ಸೋಮಶೇಖರ್ ಶಿರಗುಪ್ಪಿ… ಕರ್ನಾಟಕದ ಅದ್ಭುತ ವಿಕೆಟ್ ಕೀಪರ್ಗಳಲ್ಲಿ ಒಬ್ಬರು. ಧಾರವಾಡ ಮೂಲದ ಸೋಮಶೇಖರ್ ಶಿರುಗುಪ್ಪಿ ಅವರನ್ನು ಎಲ್ಲರೂ ಪ್ರೀತಿಯಿಂದ ಕರೆಯುವುದು ಶಿರು ಅಂತನೇ. ಕರ್ನಾಟಕದ ಮೂರು ರಣಜಿ ಟ್ರೋಫಿ ಹಾಗೂ ಎರಡು ಬಾರಿ ಇರಾನಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಹಿರಿಮೆ ಇವರದ್ದು. ಆಡಿದ್ದು 41 ಪ್ರಥಮ ದರ್ಜೆಯ ಪಂದ್ಯಗಳನ್ನಾದ್ರೂ ಮಾಡಿರುವುದು ಮಾತ್ರ ಅದ್ಭುತ ಸಾಧನೆಯೇ ಸರಿ. ದೇಸಿ ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಶಿರು ಟೀಮ್ ಇಂಡಿಯಾದ ಕದ ಕೂಡ ತಟ್ಟಿದ್ದರು. ಆದ್ರೆ ಟೀಮ್ ಇಂಡಿಯಾದಲ್ಲಿ ಆಡುವ ಅದೃಷ್ಟ ಮಾತ್ರ ಸಿಗಲಿಲ್ಲ.
ಟೀಮ್ ಇಂಡಿಯಾಗೆ ಆಡಲಿಲ್ಲ ಅನ್ನೋ ಬೇಸರವಿದ್ರೂ ಕ್ರಿಕೆಟ್ ತನಗೆ ಎಲ್ಲವನ್ನೂ ಕೊಟ್ಟಿದೆ ಎಂಬ ಆತ್ಮತೃಪ್ತಿ ಅವರಲ್ಲಿದೆ. ಸಾಕ್ಷಾ ಟಿವಿ ಡಾಟ್ ಕಾಮ್ ನ ಸೂಪರ್ ಓವರ್ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿರಗುಪ್ಪಿಯವರು ತಮ್ಮ ಕ್ರಿಕೆಟ್ ಬದುಕಿನ ಅವಿಸ್ಮರಣೀಯ ದಿನಗಳನ್ನು ನೆನಪಿಸಿಕೊಂಡ್ರು. ವಿಕೆಟ್ ಕೀಪರ್ ಆಗಿ, ಬ್ಯಾಟ್ಸ್ ಮೆನ್ ಆಗಿ, ತರಬೇತುದಾರನಾಗಿ, ಲೇಖಕನಾಗಿ ಗಮನ ಸೆಳೆದಿರುವ ಶಿರು ಕ್ರಿಕೆಟ್ ಮೇಲಿನ ಪ್ರೀತಿ ಎಷ್ಟಿದೆ ಎಂಬುದನ್ನು ಅವರ ಪ್ರತಿಯೊಂದು ಮಾತುಗಳು ಸಾಕ್ಷಿಯಾಗುತ್ತಿವೆ.
ಅಂದ ಹಾಗೇ ಸೋಮಶೇಖರ್ ಶಿರಗುಪ್ಪಿಯವರು ಕೂಡ ಎಲ್ಲರಂತೆ ತಾನು ಕ್ರಿಕೆಟ್ ಆಟಗಾರನಾಗಬೇಕು ಅನ್ನೋ ಆಸೆಯನ್ನಿಟ್ಟುಕೊಂಡಿದ್ದರು. ಹೀಗಾಗಿಯೇ ಎಳವೆಯಲ್ಲೇ ಕ್ರಿಕೆಟ್ ಮೇಲೆ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಆದ್ರೆ ಮುಂದೊಂದು ದಿನ ತಾನು ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂಬ ಸಣ್ಣ ಕಲ್ಪನೆ ಕೂಡ ಅವರಿಗಿರಲಿಲ್ಲ. ಇದಕ್ಕೆ ಕಾರಣ ತಾನು ಬೆಳೆದ ವಾತಾವರಣ. ಧಾರವಾಡ ಸಣ್ಣ ಪಟ್ಟಣದಲ್ಲಿ ಬೆಳೆದು ಬಂದ ಶಿರು ಕ್ರಿಕೆಟ್ ಆಡುತ್ತಿದ್ದರು. ಆದ್ರೆ ಏನು ಮಾಡಬೇಕು ಅಂತ ತಿಳಿದಿರಲಿಲ್ಲ. ಆದ್ರೆ ಎಂಟನೇ ಕ್ಲಾಸ್ ನಲ್ಲಿ ನಡೆದಿದ್ದ ಆ ಒಂದು ಆಯ್ಕೆ ಪ್ರಕ್ರಿಯೆ ಶಿರು ಅವರ ಕ್ರಿಕೆಟ್ ಬದುಕಿಗೆ ಹೊಸ ತಿರುವನ್ನು ನೀಡಿತ್ತು.
ಹೌದು, ಅದು ವಲಯ ಮಟ್ಟದ ಆಯ್ಕೆ ಪ್ರಕ್ರಿಯೆ. ಶಿರಗುಪ್ಪಿಯವರು ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಆದ್ರೆ ಮೊದಲ ಹಂತದಲ್ಲಿ ಆಯ್ಕೆಯಾಗಲಿಲ್ಲ. ಸ್ವಲ್ಪ ಬೇಸರವಾದ್ರೂ ಮುಂದೆ ನೋಡೋಣ ಅಂತ ಸುಮ್ಮನಾದ್ರು. ಅದೇನು ಅದೃಷ್ಟವೋ ಗೊತ್ತಿಲ್ಲ, ಎರಡನೇ ಹಂತದಲ್ಲಿ ಆಯ್ಕೆಗಾರರ ಗಮನ ಸೆಳೆಯುತ್ತಾರೆ. ಹಾಗೇ ನೋಡಿದ್ರೆ ಶಿರಗುಪ್ಪಿಯವರು ವಿಕೆಟ್ ಕೀಪರ್ ಕೂಡ ಆಗಿರುವುದು ಆಕಸ್ಮಿಕವೇ. ಶಾಲಾ ತಂಡದಲ್ಲಿ ಆಕಸ್ಮಿಕವಾಗಿ ಗ್ಲೌಸ್ ಹಿಡಿದ ಶಿರು ನಂತರ ಖಾಯಂ ವಿಕೆಟ್ ಕೀಪರ್ ಅದ್ರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.
ವಲಯ ಮಟ್ಟದಲ್ಲಿ ಆಯ್ಕೆಯಾದ ಶಿರುಗುಪ್ಪಿಯವರು ಬೆಂಗಳೂರಿನಲ್ಲಿ ಮಿಂಚು ಹರಿಸಿದ್ರು. ಕೆಎಸ್ಸಿಎ ವಿವಿಧ ವಯೋಮಿತಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶಿರು ಪ್ರತಿಭೆ ಬೆಂಗಳೂರಿನ ಕ್ರಿಕೆಟ್ ಗಾಡ್ ಫಾದರ್ ಜಗನ್ನಾಥ್ ಅವರ ಕಣ್ಣಿಗೆ ಬೀಳುತ್ತೆ. ಜಗನ್ನಾಥ್ ಅವರು ಮುನ್ನಡೆಸುತ್ತಿದ್ದ ಸೋಷಿಯಲ್ಸ್ ತಂಡದ ಪರ ಆಡುವ ಅವಕಾಶ ನೀಡಿದ್ರು. ಆ ನಂತರ ಸಿಂಡಿಕೇಟ್ ಬ್ಯಾಂಕ್, ಇದೀಗ ಕೆನರಾ ಬ್ಯಾಂಕ್ನಲ್ಲಿ ಕೆಲಸ ಕೂಡ ಗಿಟ್ಟಿಸಿಕೊಳ್ಳುತ್ತಾರೆ. ಈಗಲೂ ಕೆನರಾ ಬ್ಯಾಂಕ್ನ ಉದ್ಯೋಗಿಯಾಗಿದ್ದಾರೆ. ಕೆಎಸ್ಸಿಎ ಲೀಗ್ ಪಂದ್ಯಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಶಿರು ಅವರು, ರಾಜ್ಯ ತಂಡಕ್ಕೂ ಆಯ್ಕೆಯಾಗುತ್ತಾರೆ. 1996ರಲ್ಲಿ ಯುವ ತಂಡವೇ ಆಗಿದ್ದ ರಾಜ್ಯ ತಂಡದಲ್ಲಿ ಅನೇಕ ಪ್ರತಿಭಾನ್ವಿತ ಆಟಗಾರರಿದ್ದರು. ಹೀಗೆ ಅವರ ಜೊತೆಗೆ ಬೆರೆತುಕೊಂಡು ವಿಕೆಟ್ ಕೀಪರ್ ತಾಂತ್ರಿಕ ಕೌಶಲ್ಯಗಳನ್ನು ಕಲಿತುಕೊಂಡು ಯಶಸ್ಸಿನ ಒಂದೊಂದೇ ಮೆಟ್ಟಿಲನ್ನು ಏರಿದ್ದರು ಸೋಮಶೇಖರ್ ಶಿರಗುಪ್ಪಿ.
ಪ್ರಥಮ ದರ್ಜೆಯ ಪ್ರತಿಯೊಂದು ಪಂದ್ಯಗಳನ್ನು ನೆನಪಿಸಿಕೊಳ್ಳುವ ಶಿರಗುಪ್ಪಿಯವರು, ಒಂದೊಂದು ಪಂದ್ಯದ ಗೆಲುವಿನ ಕ್ಷಣವನ್ನು ಕಣ್ಣಿಗೆ ಕಟ್ಟುವಂತೆ ಹೇಳ್ತಾರೆ. ಅದ್ರಲ್ಲೂ ರಣಜಿ ಟ್ರೋಫಿ ಗೆದ್ದಾಗ, ಇರಾನಿ ಟ್ರೋಫಿ ಗೆದ್ದಾಗ ತಂಡದ ಆಟಗಾರರ ಒತ್ತಡ ಹೇಗಿತ್ತು, ಆಟಗಾರರ ವರ್ತನೆ, ಆಡುತ್ತಿದ್ದ ರೀತಿ, ತಂಡದ ನಾಯಕರು ತಂಡವನ್ನು ಮುನ್ನಡೆಸುತ್ತಿದ್ದ ರೀತಿ, ಅದ್ಭುತ ಜೊತೆಯಾಟಗಳು, ಸೋಲಿನಿಂದ ಗೆಲುವಿನ ಕಡೆ ಮುನ್ನಡೆದ ಪರಿ ಹೀಗೆ ಎಲ್ಲವನ್ನೂ ನೆನಪಿಸಿಕೊಂಡ್ರು.
ಇನ್ನು ತನ್ನ ಕ್ರಿಕೆಟ್ ಬದುಕಿನಲ್ಲಿ ಅನಿಲ್ ಕುಂಬ್ಳೆ, ಶ್ರೀನಾಥ್, ದ್ರಾವಿಡ್ ಯಾವ ರೀತಿ ಪರಿಣಾಮ ಬೀರಿದ್ರು ಎಂಬುದನ್ನು ಸಹ ಹೇಳಿಕೊಂಡ್ರು. ಅದರಲ್ಲೂ ಅನಿಲ್ ಮತ್ತು ದ್ರಾವಿಡ್ ತಂಡವನ್ನು ಹೇಗೆ ಮುನ್ನಡೆಸುತ್ತಿದ್ರು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಶಿರು, ಅನಿಲ್ ಮತ್ತು ದ್ರಾವಿಡ್ ಅವರ ನಾಯಕತ್ವದ ಗುಣಗಳು ವಿಭಿನ್ನವಾಗಿರುತ್ತಿತ್ತು. ಅನಿಲ್ ಶಿಸ್ತಿನ ಮನುಷ್ಯ. ಯಾವಾಗಲೂ ಸೀರಿಯಸ್ ಆಗಿಯೇ ಇರುತ್ತಿದ್ದರು. ಆದ್ರೆ ಆಟಗಾರರಿಗೆ ಪ್ರತಿ ಹಂತದಲ್ಲೂ ಉತ್ತೇಜನ ನೀಡುತ್ತಿದ್ದರು. ಹಾಗೇ ದ್ರಾವಿಡ್ ಅವರದ್ದು ಭಿನ್ನ ವ್ಯಕ್ತಿತ್ವ. ದ್ರಾವಿಡ್ ಕಠಿಣ ಪರಿಶ್ರಮಿ. ಕ್ರಿಕೆಟ್ ಮೇಲೆ ಸಿಕ್ಕಾಪಟ್ಟೆ ಪ್ರೀತಿ. ದೇಶಿ ಪಂದ್ಯಗಳನ್ನು ಅಂತಾರಾಷ್ಟ್ರೀಯ ಪಂದ್ಯದಂತೆ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ತಾನು ಔಟಾದ್ರೂ ಹೇಗೆ ಔಟಾದೆ ಎಂಬುದನ್ನು ಮತ್ತೆ ನೆನಪಿಸಿಕೊಂಡು ಅದನ್ನು ಸರಿಪಡಿಸಿಕೊಳ್ಳುತ್ತಿದ್ದರು. ಹಾಗೇ ಮೈದಾನದಲ್ಲಿ ತಾಳ್ಮೆಯಿಂದಲೇ ಇರುತ್ತಿದ್ದರು. ಆಟಗಾರರಿಗೆ ಸ್ಪೂರ್ತಿ ತುಂಬುತ್ತಿದ್ದರು ಅಂತಾರೆ ಶಿರಗುಪ್ಪಿ.
ಇನ್ನು ಓರ್ವ ವಿಕೆಟ್ ಕೀಪರ್ ಆಗಿ ಯಾರ ಬೌಲಿಂಗ್ ಅನ್ನು ಅರಿತುಕೊಳ್ಳಲು ಕಷ್ಟವಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ್ದ ಸೋಮಶೇಖರ್ ಶಿರಗುಪ್ಪಿ, ವಿಜಯ್ ಭಾರದ್ವಾಜ್ ಅಂತಾರೆ. ವಿಜಯ್ ಬೌಲಿಂಗ್ ನಲ್ಲಿ ಕೀಪಿಂಗ್ ಮಾಡೋದು ಸ್ವಲ್ಪ ಕಷ್ಟವಾಗುತ್ತಿತ್ತು ಅಂತಾರೆ. ಅಂದ ಹಾಗೇ ವಿಜಯ್ ಭಾರದ್ವಾಜ್ ಮತ್ತು ಶಿರಗುಪ್ಪಿಯವರು ರೂಮ್ ಮೇಟ್ಗಳಾಗಿದ್ದರು. ಆದ್ರೆ ರೂಮ್ ನಲ್ಲಿ ಪ್ರೀತಿಯಿಂದಲೇ ಜಗಳವಾಡುತ್ತಿದ್ದರಂತೆ. ಇದಕ್ಕೆ ಕಾರಣ ಟಿವಿ. ಹಾಗೂ ಟಿವಿ ರಿಮೋಟ್. ಯಾಕಂದ್ರೆ, ಶಿರಗುಪ್ಪಿಯವರಿಗೆ ಕ್ರಿಕೆಟ್ ಪಂದ್ಯಗಳನ್ನು ನೋಡುವ ಆಸಕ್ತಿ, ಆದ್ರೆ ವಿಜಿಗೆ ಹಳೆಯ ಚಿತ್ರಗೀತೆಗಳನ್ನು ಕೇಳುವ ಪ್ರೀತಿ. ಹೀಗಾಗಿ ಅನೇಕ ಬಾರಿ ರೂಮ್ನಲ್ಲಿ ಕಚ್ಚಾಡಿಕೊಂಡಿರುವ ದಿನಗಳನ್ನು ನೆನಪಿಸಿಕೊಂಡ್ರು. ಹೀಗೆ ಒಂದು ದಿನ ಜಗಳ ಮಾಡಿಕೊಂಡು ಇಬ್ಬರು ಮಲಗಿಕೊಂಡಿದ್ರಂತೆ. ಆದ್ರೆ ಸಡನ್ ಆಗಿ ಎಚ್ಚರಗೊಂಡಾಗ ವಿಜಿ ಬೆಡ್ ಮೇಲೆ ಇರಲಿಲ್ಲ. ನೋಡಿದ್ರೆ ಕೆಳಗಡೆ ಮಲಗಿದ್ರಂತೆ. ಆಮೇಲೆ ಗೊತ್ತಾಯ್ತಂತೆ ಶಿರುಗೆ, ವಿಜಿ ಬೆನ್ನು ನೋವು ಕಾಡುತ್ತಿತ್ತು. ಹೀಗಾಗಿ ನೆಲದ ಮೇಲೆ ಮಲಗಿದ್ದಾರಂತ. ಆದ್ರೆ ಶಿರುಗೆ ಭಯ ಹಾಗೂ ಆತಂಕವಾಗಿದ್ದು, ಎಲ್ಲಿ ಕತ್ತಲೆಯಲ್ಲಿ ವಿಜಿ ಮೇಲೆ ತನ್ನ ಕಾಲು ಇಡುತ್ತೇನೆ ಎಂದು. ಹೀಗೆ ನಗುತ್ತಾ ತಮ್ಮಿಬ್ಬರ ಜಗಳದ ರಹಸ್ಯವನ್ನು ಹೇಳಿಕೊಂಡ್ರು.
ಕರ್ನಾಟಕ ತಂಡದ ಬಳಿಕ ಶಿರು ಗೋವಾ ರಣಜಿ ತಂಡದ ಪರವೂ ಆಡಿದ್ದರು. ಈ ಬಗ್ಗೆ ಶಿರಗುಪ್ಪಿಯವರಿಗೆ ಖುಷಿ ಇದೆ. ಹಿರಿಯ ಆಟಗಾರನಾಗಿ ಗೋವಾ ತಂಡಕ್ಕೆ ತನ್ನ ಅನುಭವವನ್ನು ಹಂಚಿಕೊಂಡಿದ್ದೇನೆ ಅಂತಾರೆ. ಇನ್ನು ತನ್ನ ಕ್ರಿಕೆಟ್ ಬದುಕಿಗೆ 2006ರಲ್ಲಿ ವಿದಾಯ ಹೇಳಿದ ನಂತರ ಶಿರು, ಆಯ್ಕೆ ಮಾಡಿಕೊಂಡಿದ್ದು ತರಬೇತುದಾರನ ವೃತ್ತಿಯನ್ನು. ಡೇವ್ ವಾಟ್ಮೋರ್ ಗರಡಿಯಲ್ಲೂ ಕೆಲಸ ಮಾಡಿರುವಂತಹ ಶಿರಗುಪ್ಪಿಯವರು, ಕರ್ನಾಟಕ 13 ವಯೋಮಿತಿ, 17 ವಯೋಮಿತಿ ತಂಡಗಳಿಗೆ ತರಬೇತುದಾರನಾಗಿದ್ದರು. ಆ ಬಳಿಕ ರಾಜ್ಯ ತಂಡಕ್ಕೂ ಸಹ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದಾರೆ.
13 ವಯೋಮಿತಿ ತಂಡದ ತರಬೇತುದಾರನಾಗಿದ್ದಾಗ ಶಿರಗುಪ್ಪಿಯವರ ಕಣ್ಣಿಗೆ ಬಿದ್ದವರೇ ಕೆ.ಎಲ್. ರಾಹುಲ್. ಕೆ.ಎಲ್. ರಾಹುಲ್ ಅವರ ಪ್ರತಿಭೆ, ಕ್ರಿಕೆಟ್ ಮೇಲಿನ ಬದ್ಧತೆಯನ್ನು ಗಮನಿಸಿರುವ ಶಿರು, ಮುಂದಿನ ದಿನಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಾನೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ರಂತೆ. ಅದೇ ರೀತಿ ಮನಿಷ್ ಪಾಂಡೆ ಕೂಡ. ಮನಿಷ್ ಪಾಂಡೆಗೂ ತರಬೇತುದಾರನಾಗಿದ್ದರು ನಮ್ಮ ಶಿರು.
ಓರ್ವ ಆಟಗಾರನಾಗಿ ಹಾಗೂ ಓರ್ವ ತರಬೇತುದಾರನಾಗಿ ಏನು ವ್ಯತ್ಯಾಸ ಕಂಡಿದ್ದೀರಿ ಅನ್ನೋ ಪ್ರಶ್ನೆಗೆ, ಎರಡರಲ್ಲೂ ವ್ಯತ್ಯಾಸವಿದೆ. ಆಟಗಾರನಾಗಿ ಕಲಿಯುವುದು ಹೆಚ್ಚಿರುತ್ತೆ. ತರಬೇತುದಾರನಾಗಿ ಮತ್ತಷ್ಟು ಕಲಿಯಬೇಕಾಗುತ್ತೆ. ಯಾಕಂದ್ರೆ ಆಟಗಾರನಾಗಿ ನಾವು ಬೇರೆಯವರನ್ನು ನೋಡಿ ಕಲಿಯಬಹುದು. ಆದ್ರೆ ತರಬೇತುದಾರನಾಗಿ ಹಾಗಲ್ಲ. ಅದು ಅಲ್ಲದೆ ಈಗೀನ ಹುಡುಗರು ಬೇರೆ ಬೇರೆ ತರಬೇತುದಾರಲ್ಲಿ ತರಬೇತಿ ಪಡೆದಿರುತ್ತಾರೆ. ಆಗ ಅವರು ವ್ಯತ್ಯಾಸವನ್ನು ಗಮನಿಸ್ತಾ ಇರುತ್ತಾರೆ. ಹೀಗಾಗಿ ತರಬೇತುದಾರ ಪ್ರತಿ ಕ್ಷಣದಲ್ಲೂ ಹೊಸತನವನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅಲ್ಲದೆ ಹೊಸ ಹೊಸ ಅವಿಷ್ಕಾರಗಳು, ತಂತ್ರಜ್ಞಾನಗಳು ಬಂದಿವೆ. ಅದನ್ನೆಲ್ಲಾ ತಿಳಿದುಕೊಂಡಾಗ ಮಾತ್ರ ಉತ್ತಮ ತರಬೇತುದಾರನಾಗಲು ಸಾಧ್ಯ ಅಂತಾರೆ ಸೋಮಶೇಖರ್ ಶಿರಗುಪ್ಪಿ.
ಹೀಗೆ ಕ್ರಿಕೆಟ್ ತರಬೇತಿಯ ಹೊಸತನದ ಅವಿಷ್ಕಾರಗಳು, ವಿವಿಧ ತರಬೇತಿಯ ಕಾರ್ಯಗಾರಗಳಿಂದ ರೂಪುಗೊಂಡ ಪುಸ್ತಕವೇ ದಿ ಎಲೈಟ್ ಬ್ಯಾಟರ್. ರಾಜೇಶ್ ಕಾಮತ್ ಮತ್ತು ನಾನು ಸೇರಿಕೊಂಡು ಕ್ರಿಕೆಟ್ ಕೌಶಲ್ಯಗಳ ಬಗ್ಗೆ ಬರೆದ ಪುಸ್ತಕ. ಇದು ಯುವ ಕ್ರಿಕೆಟಿಗರಿಗೆ ದಾರಿದೀಪವಾಗುವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ಈ ಪುಸ್ತಕದಲ್ಲಿ ನಮ್ಮ ಅನುಭವದ ಜೊತೆಗೆ ಕ್ರಿಕೆಟ್ ಕುರಿತ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ ಪ್ರಕಟಿಸಿದ್ದೇವೆ ಅಂತಾರೆ ಶಿರು.
ಇನ್ನು, ಓರ್ವ ವಿಕೆಟ್ ಕೀಪರ್ಗೆ ಟೆಕ್ನಿಕ್ ಎಷ್ಟು ಮಹತ್ವ ಪಡೆದುಕೊಂಡಿದೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ವಿಕೆಟ್ ಕೀಪರ್ ಆಗಲಿ, ಬ್ಯಾಟ್ಸ್ ಮೆನ್ ಆಗಲಿ, ಬೌಲರ್ ಆಗಲಿ, ಆರಂಭದಲ್ಲಿ ತರಬೇತುದಾರರು ಮಾರ್ಗದರ್ಶನ ನೀಡ್ತಾರೆ. ಆನಂತರ ಎಲ್ಲವೂ ನಮ್ಮ ಕೈಯಲ್ಲಿರುತ್ತೆ. ನಾವು ಯಾವ ರೀತಿ ಅದರ ಮೇಲೆ ಬದ್ಧತೆ, ಪರಿಶ್ರಮ ಹಾಗೂ ಪ್ರೀತಿಯಿಂದ ಅಭ್ಯಾಸ ಮಾಡುತ್ತೇವೋ ಅದರ ಮೇಲೆ ಅವಲಂಬಿತವಾಗಿರುತ್ತದೆ. ದ್ರಾವಿಡ್, ಸಚಿನ್, ಕುಂಬ್ಳೆ ಇವರನ್ನೆಲ್ಲಾ ನೋಡಿ, ಅವರು ಕ್ರಿಕೆಟ್ ತನ್ನ ಬದುಕು ಅಂತ ಅಂದುಕೊಂಡು ಅದ್ರಲ್ಲಿ ತನ್ನ ಬಾಲ್ಯ ಹಾಗೂ ಯವ್ವನ ದಿನಗಳನ್ನು ಕಳೆದಿದ್ದಾರೆ. ಹೀಗಾಗಿ ಇವತ್ತು ಅವರು ವಿಶ್ವ ಕ್ರಿಕೆಟ್ ನಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮ ಬದುಕನ್ನು ನಾವು ರೂಪಿಸಿಕೊಳ್ಳಬೇಕು ಎಂಬುದು ಶಿರು ಅವರ ಅಭಿಮತವಾಗಿದೆ.
ಒಟ್ಟಿನಲ್ಲಿ ಸೋಮಶೇಖರ್ ಶಿರಗುಪ್ಪಿಯವರು ಆಡಿದ್ದು ಸುಮಾರು ಹತ್ತು ವರ್ಷಗಳಾದ್ರೂ ಅವರು ಮಾಡಿರುವ ಸಾಧನೆಗಳು ಇವತ್ತಿಗೂ ನೆನಪಿನಲ್ಲಿ ಉಳಿಯುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ತೇಜಲ್ ಕ್ರಿಕೆಟ್ ಅಕಾಡೆಮಿಯನ್ನು ಆರಂಭಿಸಿದ್ದಾರೆ. ಇಲ್ಲಿ ಅತ್ಯಾಧುನಿಕ ಮಟ್ಟದ ಸೌಲಭ್ಯಗಳಿವೆ. ನುರಿತ ತರಬೇತುದಾರರು ಇದ್ದಾರೆ. ತನ್ನ ಕ್ರಿಕೆಟ್ ಗೆಳೆಯರು ಬಿಡುವಿನ ವೇಳೆಯಲ್ಲಿ ಅಕಾಡೆಮಿಗೆ ಬಂದು ತಮ್ಮ ಅನುಭವಗಳನ್ನು ಯುವ ಆಟಗಾರರ ಜೊತೆ ಹಂಚಿಕೊಳ್ತಾರೆ. ಇಲ್ಲಿ ಸೌಲಭ್ಯಗಳಿಗಿಂತ ಹೆಚ್ಚಾಗಿ ಕ್ರಿಕೆಟ್ ಶಿಸ್ತು ಇದೆ. ಈಗಾಗಲೇ ಅಕಾಡೆಮಿಯಲ್ಲಿ ತರಬೇತಿ ಪಡೆದ ಹುಡುಗರು, ಹುಡುಗಿಯರು ರಾಜ್ಯದ ಕ್ರಿಕೆಟ್ ನಲ್ಲೂ ಗಮನ ಸೆಳೆಯುತ್ತಿದ್ದಾರೆ ಎಂದು ತಮ್ಮ ಅಕಾಡೆಮಿಯ ಬಗ್ಗೆ ಹೇಳಿಕೊಂಡರು.
ಒಟ್ಟಾರೆಯಾಗಿ ಸೋಮಶೇಖರ್ ಶಿರಗುಪ್ಪಿಯವರ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದ್ರೆ ಸೌಮ್ಯ ಸ್ವಭಾವದ ಮುಗ್ದ ಕ್ರಿಕೆಟಿಗ. ತುಂಬಾನೇ ಸ್ನೇಹ ಜೀವಿ. ಪ್ರೀತಿ, ವಿಶ್ವಾಸದಿಂದ ಮಾತನಾಡಿದ ಸೋಮಶೇಖರ್ ಶಿರಗುಪ್ಪಿಯವರಿಗೆ ಧನ್ಯವಾದಗಳು..
ಸನತ್ ರೈ








