ನಿವಾಸಿ ಎಚ್.ಎಸ್. ಪ್ರಮೋದ್ ಅವರ ಕೆನರಾ ಬ್ಯಾಂಕ್ ಖಾತೆ ಆಗಸ್ಟ್ 14 ರಂದು ದಿಢೀರ್ ಬ್ಲಾಕ್ ಆಗಿತ್ತು. ಬ್ಯಾಂಕ್ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ತಾಂತ್ರಿಕ ಕಾರಣದಿಂದ ಹೀಗಾಗಿದ್ದು, ಐದು ದಿನಗಳಲ್ಲಿ ಸರಿಹೋಗುತ್ತದೆ ಎಂದು ತಿಳಿಸಿದ್ದರು. ಆದರೆ ಆಗಸ್ಟ್ 25 ರಂದು ಪ್ರಮೋದ್ ಅವರು ತಮ್ಮ ಖಾತೆಯನ್ನು ಪರಿಶೀಲಿಸಿದಾಗ, ಅದರಲ್ಲಿ ಕೇವಲ 4,956 ರೂಪಾಯಿ ಉಳಿದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ತಮ್ಮ ಖಾತೆಯಿಂದ ಬರೋಬ್ಬರಿ 52,60,523 ರೂಪಾಯಿ ಮಾಯವಾಗಿರುವುದನ್ನು ಕಂಡು ತಕ್ಷಣ ಬ್ಯಾಂಕ್ ವ್ಯವಸ್ಥಾಪಕರನ್ನು ವಿಚಾರಿಸಿದಾಗ, ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆಯಾಗಿರುವ ಮಾಹಿತಿ ಲಭಿಸಿದೆ. ತಾನು ಯಾವುದೇ ವ್ಯವಹಾರ ನಡೆಸಿಲ್ಲವೆಂದು ಅರಿತ ಪ್ರಮೋದ್, ತಕ್ಷಣವೇ ದಾವಣಗೆರೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದರು.
ಪೊಲೀಸರ ಚಾಣಾಕ್ಷ ತನಿಖೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಪೊಲೀಸರ ತಂಡ, ತನಿಖೆ ಆರಂಭಿಸಿತು. ಹಣ ವರ್ಗಾವಣೆ ಮಾಡಲು ಬಳಸಲಾಗಿದ್ದ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಹೊರಟ ಪೊಲೀಸರಿಗೆ, ಆ ಸಂಖ್ಯೆ ಹಾಸನದ ಬೇಲೂರಿನಲ್ಲಿ ಸಕ್ರಿಯವಾಗಿರುವುದು ತಿಳಿಯಿತು. ತಕ್ಷಣ ಕಾರ್ಯಪ್ರವೃತ್ತರಾದ ತಂಡ, ಸಿಸಿ ಕ್ಯಾಮರಾ ಕೆಲಸಗಾರನ ಸೋಗಿನಲ್ಲಿದ್ದ ಸಯ್ಯದ್ ಅರ್ಫಾತ್ನನ್ನು ಬಂಧಿಸಿತು. ಆತನ ಮೊಬೈಲ್ ಫೋನ್ ವಶಕ್ಕೆ ಪಡೆದು ಪರಿಶೀಲಿಸಿದಾಗ, ಪೊಲೀಸರೇ ದಂಗಾಗುವಂತಹ ಸತ್ಯಗಳು ಹೊರಬಿದ್ದವು.
ಮೊದಲಿಗೆ, ದಾವಣಗೆರೆ ನ್ಯಾಯಾಲಯದ ಆದೇಶದ ಮೇರೆಗೆ, ಪೊಲೀಸರು ಪ್ರಮೋದ್ ಅವರಿಗೆ ಕಳೆದುಹೋಗಿದ್ದ 52,60,400 ರೂಪಾಯಿಗಳನ್ನು ಮರಳಿ ಕೊಡಿಸುವಲ್ಲಿ ಯಶಸ್ವಿಯಾದರು.
ಬಯಲಾದ ರಾಷ್ಟ್ರವ್ಯಾಪಿ 150 ಕೋಟಿ ವಂಚನೆ ಜಾಲ
ಸಯ್ಯದ್ ಅರ್ಫಾತ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಇದೊಂದು ಸಣ್ಣಪುಟ್ಟ ವಂಚನೆಯಲ್ಲ, ಬದಲಿಗೆ ದೇಶದ ಹಲವು ರಾಜ್ಯಗಳಲ್ಲಿ ಬೇರುಬಿಟ್ಟಿರುವ ಬೃಹತ್ ಜಾಲ ಎಂಬುದು ಸ್ಪಷ್ಟವಾಯಿತು. ಆರೋಪಿಗಳ ಚಾಲ್ತಿ ಖಾತೆಯನ್ನು ಪರಿಶೀಲಿಸಿದಾಗ, ಜುಲೈ 27 ರಿಂದ ಆಗಸ್ಟ್ 19 ರವರೆಗಿನ ಕೇವಲ 25 ದಿನಗಳ ಅವಧಿಯಲ್ಲಿ ಸುಮಾರು 150 ಕೋಟಿ ರೂಪಾಯಿ ಜಮೆಯಾಗಿರುವುದು ಪತ್ತೆಯಾಗಿದೆ.
ಈ ಜಾಲವು ಉತ್ತರ ಪ್ರದೇಶದ ಗಾಜಿಯಾಬಾದ್, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಆಂಧ್ರಪ್ರದೇಶದ ಏಲೂರು, ಮಹಾರಾಷ್ಟ್ರದ ಮುಂಬೈ ಹಾಗೂ ಕರ್ನಾಟಕದ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ದಾಖಲಾದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದೆ.
132 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು?
ಆರೋಪಿಗಳು ತಮ್ಮ ಖಾತೆಗೆ ಜಮೆಯಾದ 150 ಕೋಟಿ ರೂಪಾಯಿಗಳಲ್ಲಿ, ಕಣ್ಣು ಮಿಟುಕಿಸುವುದರೊಳಗೆ 132 ಕೋಟಿ ರೂಪಾಯಿಗಳನ್ನು ವಿತ್ಡ್ರಾ ಮಾಡಿಕೊಂಡಿದ್ದಾರೆ. ಈ ಹಣವನ್ನು ಯಾರಿಗೆ ವರ್ಗಾಯಿಸಲಾಗಿದೆ ಅಥವಾ ಯಾವ ರೂಪದಲ್ಲಿ ಬಚ್ಚಿಡಲಾಗಿದೆ ಎಂಬುದು ಈಗ ತನಿಖೆಯ ಕೇಂದ್ರಬಿಂದುವಾಗಿದೆ. ಈ ಹಣ ಭಯೋತ್ಪಾದಕ ಚಟುವಟಿಕೆಗಳಿಗೆ ಅಥವಾ ಇತರ ದೇಶವಿರೋಧಿ ಕೃತ್ಯಗಳಿಗೆ ಬಳಕೆಯಾಗಿರುವ ಶಂಕೆಯನ್ನೂ ಪೊಲೀಸರು ತಳ್ಳಿಹಾಕಿಲ್ಲ.
ಪ್ರಸ್ತುತ ಆರೋಪಿಯ ಖಾತೆಯಲ್ಲಿದ್ದ 18 ಕೋಟಿ ರೂಪಾಯಿಗಳನ್ನು ಪೊಲೀಸರು ಫ್ರೀಜ್ ಮಾಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಸದ್ಯಕ್ಕೆ ಬಂಧಿತ ಸಯ್ಯದ್ ಅರ್ಫಾತ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾವಣಗೆರೆ ಪೊಲೀಸರ ಈ ಕಾರ್ಯಾಚರಣೆ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.








