ಬೆಂಗಳೂರು : ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ಕಾಲದಮಿತಿಯೊಳಗೆ ಪೂರ್ಣಗೊಳಿಸುವ ಸಂಕಲ್ಪಕ್ಕೆ ಬದ್ಧವಾಗಿದೆ. ಮೊದಲ ಹಂತದ ಯೋಜನೆಯು ಮಾರ್ಚ್ 2021 ಕ್ಕೆ ಪ್ರಾರಂಭವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸೋಮವಾರ ಎತ್ತಿನಹೊಳೆ ಯೋಜನೆ ಕುರಿತಂತೆ ಜನ ನಿಗಮದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯುತ್ ಶಕ್ತಿ ಪೂರೈಸುವ ಕಾಮಗಾರಿಯನ್ನು ಕಾಲದಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 5 ಸಿವಿಲ್ ಹಾಗೂ 2 ಎಲೆಕ್ಟ್ರಿಕಲ್ ಪ್ಯಾಕೇಜ್ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಇನ್ನು ಯೋಜನೆಯ ಹಲವಾರು ಪ್ರದೇಶಗಳಲ್ಲಿ ಭೂಸ್ವಾಧೀನದ ಪ್ರಕ್ರಿಯೆ ಇನ್ನೂ ಮುಕ್ತಾಯಗೊಂಡಿಲ್ಲ. ರೈತರ ಮನವೊಲಿಸಿ ಪರಿಹಾರ ಒದಗಿಸಬೇಕು. ಮುಂದಿನ ವರ್ಷದ ಮಾರ್ಚ್ ಒಳಗೆ ಯೋಜನೆಯ ಮೊದಲ ಹಂತ ಮುಗಿಯಲೇಬೇಕು. ಮುಂದಿನ ಮಳೆಗಾಲದ ಸಂದರ್ಭ ನೀರು ಹರಿಯುವಂತೆ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.








