ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ನ್ಯಾನೊ ಉಪಗ್ರಹ ತಯಾರಿಕೆ Saaksha Tv
ಬೆಂಗಳೂರು: ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ ನ್ಯಾನೋ ಉಪಗ್ರಹವನ್ನು ವಿನ್ಯಾಸಗೊಳಿಸಿ, ಉಡಾಯಿಸುವ ಯೋಜನೆಗೆ 1.90 ಕೋಟಿ ಬಿಡುಗೊಡೆ ಮಾಡಲು ಆದೇಶಿಸಲಾಗಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಮತ್ತು ಇದನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲಾಗುವುದು. ಈ ಯೋಜನೆಗೆ ಬೆಂಗಳೂರಿನ ಆಯ್ದ ಒಂದು ಸರಕಾರಿ ಶಾಲೆಯಿಂದ ಪ್ರಾಯೋಗಿಕವಾಗಿ ಒಂದು ನ್ಯಾನೊ ಉಪಗ್ರಹವನ್ನು ವಿನ್ಯಾಸಗೊಳಿಸಿ ಉಡಾಯಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜಯನ್ನು ತಾಂತ್ರಿಕ ತಜ್ಞರ ಸಮಿತಿಯು ಉಸ್ತುವಾರಿ ವಹಿಸಲಿದ್ದು, ಕೆಜಿಎಸ್3ಸ್ಯಾಟ್ ಯೋಜನೆಯಡಿ ಇದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜೊತೆಗೆ ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆಯ `ಇನ್-ಸ್ಪೇಸ್’ ವಿಭಾಗವು ಕೂಡ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ. ಒಂದು ವರ್ಷದ ಅವಧಿಯಲ್ಲಿ ನನಸಾಗಲಿರುವ ಯೋಜನೆಗೆ ಇಸ್ರೋ ಮತ್ತು ಭಾರತೀಯ ತಂತ್ರಜ್ಞಾನ ಕಾಂಗ್ರೆಸ್ ಒಕ್ಕೂಟದ (ಐಟಿಸಿಎ) ಸಹಯೋಗವನ್ನೂ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.








