ಪರಿಸರ & ಜೀವ ವ್ಯವಸ್ಥೆಯ ಸರಪಳಿಗೆ ಜೇನುನೊಣಗಳು ಪರಾಗಸ್ಪರ್ಷಿ ದುಂಬಿಗಳೆಂಬ ಅನಿವಾರ್ಯ; ಜೈವಿಕ ವ್ಯವಸ್ಥೆಯನ್ನು ಅಸಮತೋಲನಗೊಳಿಸುವ ಮನುಷ್ಯನೂ ಮತ್ತು ಲಾಕ್ ಡೌನ್ ಕಾಲದ ಪರಿಸರದ ಲವಲವಿಕೆಯೂ:
ಇಂದು ವಿಶ್ವ ಪರಿಸರ ದಿನಾಚರಣೆ. ಪರಿಸರ ಅಂದರೆ ನಮ್ಮ ಸುತ್ತಮುತ್ತಲಿನ ವಾತಾವರಣ ಮಾತ್ರವಲ್ಲ. ಕಾಣಿಸುವ ಕಾಣಿಸದ ಗೋಚರ ಅಗೋಚರ ಜೀವವ್ಯವಸ್ಥೆಯ ಒಟ್ಟಾರೆ ಸಾರಾಂಶ. ಈ ಜೈವಿಕ ಸೈಕಲ್ಲಿನಲ್ಲಿ ಪ್ರತಿಯೊಂದು ಜೀವಿಗಳಿಗೂ ಬಾದ್ಯತೆಯಿದೆ ಹೊಣೆಯಿದೆ ಕರ್ತವ್ಯಗಳಿವೆ. ಆದರೆ ಮನುಷ್ಯ ಈ ವ್ಯವಸ್ಥೆಯಿಂದ ಹೊರಗಿದ್ದಾನೆ. ಅವನಿಗೆ ಯಾವ ಜವಾಬ್ದಾರಿಯೂ ಇಲ್ಲದ ಉಡಾಳತನ ಮಾತ್ರ ದಂಡಿಯಾಗಿದೆ. ಈ ಅವಿವೇಕಿ ಮನುಷ್ಯ ಯಾವ ಕರ್ತವ್ಯ ನಿಬಾಯಿಸುವುದೂ ಬೇಡ. ಪ್ರಕೃತಿಯ ಉಳಿದ ವ್ಯವಸ್ಥೆ ತನ್ನ ಪಾಡಿಗೆ ತಾನು ನಡೆಯುತ್ತದೆ. ಆದ್ರೆ ತಿಕ್ಕಲು ಮನುಷ್ಯನ ಸ್ವಾರ್ಥ ಪ್ರವೃತ್ತಿ ಇಡೀ ವ್ಯವಸ್ಥೆಯ ಸಮತೋಲನ ತಪ್ಪಿಸುತ್ತದೆ. ಅದಕ್ಕೊಂದು ಸಣ್ಣ ಉದಾಹರಣೆ ಸಸ್ಯಗಳ ಫಲವೃದ್ಧಿಗೆ ಪಾಲಿನೇಶನ್ ಮುಖಾಂತರ ಸಹಕರಿಸುವ ಜೇನುನೊಣ, ದುಂಭಿ ಮತ್ತು ಈ ಜಾತಿಯ ನೊಣಗಳು. ಸಸ್ಯ ಜಗತ್ತಿಗೆ ಇವು ಎಷ್ಟು ಅನಿವಾರ್ಯವೆಂದರೆ ಮನುಷ್ಯ ಇಲ್ಲದಿದ್ದರೂ ಪ್ರಕೃತಿಗೆ ಏನೂ ವ್ಯತ್ಯಾಸವಾಗುವುದಿಲ್ಲ ಆದರೆ ಈ ಭ್ರಮರಗಳಿಲ್ಲದೇ ಹೋದರೆ ಪ್ರಕೃತಿ ಕೃಶವಾಗುತ್ತದೆ.
ಜಗತ್ತಿನಾದ್ಯಂತ ಹಲವು ದೇಶಗಳು ಲಾಕ್ ಡೌನ್ ಜಾರಿ ಮಾಡಿದ್ದರಿಂದ ಪರಿಸರ ಮತ್ತು ಜೀವಸಂಕುಲದ ಮೇಲೆ ಅಗಾಧವಾದ ಸಕಾರಾತ್ಮಕ ಪರಿಣಾಮವೇರ್ಪಡುತ್ತಿದೆ. ಮಾನವಿನಿಂದ ಹಾನಿಗೊಳಗಾಗುತ್ತಿರುವ ಸೃಷ್ಟಿಯ ಜೀವ ಸಮೂಹದಲ್ಲಿ ಕಾಡು ಜೇನು ನೊಣಗಳು ಒಂದು; ಇವು ಈಗ ಲಾಕ್ ಡೌನ್ ನಿಂದ ಲಾಭ ಪಡೆದುಕೊಳ್ಳುತ್ತಿವೆ ಎಂದು ಕೀಟಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪ್ರತೀ ಸಂವತ್ಸರಗಳಿಗಿಂತ ಈ ಸಂವತ್ಸರ ಭಿನ್ನವಾಗಿದೆ. ಈ ಬಾರಿಯ ವಸಂತ ಕಾಲದಲ್ಲಿ ಮನುಷ್ಯ ಮನೆಯ ಗೋಡೆಯೊಳಗೆ ಬಂಧಿಯಾಗಿದ್ದಾನೆ. ಮಾನವನ ಹಸ್ತಕ್ಷೇಪ, ಸಂಚಾರ ದಟ್ಟಣೆ, ಗ್ಲೋಬಲ್ ವಾರ್ಮಿಂಗ್, ವಾತಾವರಣ ಮಾಲಿನ್ಯದಂತಹ ತೊಂದರೆ ತಾಪತ್ರಯಗಳಿಲ್ಲದೇ ಕಾಡು ನಿರ್ಮಲವಾಗಿ ನೆಮ್ಮದಿಯಾಗಿದೆ. ಇಸ್ರೇಲ್ ನ ಹೈಫಾ ನಗರದಲ್ಲಿ ಕಾಡುಹಂದಿಗಳು ನಿರ್ಭೀತವಾಗಿ ಸಂಚರಿಸಿದ್ದು, ಟರ್ಕಿಯ ಸದಾ ಹಡಗುಗಳ ಸಂಚಾರ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಬೋಸ್ಫೋರಸ್ ಕಿರಿಯ ಕಡಲ್ಗಾಲುವೆ ಮಾರ್ಗದಲ್ಲಿ ಡಾಲ್ಫಿನ್ ಗಳು ಸ್ವಚ್ಛಂದವಾಗಿ ಈಜಾಡುತ್ತಿದ್ದ ಸಂಗತಿಗಳು ಈಗಾಗಲೇ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಲಾಕ್ ಡೌನ್ ಜೀವಜಗತ್ತಿನ ಕಟ್ಟ ಕಡೆಯ ಪ್ರಾಣಿಗೂ ತೀವ್ರತಮ ಅನುಕೂಲ ಕಲ್ಪಿಸಿದೆ ಎಂದರೆ ಸುಳ್ಳಲ್ಲ. ಅದೇ ರೀತಿ ಮನುಷ್ಯನ ಸ್ವಾರ್ಥ ಮತ್ತು ದುಷ್ಕೃತ್ಯದಿಂದ ಸ್ವಾಭಾವಿಕ ಜೈವಿಕ ನೆಲೆ ನಾಶ, ಪರಿಸರ ಮಾಲಿನ್ಯ ಮತ್ತು ರಾಸಾಯನಿಕ ಕೀಟನಾಶಗಳಿಂದ ಕ್ರಮೇಣ ಅಪಾಯಕಾರಿ ಮಟ್ಟದಲ್ಲಿ ತನ್ನ ಸಂತತಿ ಕಳೆದುಕೊಳ್ಳುತ್ತಿದ್ದ ಕಾಡು ಜೇನು ನೊಣಗಳೀಗ ನಿಧಾನವಾಗಿ ತನ್ಮ ಸಂತಾನಾಭಿವೃದ್ದಿಯಲ್ಲಿ ತೊಡಗಿವೆ. ಜೊತೆಗೆ ಹೂಪುಷ್ಪಗಳ ಪರಾಗಸ್ಪರ್ಷ ನಡೆಸಿ ವಂಶಾಭಿವೃದ್ಧಿಗೆ ನೆರವಾಗುವ ದುಂಬಿ ಜಾತಿಯ ಕೀಟಗಳು ನೆಮ್ಮದಿಯಿಂದ ಚಟುವಟಿಕೆಯಿಂದ ಕೆಲಸ ಮಾಡುತ್ತಿವೆ.
ಜೇನುನೊಣಗಳು ನಮ್ಮ ಜೈವಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಜೀವಿಗಳು. ನಮ್ಮಿಡೀ ಜೀವವ್ಯವಸ್ಥೆಯ ಸರಪಳಿಯಲ್ಲಿ ಜೇನುನೋಣಗಳು ಸಮೃದ್ಧ ಕೊಡುಗೆ ಕೊಟ್ಟಿವೆ. ನಾವು ತಿನ್ನುವ ಪ್ರತೀ ಸಸ್ಯಜನ್ಯ ಆಹಾರ ಜೇನು ನೊಣಗಳ ಅಪ್ರತ್ಯಕ್ಷ ಕೊಡುಗೆ. ಇವುಗಳ ವಂಶಾಭಿವೃದ್ಧಿ ಕುಂಟಿತವಾಗುವುದೆಂದರೆ ನಮ್ಮ ಕೃಷಿ ವ್ಯವಸ್ಥೆಯ ಬೆನ್ನು ಮೂಳೆ ಮುರಿದಂತೆ ಎನ್ನುತ್ತಾರೆ ಬುಂಬ್ಲೀ ಬೀ ಕನ್ಸರ್ವೇಶನ್ ಟ್ರಸ್ಟ್ ನ ಮುಖ್ಯ ವ್ಯವಸ್ಥಾಪಕ ಗಿಲ್ ಪಾರ್ಕಿನ್ಸ್.
ಜೇನು ನೊಣಗಳು, ದುಂಬಿಗಳು ಇಲ್ಲದ ಜೀವ ಪ್ರಪಂಚವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇವು ಪ್ರಪಂಚದ ಅತ್ಯುತ್ತಮ ಪರಾಗಸ್ಪರ್ಷಿಗಳು. ನಾವು ತಿನ್ನುವ ಶೇ.80 ರಷ್ಟು ಹೂಬಿಡುವ ಸಸ್ಯ ಸಂಕುಲಗಳ ಫಲಾಭಿವೃದ್ಧಿಗೆ ಕಾರಣ ಇವೇ ಕೀಟಗಳು. ಜೇನುನೊಣಗಳು ಮತ್ತು ಉಳಿದ ಎಲ್ಲಾ ಪರಾಗಸ್ಪರ್ಷಿ ಕೀಟಗಳು ಜಗತ್ತಿನ ಆರ್ಥಿಕತೆ ನೀಡುವ ಕಾಣಿಕೆ ಎಷ್ಟು ಗೊತ್ತಾ? ಬರೋಬ್ಬರಿ 150 ಬಿಲಿಯನ್ ಅಮೇರಿಕನ್ ಡಾಲರ್. ಲಂಡನ್ ನ ವಿಶ್ವವಿದ್ಯಾನಿಲಯವೊಂದರ ಅಧ್ಯಯನದ ಪ್ರಕಾರ ಯುನೈಟೆಡ್ ಕಿಂಗ್ ಡಂನ ವಾರ್ಷಿಕ ಆರ್ಥಿಕತೆಗೆ ಈ ಕೀಟಗಳ ಕೊಡುಗೆ 850 ಮಿಲಿಯನ್ ಡಾಲರ್.
ಗ್ಲೋಬಲ್ ಶಟ್ ಡೌನ್ ಕಾರಣದಿಂದ ಪರಿಸರದ ಮೇಲಾಗಿರುವ ಮಹತ್ತರ ಬದಲಾವಣೆ ಎಂದರೆ ವಾಯುಮಾಲಿನ್ಯ ನಿಯಂತ್ರಣ. ಕಡಿಮೆ ವಾಯುಮಾಲಿನ್ಯದ ವಾತಾವರಣದಲ್ಲಿ ಜೇನುನೊಣಗಳ ಶಾಪಿಂಗ್ ಟ್ರಿಪ್ ಹೆಚ್ಚಾಗಿದೆ ಮತ್ತು ಯುವ ನೊಣಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನುತ್ತಾರೆ ಲಂಡನ್ ವಿಶ್ವವಿದ್ಯಾನಿಲಯದ ಪರಿಸರಶಾಸ್ತ್ರದ ಪ್ರೊಫೆಸರ್, ಕೀಟಶಾಸ್ತ್ರಜ್ಞ ಮಾರ್ಕ್ ಬ್ರೌನ್. ವಾಹನಗಳಿಂದ ಹೊರಸೂಸುವ ಹೊಗೆ ಪುಷ್ಪಗಳ ಸುವಾಸನೆಯನ್ನು ಮುಚ್ಚಿಹಾಕತ್ತವೆ. ಇದರಿಂದ ಅಪಾರ ಪ್ರಮಾಣದ ಸಸ್ಯ ಸಂಕುಲದ ಹೂಗಳ ಪರಾಗಸ್ಪರ್ಷವೇ ಆಗುವುದಿಲ್ಲ. ಇದು ಸಸ್ಯಗಳಿಗೂ ಮಾರಕ ಮತ್ತು ಜೇನುನೊಣಗಳ ಕಾರ್ಯಕ್ಷಮತೆಯನ್ನೂ ಕುಗ್ಗಿಸುತ್ತೆ. ವಾಯುಮಾಲಿನ್ಯದ ದುಷ್ಪರಿಣಾಮದಿಂದ ಜೇನು ಮತ್ತು ಸಸ್ಯ ವಂಶಾಭಿವೃದ್ಧಿ ಎರಡಕ್ಕೂ ಅಪಾಯ ಎಂದು 2016ರಲ್ಲೇ ಅಧ್ಯಯನ ವರದಿಗಳು ಪ್ರಕಟವಾಗಿದ್ದವು. ಹೀಗಾದಾಗ ಜೇನುನೊಣಗಳಿಗೆ ಆಹಾರದ ಅಲಭ್ಯತೆ ಉಂಟಾಗುತ್ತಿದೆ. ಸ್ವಾಭಾವಿಕ ಪುಷ್ಪಮಧುವಿನ ಅಭಾವದಿಂದಾಗಿ ಜೇನುನೊಣಗಳ ವಾಸದ ನೆಲೆಯಲ್ಲೂ ಬದಲಾವಣೆಗಳಾಗಿ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿತ್ತು. ಮಾಲಿನ್ಯಕಾರಕಗಳಿಂದಾಗಿ ಸಸ್ಯಗಳಿಂದ ಹೊರಸೂಸುವ ಪರಿಮಳದ ಅಣುಗಳನ್ನು ಒಡೆಯುತ್ತಿದ್ದವು. ಹೀಗಾಗಿ ಜೇನುನೊಣಗಳನ್ನು ಗೊಂದಲಕ್ಕೀಡುಮಾಡುವ ರಾಸಾಯನಿಕ ಬದಲಾವಣೆಗಳಿಗೆ ಕಾರಣವಾಗಿ ಜೇನುನೊಣಗಳ ಕರ್ತವ್ಯವನ್ನೇ ನಿಷ್ಕ್ರಿಯಗೊಳಿಸಿತ್ತು.
ಅಮೇರಿಕಾ ಮತ್ತು ಯುರೋಪ್ ಗಳ ಎಕ್ಸ್ ಪ್ರೆಸ್ ಹೈವೇ ಕಾರಿಡಾರ್ ನಲ್ಲಿ ವೇಗವಾಗಿ ಚಲಿಸುವ ವಾಹನಗಳ ಗಾಜಿಗೆ ಬಡಿದು ಜೇನುನೊಣಗಳು ಸಾಯುತ್ತಿದ್ದವು. 2015ರಲ್ಲಿ ಕೆನಡಾದ ಅಧ್ಯಯನ ಕೇಂದ್ರ ನಡೆಸಿದ ಸಂಶೋಧನೆ ಪ್ರಕಾರ ಪ್ರತೀ ವರ್ಷ ಉತ್ತರ ಅಮೇರಿಕಾ ಒಂದರಲ್ಲೇ 24 ಬಿಲಿಯನ್ ಜೇನುನೊಣಗಳು ಹೀಗೆ ಸಾಯುತ್ತಿದ್ದವಂತೆ. ಲಾಕ್ ಡೌನ್ ಘೋಷಣೆಯ ಕಾರಣ ಕಾರುಗಳು ಇತರೆ ವಾಹನಗಳು ರಸ್ತೆಗಿಳಿಯದ ಕಾರಣ ಈ ವಿನಾಕಾರಣ ಜೇನುನೊಣಗಳ ರಸ್ತೆ ಅಪಘಾತವೂ ಭಾಗಶಃ ಕಡಿಮೆಯಾಗಿತ್ತು. ಅಮೇರಿಕಾದ ಕೆಲವು ದೊಡ್ಡ ಹಿಡುವಳಿಯ ರೈತರು ಕೃತಕವಾಗಿ ಜೇನುಸಾಕಾಣಿಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡರು. ಕಾರಣವಿಷ್ಟೆ ಜೇನು ನೊಣಗಳಿಲ್ಲದೇ ಅವರ ಕೃಷಿಯಲ್ಲಿ ಪರಾಗ ಸ್ಪರ್ಷವಾಗದೆ ಇಳುವರಿ ಕುಂಠಿತಗೊಂಡಿತ್ತು. ಅವರೆಷ್ಟೇ ಸರ್ಕಸ್ ಮಾಡಿದರೂ ಜೇನುನೊಣಗಳನ್ನು ಹಿಡಿದಟ್ಟುಕೊಳ್ಳಲಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ಲೋಬಲ್ ವಾರ್ಮಿಂಗ್ ಮತ್ತು ಕಲುಷಿತ ವಾತಾವರಣ ಎನ್ನುವ ತೀರ್ಮಾನಕ್ಕೆ ಅಂತಿಮವಾಗಿ ಬರಲಾಯ್ತು. ಆದರೆ ಲಾಕ್ ಡೌನ್ ಕಾರಣದಿಂದ ಮತ್ತೆ ಜೇನು ಮತ್ತು ದುಂಬಿ ಕುಟುಂಬದ ನೆಲೆ ಸಾಧ್ಯವಾಗಿತ್ತು. ಈ ಎರಡು ಮೂರು ತಿಂಗಳಲ್ಲಿ ಪರಿಸರ ಮತ್ತು ಜೀವವ್ಯವಸ್ಥೆಯಲ್ಲಿ ಅಪಾರ ಪ್ರಮಾಣದ ಸಕಾರಾತ್ಮಕ ಧನಾತ್ಮಕ ಬೆಳವಣಿಗೆಗಳಾಗಿವೆ. ಆದರೆ ಲಾಕ್ ಡೌನ್ ತೆರವಾಗುತ್ತಿದ್ದಂತೆ ಮತ್ತೆ ಅದೇ ರಾಗ ಅದೇ ಹಾಡು. ಮತ್ತೆ ಮನುಷ್ಯನ ಆಟಾಟೋಪ ಹೆಚ್ಚಾಗುತ್ತದೆ ಜೀವ ವ್ಯವಸ್ಥೆಯ ಸರಪಳಿ ನೋವಿನಿಂದ ಅಲುಗಾಡತೊಡಗುತ್ತದೆ. ಇದಕ್ಕೆ ನಾನು ಅನೇಕ ಬಾರಿ ಹೇಳುವುದು ಬ್ರಹ್ಮಾಂಡದ ಎಲ್ಲಾ ಸೃಷ್ಟಿಯಲ್ಲೇ ಅತ್ಯಂತ ನೀಚ ಸೃಷ್ಟಿ ಮನುಷ್ಯ ಮಾತ್ರ.
-ವಿಭಾ (ವಿಶ್ವಾಸ್ ಭಾರದ್ವಾಜ್)








