ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಈ ದೇಶದಲ್ಲಿ ಎಲ್ಲವೂ ತಮಾಷೆಯಾಗಿ ಕಾಣುತ್ತದೆ…!
ಪ್ರಶಸ್ತಿ, ಗೌರವ, ಹುದ್ದೆ.. ಹೀಗೆ ಯಾವುದು ಕೂಡ ಪಾರದರ್ಶಕವಾಗಿ, ಅರ್ಹತೆಯ ಆಧಾರದಲ್ಲಿ ಆಗುತ್ತಿಲ್ಲ. ಅಷ್ಟಕ್ಕೂ ನಮ್ಮ ದೇಶದಲ್ಲಿ ಆಗುತ್ತಿರುವುದೆಲ್ಲಾ ಹೀಗೆ… ಆದು ಯಾವ ಕ್ಷೇತ್ರ ಬೇಕಾದ್ರೂ ಇರಲಿ.. ಅಲ್ಲಿ ವಿವಾದ, ಆಕ್ರೊಶ, ಅಪಸ್ವರವಿಲ್ಲದೆ ಯಾವುದು ಕೂಡ ನಡೆಯುತ್ತಿಲ್ಲ. ಇದೀಗ ಕ್ರೀಡಾ ಸಾಧಕರಿಗಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಗಳ ವಿಚಾರದಲ್ಲೂ ಅಷ್ಟೇ. ಅಪಸ್ವರದ ಮಾತುಗಳು ಜೋರಾಗಿ ಕೇಳಿಬರುತ್ತಿವೆ.
ಹೌದು, ಅದು ಖೇಲ್ ರತ್ನ ಪ್ರಶಸ್ತಿ ಆಗಿರಲಿ, ಅರ್ಜುನ ಪ್ರಶಸ್ತಿಯೇ ಆಗಿರಲಿ, ದ್ರೋಣಾಚಾರ್ಯ ಪ್ರಶಸ್ತಿಯೇ ಆಗಿರಲಿ.. ದೇಶದ ವಿವಿಧ ಕ್ರೀಡಾ ಸಂಸ್ಥೆಗಳು ಈಗಾಗಲೇ ತಮ್ಮ ಆಟಗಾರರ ಹೆಸರುಗಳನ್ನು ಪ್ರತಿಷ್ಠಿತ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ. ಆದ್ರೆ ಈ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಸರಿಯಾಗಿಲ್ಲ ಅನ್ನೋ ಟೀಕೆ, ಅಪಸ್ವರ ಜೋರಾಗಿ ಕೇಳಿಬರುತ್ತಿದೆ.
ಅದ್ರಲ್ಲೂ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣೋಯ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯ ವಿರುದ್ಧವೂ ಕಿಡಿ ಕಾರಿದ್ದಾರೆ. ಅರ್ಜುನ್ ಪ್ರಶಸ್ತಿ ಆಯ್ಕೆಯ ಮಾನದಂಡಗಳು ಅರ್ಥವಾಗುತ್ತಿಲ್ಲ. ಯಾರು ಪ್ರತಿಷ್ಠಿತ ಟೂರ್ನಿಯ ಪ್ರಶಸ್ತಿಗಳನ್ನು ಗೆಲ್ಲಲಿಲ್ಲವೋ ಅಂತವರ ಹೆಸರುಗಳನ್ನು ಶಿಫಾರಸು ಮಾಡಿದೆ. ಕಾಮನ್ ವೆಲ್ತ್ ಮತ್ತು ಏಷ್ಯನ್ ಚಾಂಪಿಯನ್ಷಿಪ್ಗಳಲ್ಲಿ ಪ್ರಶಸ್ತಿ ಪಡೆದವರನ್ನು ಕಡೆಗಣಿಸಲಾಗಿದೆ ಎಂದು ಸಿಟ್ಟಿನಿಂದಲೇ ಪ್ರಣೋಯ್ ಹೇಳಿದ್ದಾರೆ.
ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆಯು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗಾಗಿ ಸಾತ್ವಿಕ್ ಸಾಯಿ ರಾಜ್ ಮತ್ತು ಚಿರಾಗ್ ಶೆಟ್ಟಿ ಹಾಗೂ ಸಮೀರ್ ವರ್ಮಾ ಅವರನ್ನು ಶಿಫಾರಸು ಮಾಡಿದೆ. ಹೀಗಾಗಿ ಪ್ರಣೋಯ್ ಅವರು ತನ್ನನ್ನು ಕಡೆಗಣಿಸಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೆ ಅದೇ ಹಳೆಯ ಕಥೆ. ಕಾಮನ್ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಪದಕ ಗೆದ್ದವನನ್ನು ಬ್ಯಾಡ್ಮಿಂಟನ್ ಸಂಸ್ಥೆಯು ಶಿಫಾರಸು ಮಾಡಿಲ್ಲ. ಆದ್ರೆ ಯಾರು ಪ್ರತಿಷ್ಠಿತ ಟೂರ್ನಿಯ ಪದಕಗಳನ್ನು ಗೆದ್ದಿಲ್ಲವೋ ಅವರನ್ನು ಪ್ರಶಸ್ತಿಗೆ ಶಿಫಾರಸು ಮಾಡಿದೆ. ಇದು ನಮ್ಮ ದೇಶದ ತಮಾಷೆ ಅಂತ ಟ್ವಿಟರ್ ನಲ್ಲಿ ಪ್ರಣೋಯ್ ಅವರು ಟ್ವಿಟ್ ಮಾಡಿದ್ದಾರೆ.
ಆದ್ರೆ ಬ್ಯಾಡ್ಮಿಂಟನ್ ಸಂಸ್ಥೆಯು ಪ್ರತಿಕ್ರಿಯೆ ನೀಡಿದ್ದು ಹೀಗೆ.. ಕಳೆದ ನಾಲ್ಕು ವರ್ಷಗಳ ಸಾಧನೆಯನ್ನು ಮುಂದಿಟ್ಟುಕೊಂಡು ಆಟಗಾರರ ಮತ್ತು ಕೋಚ್ಗಳ ಹೆಸರನ್ನು ಶಿಫಾರಸು ಮಾಡಿದ್ದೇವೆ ಎಂದು ಹೇಳಿದೆ. ದ್ರೋಣಾಚಾರ್ಯ ಪ್ರಶಸ್ತಿಗಾಗಿ ಎಸ್. ಮುರಳೀಧರನ್ ಮತ್ತು ಭಾಸ್ಕರ್ ಬಾಬು ಅವರ ಹೆಸರುಗಳನ್ನು ಶಿಫಾರಸು ಮಾಡಿದೆ.
ಕಳೆದ ಬಾರಿಯೂ ಪ್ರಣೋಯ್ ಅವರ ಹೆಸರನ್ನು ಬ್ಯಾಡ್ಮಿಂಟನ್ ಸಂಸ್ಥೆಯು ಕೈಬಿಟ್ಟಿದೆ. ನಮ್ಮ ದೇಶದಲ್ಲಿ ಸಾಧನೆಯನ್ನು ಪರಿಗಣಿಸುವುದಿಲ್ಲ. ಇದಕ್ಕೆ ಏನು ಮಾಡಲು ಸಾಧ್ಯವಿಲ್ಲ. ನಿಮಗೆ ಎಷ್ಟು ದಿನ ಆಡಲು ಸಾಧ್ಯವೋ ಅಷ್ಟು ದಿನ ಆಡಬೇಕು ಎಂದು ಬೇಸರದಿಂದಲೇ ಹೇಳಿದ್ದಾರೆ ಪ್ರಣೋಯ್








