ದಂಬಂಗ್ ನಟಿಗೆ ಜಾಮೀನು ರಹಿತ ವಾರೆಂಟ್ ಜಾರಿ….
2019 ರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ವಾರೆಂಟ್ ಜಾರಿಯಾಗಿದೆ. ಮುಂದಿನ ತಿಂಗಳು ಉತ್ತರ ಪ್ರದೇಶದ ಮೊರಾದಾಬಾದ್ ನ್ಯಾಯಾಲಯಕ್ಕೆ ಹಾಜರಾಗುವಂತೆ ನಟಿಗೆ ಸೂಚನೆ ನೀಡಲಾಗಿದೆ. ಪ್ರಮೋದ್ ಶರ್ಮಾ ಎಂಬ ಈವೆಂಟ್ ಆಯೋಜಕರು ಸೋನಾಕ್ಷಿ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ನಂಬಿಕೆ ಉಲ್ಲಂಘನೆಯ ಆರೋಪದಡಿ ಕೋರ್ಟ್ ಮೆಟ್ಟಿಲೇರಿದ್ದರು..
ವರದಿಗಳ ಪ್ರಕಾರ, ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸೋನಾಕ್ಷಿ ಸಿನ್ಹಾ ಮುಖ್ಯ ಅತಿಥಿಯಾ ಕಾಣಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಸೋನಾಕ್ಷಿಗೆ ಮುಂಗಡವಾಗಿ 28 ಲಕ್ಷ ರೂ. ನೀಡಲಾಗಿತ್ತು. ಆದರೆ, ನಟಿ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ಹಾಗಾಗಿ ಮುಂಗಡ ಹಣವನ್ನು ಮರು ಪಡೆಯಲು ಪದೇ ಪದೇ ಪ್ರಯತ್ನಿಸಿದ, ಕಾರ್ಯಕ್ರಮ ಆಯೋಜಕ ಪ್ರಮೋದ್ ಶರ್ಮಾ ಅವರು 2019 ರಲ್ಲಿ ನಟಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಇದೀಗ ವಂಚನೆ ಪ್ರಕರಣದಲ್ಲಿ ನಟಿಯ ವಿರುದ್ಧ ಮೊರಾದಾಬಾದ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ ಅಷ್ಟೇ ಅಲ್ಲ, ಏಪ್ರಿಲ್ 25 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೋನಾಕ್ಷಿಗೆ ಕೋರ್ಟ್ ಸೂಚಿಸಿದೆ.
ಹಿಂದಿನ ವರದಿಗಳ ಪ್ರಕಾರ, ಕಾರ್ಯಕ್ರಮದ ದಿನದಂದು ಸೋನಾಕ್ಷಿ ಅವರ ತಂಡ, ಸಮಯವನ್ನು ಬದಲಾಯಿಸುವಂತೆ ಒತ್ತಾಯಿಸಿತು. ಸಂಘಟಕರು ಈ ಬೇಡಿಕೆಗೆ ನಿರಾಕರಿಸಿದ್ದರು. ಸೋನಾಕ್ಷಿ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು ಎಂದು ವರದಿಯಾಗಿತ್ತು. ಈ ಬಗ್ಗೆ ಸೋನಾಕ್ಷಿ ಸಿನ್ಹಾ ಯಾವುದೇ ಪ್ರತಿಕ್ರಿಯೆಯನ್ನ ಇಲ್ಲಿಯವರೆಗೂ ನೀಡಿಲ್ಲ.








