144 ಸೆಕ್ಷನ್ ಹಿಂಪಡೆದ ಹು-ಧಾ ಪೊಲೀಸ್ ಆಯುಕ್ತರು
ಹುಬ್ಬಳ್ಳಿ: ಏಪ್ರಿಲ್ 16 ರಂದು ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಾಭೆ ಸಂಬಂಧ, ಜಾರಿಗೊಳಸಲಾಗಿದ್ದ ನಿಷೇಧಾಜ್ಞೆಯನ್ನು ಹಿಂಪಡಿಯಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ತಿಳಿಸಿದ್ದಾರೆ.
ಗಲಭೆ ಹಿನ್ನೆಲೆಯಲ್ಲಿ ನಗರದ ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿದ್ದರು. ಸದ್ಯ ಪರಿಸ್ಥಿತಿ ಶಾಂತವಾದ ಹಿನ್ನೆಲೆ ಕಲಂ 144 ಸೆಕ್ಷನ್ನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಗಲಭೆ ನಡೆದ ರಾತ್ರಿಯಿಂದಲೇ ನಗರದಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಬಳಿಕ ಏ.20 ರಿಂದ 23ರ ಬೆಳಗ್ಗೆ 6 ಗಂಟೆವರೆಗೆ ದಕ್ಷಿಣ ಉಪ ವಿಭಾಗದಲ್ಲಿ ನಿಷೇಧಾಜ್ಞೆ ಮುಂದುವರಿಸಿದ್ದರು. ಇದೀಗ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆ ಎಲ್ಲೆಡೆ ನಿಷೇಧಾಜ್ಞೆ ಕೈಬಿಟ್ಟಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಈವರೆಗೆ 138 ಮಂದಿಯನ್ನು ಬಂಧಿಸಲಾಗಿದೆ. ಕಲಬುರಗಿ ನಂತರ ಗಲಭೆಕೋರರನ್ನು ಬಳ್ಳಾರಿ ಮತ್ತು ಮೈಸೂರು ಜೈಲಿಗೆ ರವಾನೆ ಮಾಡಲಾಗಿದೆ. ಕಳೆದ ಮಂಗಳವಾರ 103 ಆರೋಪಿಗಳನ್ನು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.
ನಿನ್ನೆ(ಶನಿವಾರ) ಬಳ್ಳಾರಿಗೆ 15 ಹಾಗೂ ಮೈಸೂರಿಗೆ 10 ಮಂದಿ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ. ಮೂವರು ಗಲಭೆಕೋರರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಬಂಧಿತ ಒಟ್ಟು 138 ಜನರಲ್ಲಿ ಮೂವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.