ಮಳಿಗೆ ಮೇಲಿಂದ ಜಿಗಿದು ಪ್ರಾಣ ಉಳಿಸಿಕೊಂಡ ತಾಯಿ ಮಗಳು – Saaksha Tv
ಕಾರವಾರ: ಮಳಿಗೆಗೆ ಬೆಂಕಿ ತಗುಲಿದ್ದು, ಮಳಿಗೆ ಮೇಲಿನ ಮನೆಯಲ್ಲಿದ್ದ ತಾಯಿ, ಮಗಳು ಹೊರಕ್ಕೆ ಜಿಗಿದು ಜೀವ ಉಳಿಸಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನಟರಾಜ ರಸ್ತೆಯಲ್ಲಿ ನಡೆದಿದೆ.
ಭಾರತಿ ಮಡಿವಾಳ್ ಹಾಗೂ ಈಕೆಯ ಮಗಳು ಮೇಘನಾ ಮಡಿವಾಳ ಪ್ರಾಣಾಪಾಯದಿಂದ ಪಾರಾದವರು. ಇಂದು ಬೆಳಗ್ಗೆ ನಟರಾಜ ರಸ್ತೆಯ ಎರಡು ಅಂಗಡಿಗಳಿಗೆ ಶಾರ್ಟ್ ಸಕ್ರ್ಯೂಟ್ನಿಂದಾಗಿ ಬೆಂಕಿ ತಗುಲಿದೆ. ಈ ವೇಳೆ ಮಳಿಗೆ ಮನೆಯಲ್ಲಿ ವಾಸವಿದ್ದ ತಾಯಿ, ಮಗಳು ಹೊರಕ್ಕೆ ಬರಲಾರದ ಸ್ಥಿತಿ ನಿರ್ಮಾಣವಾಗಿತ್ತು. ಆಗ ತಾಯಿ, ಮಗಳಿಬ್ಬರೂ ಪ್ರಾಣ ಉಳಿಸಿಕೊಳ್ಳಲು ಮಾಳಿಗೆಯಿಂದ ಜಿಗಿದಿದ್ದಾರೆ. ಈ ವೇಳೆ ಸ್ಥಳೀಯರು ಅವರನ್ನು ಚಾದರ ಬಳಸಿ ಹಿಡಿದು ರಕ್ಷಣೆ ಮಾಡಿದ್ದಾರೆ.
ಮಳಿಗೆಗೆ ಬೆಂಕಿ ತಗುಲಿದ್ದರಿಂದ ಭಾರತಿ ಅವರಿಗೆ ಸೇರಿದ್ದ ಮೇಘನಾ ಟೇಲರ್ ಅಂಗಡಿ, ಪಕ್ಕದಲ್ಲಿರುವ ರಂಗನಾಥ ರಾಯ್ಕರ್ ಅವರಿಗೆ ಸೇರಿದ ಬ್ಯೂಟಿಕ್ ಪರ್ಲ್ ಮಳಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಉಪಕರಣಗಳು ಸುಟ್ಟು ಹೋಗಿವೆ.
ಇದೀಗ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಸ್ಥಳಕ್ಕೆ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.









