ex cm siddaramaiah | ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ : ಸಿದ್ದರಾಮಯ್ಯ ಪ್ರಶ್ನೆ
ಕೊಡಗು : ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ ನಾವು ಅಲ್ಲಿಂದಲೇ ಮಾಡಿಕೊಂಡು ಬಂದಿರೋದು. ನಾವು ಹೋರಾಟ ಮಾಡೋಕೆ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಕೊಡಗಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಬಾರಿ ಕೊಡಗಿನಲ್ಲಿ ಎರಡೂ ಕಡೆ ಕಾಂಗ್ರೆಸ್ ಗೆಲ್ಲುತ್ತೆ ಅಂತ ಬಿಜೆಪಿ ಹತಾಶರಾಗಿ ಹೀಗೆ ಪ್ರತಿಭಟನೆ ಮಾಡಿದ್ದಾರೆ. ನಮಗೆ ಮೊಟ್ಟೆ ಎಸೆಯೋಕೆ ಬರಲ್ವಾ ? ನಾವು ಅಲ್ಲಿಂದಲೇ ಮಾಡಿಕೊಂಡು ಬಂದಿರೋದು. ನಾವು ಹೋರಾಟ ಮಾಡೋಕೆ ಶುರು ಮಾಡಿದ್ರೆ ಸಿಎಂ ಎಲ್ಲೂ ಓಡಾಡೋಕೆ ಆಗಲ್ಲ. ನಮ್ಮ ಕಾರ್ಯಕರ್ತರು ಬೀದಿಗಿಳಿದ್ರೆ ಬಿಜೆಪಿಯವರಿಗೆ ಕೊಡಗಿನಲ್ಲೇ ತಿರುಗಾಡೋಕೆ ಆಗಲ್ಲ. ಟಿಪ್ಪು ವಿಚಾರನೂ ಇಲ್ಲ ಏನೂ ಇಲ್ಲ ಟಿಪ್ಪು ಜಯಂತಿ ಆದ್ಮೇಲೆ ನಾನು ಕೊಡಗಿಗೆ ಬಂದಿಲ್ವಾ? ಕಳಪೆ ಕೆಲಸ ನನಗೆ ಗೊತ್ತಾಗದಿರಲಿ ಅಂತ ಮಾತ್ರ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆ ಮಳೆಗಿಂತ ಹೆಚ್ಚು ಮಳೆ ಬಿದ್ದಿದೆ. ಕರ್ನಾಟಕದಲ್ಲಿ 5 ಲಕ್ಷದ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಇವತ್ತಿನವರೆಗೆ ಸರ್ವೆ ಮಾಡಿ ಪರಿಹಾರ ಕೊಡುವ ಪ್ರಯತ್ನವನ್ನ ಸರ್ಕಾರ ಮಾಡಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಳೆಹಾನಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೊಡಗಿನ ಮಳೆಹಾನಿ ಆದ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. 2018 -19, 2020ರಲ್ಲಿ ಆದ ಮಳೆಯ ಹಾನಿಗೆ ಸರ್ಕಾರ ಇನ್ನೂ ಕೂಡ ಪರಿಹಾರ ನೀಡಿಲ್ಲ. ಸೇತುವೆ ತಡೆಗೋಡೆಗಳನ್ನು ತೀರಾ ಕಳಪೆಯಾಗಿ ಮಾಡಿದ್ದಾರೆ ಅದಕ್ಕೆ ಅವೆಲ್ಲಾ ಹೀಗಾಗಿವೆ ಎಂದು ಹೇಳಿದ್ದಾರೆ.
ಯಡಿಯೂರಪ್ಪರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿರುವ ವಿಚಾರವಾಗಿ ಮಾತನಾಡಿ, ಅವತ್ತು ವಯಸ್ಸಾಯ್ತು ಅಂತ ತೆಗೆದು ಈಗ ದೊಡ್ಡ ಹುದ್ದೆ ಅಂತಾರಲ್ವಾ ಅವರ ವಯಸ್ಸು ಹಿಂದೆ ಹೋಯ್ತಾ? ಯಡಿಯೂರಪ್ಪರನ್ನ ಸಮಾಧಾನ ಮಾಡಲು, ಚುನಾವಣೆಗಾಗಿ ಹೀಗೆ ಮಾಡಿದ್ದಾರೆ. ಇರೋ ಮುಖ್ಯಮಂತ್ರಿ ತೆಗೆದು ಮತ್ತೆ ಮುಖ್ಯಮಂತ್ರಿ ಮಾಡುತ್ತಾರಾ..? ಹೆಚ್ಚು ಅಂದ್ರೆ ಯಡಿಯೂರಪ್ಪ ಅವರ ಮಗನಿಗೆ ಟಿಕೆಟ್ ಕೊಡಿಸುತ್ತಾರೆ ಅಷ್ಟೇ ಎಂದು ಹೇಳಿದ್ದಾರೆ.








