ಗಣೇಶೋತ್ಸದ ಜೊತೆಗೆ ಸಾವರ್ಕರ್ ಉತ್ಸವಕ್ಕೆ ಮುಂದಾದ ಹಿಂದೂ ಸಂಘಟನೆಗಳು..
ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸಾವರ್ಕರ್ ವಿವಾದ ಜೋರಾಗಿದೆ. ಈ ಮಧ್ಯೆ ರಾಜ್ಯದ ಹಲವೆಡೆ ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಹಿಂದು ಸಂಘಟನೆಗಳು ಮುಂದಾಗಿವೆ.
ಈ ಬಾರಿ ಗಣೇಶೋತ್ಸವವನ್ನು ಸಾವರ್ಕರ್ ಉತ್ಸವವಾಗಿ ಆಚರಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನಿನ್ನೆಯಷ್ಟೇ ಹೇಳಿದ್ದರು. ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಗಣೇಶೋತ್ಸವದ ವೇಳೆ ಸಾವರ್ಕರ್ ಉತ್ಸವ ಆಚರಿಸಲು ಸಿದ್ಧತೆ ನಡೆದಿದೆ.
ಈ ಬಾರಿ ಬೆಳಗಾವಿ ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಪ್ರತಿಯೊಂದು ಗಣೇಶ ಮಂಟಪಗಳಲ್ಲಿ ವಿನಾಯಕ ದಾಮೋದರ್ ಸಾವರ್ಕರ್ ಫೋಟೋ ಇರಿಸುತ್ತೇವೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಈ ಭಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಅವರ ಸ್ವಾತಂತ್ರ್ಯ ಹೋರಾಟ, ತ್ಯಾಗ, ಬಲಿದಾನ, ಅವರು ಅನುಭವಿಸಿದ ಸಂಕಷ್ಟಗಳ ವೀಡಿಯೋಗಳನ್ನು ಪ್ರಸಾರ ಮಾಡಲು ಹಿಂದೂ ಸಂಘಟನೆಗಳು ಮುಂದಾಗಿವೆ. ಇದರ ಜೊತೆಗೆ ಸಾವರ್ಕರ್ ಚರಿತ್ರೆಯ ಪುಸ್ತಕ ಮಾರಾಟ, ನಾಟಕ ಸೇರಿದಂತೆ ಇನ್ನು ಹಲವು ಕಾರ್ಯಕ್ರಮಗಳನ್ನು ಮಾಡಲು ನಿರ್ಧರಿಸಲಾಗಿದೆ.