ಶಾಲೆಗಳಿಗೆ ರಜೆ ನೀಡಬೇಡಿ, ಮಕ್ಕಳು ಮತ್ತಷ್ಟು ಹಾಳಾಗುತ್ತಾರೆ : ಸಭಾಪತಿ ಬಸವರಾಜ ಹೊರಟ್ಟಿ Saaksha Tv
ಬೆಂಗಳೂರು : ಕೊರೊನಾ ಮೊದಲೆರಡು ಅಲೆಗಿಂತ ಅಲೆ ಅಷ್ಟು ಪರಿಣಾಮಕಾರಿಯಾಗಿಲ್ಲ, ಹಾಗಾಗಿ ಶಾಲಾ- ಕಾಲೇಜು ರಜೆ ನೀಡಬೇಡಿ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಶಾಲೆಗಳಿಗೆ ರಜೆ ಕೊಡುವುದು ಬೇಡ. ರಜೆ ನೀಡಿದರೆ ಮಕ್ಕಳ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಅಂತರವನ್ನು ಕಾಪಾಡಿಕೊಂಡು ಶಾಲೆ ನಡೆಸಿ. ನಿಯಮ ಪಾಲಿಸಿ ಮಕ್ಕಳಿಗೆ ಪಾಠ ಮಾಡುವುದು ಉತ್ತಮ. ಇದೇ ರೀತಿ ಶಾಲೆಗೆ ರಜೆ ಕೊಟ್ಟರೆ ಮಕ್ಕಳು ಮತ್ತಷ್ಟು ಹಾಳಾಗುತ್ತಾರೆ. ಬೇಕಿದ್ದರೆ 1 ರಿಂದ 5ರವರೆಗೆ ಶಾಲೆಗಳಿಗೆ ರಜೆ ನೀಡಿ, 6 ರಿಂದ ಕಾಲೇಜು ಹಂತದ ಎಲ್ಲಾ ತರಗತಿಗಳನ್ನು ನಡೆಸಿ ಎಂದರು.
ಜಿಲ್ಲಾಧಿಕಾರಿಗಳಿಗೆ ಶಾಲೆಗಳ ಅಧಿಕಾರ ನೀಡುವುದು ಸರಿಯಲ್ಲ. ಶಾಲೆಗಳಿಗೆ ರಜೆ ಕೊಡುವ ನಿರ್ಧಾರ ಸರಕಾರವೇ ತೆಗೆದುಕೊಳ್ಳಬೇಕು. ಒಂದೊಂದು ಜಿಲ್ಲೆಗೆ ಒಂದು ರೀತಿ ಬೇಡ. ತೆಗೆದುಕೊಂಡರೆ ಒಂದೇ ತೀರ್ಮಾನ ತೆಗೆದುಕೊಳ್ಳಿ. ವಿದ್ಯಾಗಮನ ಅಂತಾ ಮಾಡಿದ್ದರು ಆದರೆ ಅದಕ್ಕೆ ಅಸಮಾಧಾನ ವ್ಯಕ್ತವಾಯಿತು. ಗುಡಿಯಲ್ಲಿ, ಮರದ ಕೆಳಗೆ ಶಿಕ್ಷಣ ನೀಡುವುದು ಸರಿಯಲ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಆನ್ಲೈನ್ ಶಿಕ್ಷಣವೂ ಸರಿಯಲ್ಲ. ಆನ್ಲೈನ್ ಶಿಕ್ಷಣ ಸಿಟಿಗೆ ಮಾತ್ರ ಅನ್ವಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಗಲ್ಲ. ನೆಟ್ವರ್ಕ್ ಇರಲ್ಲ, ಕರೆಂಟ್ ಇರಲ್ಲ, ಮೊಬೈಲ್ ಇರಲ್ಲ. ಅಂತಹ ಮಕ್ಕಳಿಗೆ ಶಿಕ್ಷಣ ನೀಡುವುದು ಕಷ್ಟವಾಗುತ್ತದೆ. ಶ್ರೀಮಂತರ ಮಕ್ಕಳು ಕಲಿಯುತ್ತಾರೆ. ಬಡ ಮಕ್ಕಳು ಶಿಕ್ಷಣದಿಂದ ಹಿಂದೆ ಬೀಳ್ತಾರೆ ಎಂದರು.








