ಬೀದರ್: ಸತತ ಮಳೆಯಿಂದಾಗಿ ಬೀದರ್ ಜಿಲ್ಲೆಯಾದ್ಯಂತ ರೈತರ ಮುಂಗಾರು ಹಂಗಾಮಿನ ಬೆಳೆಗಳು ನೀರು ಪಾಲಾಗಿದ್ದು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಧನ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಅತಿವೃಷ್ಠಿ ಪೀಡಿತ ಪ್ರದೇಶಗಳಲ್ಲಿ ವೀಕ್ಷಣೆ ನಡೆಸಿ ರೈತರ ಬೆಳೆಗಳ ಹಾನಿ ನೋಡಿ ಸರ್ಕಾರ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು. ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಾದ ಮಹಾಮಳೆಗೆ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಉದ್ದು, ಹೆಸರು, ಸೋಯಾಬಿನ್, ತೊಗರಿ, ಕಬ್ಬು, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಸಮಾರೋಪಾದಿಯಲ್ಲಿ ಪ್ರವಾಹ ನಿರ್ವಹಿಸಲು ಜಿಲ್ಲೆಗೆ ತಕ್ಷಣ 100 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.
ಬ್ಯಾಲಹಳ್ಳಿ ಗ್ರಾಮದ ಹೊರ ವಲಯದ ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿ ಜಲಾಶಯದಲ್ಲಿ 7.69 ಟಿಎಂಸಿ ನೀರಿನ ಸಂಗ್ರಹ ಸಾಮಥ್ರ್ಯ ಇದ್ದು ಜಿಲ್ಲೆಯಲ್ಲಿ ಈ ಬಾರಿ ವ್ಯಾಪಕ ಮಳೆಯಾದ ಪರಿಣಾಮ ಇದುವರೆಗೆ 4 ಟಿಎಂಸಿ ನೀರು ಸಂಗ್ರಹವಾಗಿದೆ ಎಂದರು.
ಮಳೆಯಿಂದ ಕೊಚ್ಚಿ ಹೋದ ಬ್ಯಾಲಹಳ್ಳಿ ಗ್ರಾಮದ ವೃದ್ಧ ಹಾಗೂ ಸಿಡಿಲು ಬಡಿದು ಸಾವನಪ್ಪಿದ್ದ ಅರ್ಜುನ್ ಎಂಬಾತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ.ಮೌಲ್ಯದ ಪರಿಹಾರ ಚೆಕ್ ವಿತರಿಸಿದರು. ಈ ವೇಳೆಯಲ್ಲಿ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಉಪಸ್ಥಿತರಿದ್ದರು.








