ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಸ್ಮರಣಾರ್ಥ 82 ಸದಸ್ಯರ ಸಮಿತಿ ರಚನೆ- Saaksha Tv
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಸ್ಮರಣಾರ್ಥ ಕೇಂದ್ರ ಸರಕಾರವು 82 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ಎಚ್.ಡಿ.ದೇವೇಗೌಡ, ಡಾ.ಮನಮೋಹನ್ ಸಿಂಗ್ ಹಲವರು ಇದ್ದಾರೆ.
ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜನ್ಮ ದಿನೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಪ್ರಮುಖ ರಾಜಕೀಯ ನಾಯಕರು, ಸಾಂಸ್ಕೃತಿಕ ಪ್ರಮುಖರು ಹಾಗೂ ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದೆ.
ಸಮಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆವಹಿಸಿದ್ದು, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಡಾ.ಮನಮೋಹನ್ ಸಿಂಗ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಹಿರಿಯ ನಟ ಮಿಥುನ್ ಚಕ್ರವರ್ತಿ ಮತ್ತು ನಟಿ ಕಾಜೋಲ್ ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಸಮಿತಿಯಲ್ಲಿದ್ದಾರೆ.
ಇದರಲ್ಲಿ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಸಲಹೆಗಾರ ಅಮಿತ್ ಖರೆ, ಪಶ್ಚಿಮ ಬಂಗಾಳ, ಮಣಿಪುರ ರಾಜ್ಯಪಾಲರು, ಒಡಿಶಾ, ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮುಖ್ಯಮಂತ್ರಿಗಳು ಮತ್ತು ರಾಜ್ಯಸಭೆಯ ಉಪ ಸಭಾಪತಿ, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೂ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅಲ್ಲದೇ, ಎನ್ಸಿಪಿ ವರಿಷ್ಠ ಶರದ್ ಪವಾರ್, ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಕೂಡ 82 ಜನ ಸದಸ್ಯರ ಸಮಿತಿಯಲ್ಲಿ ಇದ್ದು, ನೇತಾಜಿ ಬೋಸ್ ಅವರ ಪುತ್ರಿ ಅನಿತಾ ಬೋಸ್, ಅವರ ಸೋದರಳಿಯ ಅರ್ಧೇಂದು ಬೋಸ್, ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಮತ್ತು ಮೊಮ್ಮಗಳು ರೇಣುಕಾ ಮಾಲಕರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿಯ ಪದಾಧಿಕಾರಿಗಳನ್ನೂ ಸಮಿತಿ ಒಳಗೊಂಡಿದೆ.
ಪತ್ರಕರ್ತ ಕಾಂಚನ್ ಗುಪ್ತಾ, ಲೇಖಕ, ಶಿಕ್ಷಣ ತಜ್ಞ ಅನಿರ್ಬನ್ ಗಂಗೂಲಿ, ಭಾರತೀಯ ರಾಷ್ಟ್ರೀಯ ಫುಟ್ಬಾಲ್ ತಂಡದ ಮಾಜಿ ಆಟಗಾರ ಸುಬ್ರತಾ ಭಟ್ಟಾಚಾರ್ಯ, ಚಲನಚಿತ್ರ ನಿರ್ಮಾಪಕ ಕೌಶಿಕ್ ಗಂಗೂಲಿ, ಮೇದಾಂತ ಆಸ್ಪತ್ರೆಯ ರವಿ ಕಾಸ್ಲಿವಾಲ್ ಮತ್ತು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸುವೀರಾನಂದ ಮಹಾರಾಜ್ ಕೂಡ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.