ಜಗದೀಶ್ ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ. ಬಣಗಳು ಇರುವುದು ಬಿಜೆಪಿಯಲ್ಲಿ : ಸಿದ್ದರಾಮಯ್ಯ
ಹುಬ್ಬಳ್ಳಿ: ಭಗವದ್ಗೀತೆ ಬಗ್ಗೆ ನಮ್ಮದು ಯಾವುದೇ ವಿರೋಧ ಇಲ್ಲ. ಸಂವಿಧಾನದ ಪ್ರಕಾರ ಮಾಡಲಿ, ಸಂವಿಧಾನ ಧರ್ಮ ನಿರಪೇಕ್ಷತೆ ಬಗ್ಗೆ ಹೇಳುತ್ತದೆ. ಜಾತ್ಯಾತೀತ ಮನೋಭಾವ ಬೆಳೆಯಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗುಜರಾತ್ನಲ್ಲಿ ಭಗವದ್ಗೀತೆ ಪಠ್ಯದಲ್ಲಿ ಸೇರಿಸಲು ಕ್ರಮ ತೀರ್ಮಾನ ತೆಗೆದುಕೊಂಡಿದ್ದಾರೆ. ಮಕ್ಕಳಿಗೆ ನೈತಿಕ ಶಿಕ್ಷಣ ಬೇಕು, ಅದರ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಸಹ ಕೊಡಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಎಲ್ಲರೂ ರಾಹುಲ್ ಹಾಗೂ ಸೋನಿಯಾ ಗಾಂಧಿ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಪಕ್ಷ ಬಲಪಡಿಸುವ ಬಗ್ಗೆ ಸಿಡಬ್ಲೂಸಿ ಸಭೆಯಲ್ಲಿ ಚರ್ಚೆಯಾಗಿದೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದಾರೆ. ಕಾಂಗ್ರೆಸ್ ಚುನಾವಣೆ ಎದುರಿಸಲು ಸಿದ್ಧವಾಗಿದೆ. ಯಾವಾಗ ಚುನಾವಣೆ ನಡೆದರೂ ನಾವು ರೆಡಿ. ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಪಕ್ಷ ಸಂಘಟನೆ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಹೇಳಿದರು.
ಹಾಗೇ ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಜ್ಯದಲ್ಲಿ ಯಾವಾಗಲಾದರೂ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ಯಾ? 2008, 2018ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬಹುದು, ಆದರೆ ಆಪರೇಷನ್ ಕಮಲ ಮಾಡಿನೇ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಲಿದೆ. ಜಗದೀಶ್ ಶೆಟ್ಟರ್ ಮಾತಿಗೆ ಯಾವ ಕಿಮ್ಮತ್ತು ಇಲ್ಲ. ಅವರು ಸಿಎಂ ಆಗಿದ್ದಾಗ ಎಷ್ಟು ಸೀಟು ಬಂತು ಗೊತ್ತಿಲ್ವಾ ಎಂದು ಕಾಲೆಳೆದರು.
ಸಿಎಂ ಆಕಾಂಕ್ಷಿಗಳು ಇರುವುದು ತಪ್ಪಾ? ಅಂತಿಮವಾಗಿ ಯಾರು ಸಿಎಂ ಆಗಬೇಕು ಎನ್ನುವುದು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿಯಲ್ಲಿ ಯಾವುದೇ ಜಗಳ ಇಲ್ವಾ? ಯತ್ನಾಳ್ ಏನು ಮಾಡುತ್ತಿದ್ದಾರೆ, ಜಗದೀಶ್ ಶೆಟ್ಟರ್ ಯಾಕೆ ಸಂಪುಟ ಸೇರಲಿಲ್ಲ. ಬಣಗಳು ಇರುವುದು ಬಿಜೆಪಿಯಲ್ಲಿ, ಆದರೆ ನಮ್ಮಲ್ಲಿ ಯಾವುದೇ ಬಣ ಇಲ್ಲ. ನಮ್ಮಲ್ಲಿ ಇರುವುದು ಒಂದೇ ಬಣ ಅದು ಸೋನಿಯಾ ಗಾಂಧಿ ಬಣ. ಬಿಜೆಪಿಯಲ್ಲಿ ಕಾಂಗ್ರೆಸ್ನಿಂದ ಹೋದವರು, ಆರ್ಎಸ್ಎಸ್ನವರು, ಜೆಡಿಯುನಿಂದ ಹೋದವರು ಎಂದು ಟೀಕಿಸಿದರು.









