Dharwad | ರಸ್ತೆಯಲ್ಲಿ ಗುಂಡಿಯೋ..ಗುಂಡಿಯಲ್ಲಿ ರಸ್ತೆಯೋ
ಧಾರವಾಡ : ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಮೊದಲ ಬಸ್ ನಿಲ್ದಾಣದಿಂದ ಹಳೆಯ ಬಸ್ ನಿಲ್ದಾಣದವರೆಗೆ ಇರುವ ರಸ್ತೆ ಹದಗೆಟ್ಟು ಸಾರ್ವಜನಿಕರು ಹೈರಾಣಾಗಿದ್ದಾರೆ.
ಈ ರಸ್ತೆ ನೋಡಿದರೆ ರಸ್ತೆಯಲ್ಲಿ ಗುಂಡಿ ಬಿದ್ದಿವೆಯೋ ಗುಂಡಿಯಲ್ಲೇ ರಸ್ತೆಯನ್ನ ಮಾಡಲಾಗಿದೆಯೋ ಎಂದು ಜನ ಪ್ರಶ್ನೆ ಮಾಡುವಂತಾಗಿದೆ.
ಈ ರಸ್ತೆ ಹದಗೆಟ್ಟು ಅನೇಕ ತಿಂಗಳು ಕಳೆದಿದ್ದರೂ ಇದರ ಸುಧಾರಣೆ ಮಾತ್ರ ಕನಸಿನ ಮಾತಾಗಿ ಉಳಿದಿದೆ.
ಮಳೆಯಾದ್ರೆ ಸಾಕು ಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗುತ್ತವೆ. ಈ ರಸ್ತೆಯಲ್ಲಿ ಅನೇಕ ಬಾರಿ ಬಸ್ಸುಗಳ ಎಕ್ಸೆಲ್ ಕಟ್ ಆಗಿ ಮಾರ್ಗ ಮಧ್ಯೆಯೇ ನಿಂತ ಸಾಕಷ್ಟು ಉದಾಹರಣೆ ಇವೆ.

ಉಪ್ಪಿನ ಬೆಟಗೇರಿ ಗ್ರಾಮದ ಮೊದಲ ಬಸ್ ನಿಲ್ದಾಣದಿಂದ ಹಳೆಯ ಬಸ್ ನಿಲ್ದಾಣದವರೆಗೆ ಕಾಂಕ್ರೀಟ್ ರಸ್ತೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದರೂ ಇದುವರೆಗೂ ಆ ಕಾರ್ಯ ಕೈಗೂಡಿಲ್ಲ.
ಈ ರಸ್ತೆಯಲ್ಲಿ ಪ್ರಯಾಣಿಕರು ನರಕಯಾತನೆ ಅನುಭವಿಸುತ್ತಿರುವುದಂತೂ ಸುಳ್ಳಲ್ಲ.
ಕೂಡಲೇ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದರತ್ತ ಗಮನಹರಿಸಿ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಬೇಕಿದೆ.








