ಮುಂಬೈ, ಜೂನ್ 8: ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಸಹಾಯಹಸ್ತ ಚಾಚಿದ ನಟ ಸೋನು ಸೂದ್ ಅವರ ಮಹಾತ್ಕಾರ್ಯದಲ್ಲಿ ಶಿವಸೇನೆ ತಪ್ಪನ್ನು ಹುಡುಕಿದೆ. ಸೋನು ಸೂದ್ ಲಾಕ್ ಡೌನ್ ಸಂದರ್ಭದಲ್ಲಿ ಉದಯಿಸಿದ ಮಹಾತ್ಮ ಎಂದು ವ್ಯಂಗ್ಯ ಮಾಡಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿ ಕೊಡುವ ಮಹಾತ್ಕಾರ್ಯದಲ್ಲಿ ಬಾಲಿವುಡ್ ನಟ ಸೋನು ಸೂದ್ ತೊಡಗಿರುವುದು ಎಲ್ಲರಿಗೂ ತಿಳಿದೆ ಇದೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ರಾಜ್ಯಪಾಲರೂ ಅವರನ್ನು ರಾಜಭವನಕ್ಕೆ ಆಹ್ವಾನಿಸಿ ಅವರ ಕಾರ್ಯಕ್ಕೆ ಬೆನ್ನು ತಟ್ಟಿದ್ದರು. ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಆಹ್ವಾನದ ಮೇರೆಗೆ ಮೇ 31 ರಂದು ರಾಜಭವನಕ್ಕೆ ತೆರಳಿದ ಸೋನು ಸೂದ್ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ನಿಟ್ಟಿನಲ್ಲಿ ತಾನು ಕೈಗೊಂಡ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದರು. ಅವರ ಆಹಾರ, ಪ್ರಯಾಣದ ವ್ಯವಸ್ಥೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ಒದಗಿಸಿದ್ದರು. ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ರಾಜ್ಯಪಾಲರು ತಾವು ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ ಸೋನು ಸೂದ್ ಮಹಾತ್ಕಾರ್ಯದ ಬಗ್ಗೆ ಟ್ವೀಟ್ ಮಾಡಿ ಬೆನ್ನು ತಟ್ಟಿದ್ದರು.
ಆದರೆ ಶಿವಸೇನಾ ವಕ್ತಾರ ಸಂಜಯ್ ರಾವತ್ ಮಾತ್ರ ಸೋನು ಸೂದ್ ಅವರ ಕಾರ್ಯದಲ್ಲಿ ತಪ್ಪು ಹುಡುಕಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಸೋನು ಸೂದ್ ಎನ್ನುವ ಮಹಾತ್ಮನೊಬ್ಬ ಇದ್ದಕ್ಕಿದ್ದಂತೆ ಉದಯಿಸಿದ್ದಾನೆ ಎಂದು ವ್ಯಂಗ್ಯ ಮಾಡಿರುವ ಶಿವಸೇನಾ ವಕ್ತಾರ, ಸೋನು ಸೂದ್ ಒಬ್ಬ ಒಳ್ಳೆಯ ನಟ, ಅವರ ಎಲ್ಲಾ ಚಿತ್ರಕ್ಕೂ ಬೇರೆ ಬೇರೆ ನಿರ್ದೇಶಕರಿರುತ್ತಾರೆ, ಹಾಗೆಯೇ ಅವರ ಈ ಕೆಲಸದ ಹಿಂದೆಯೂ ಕೂಡ ರಾಜಕೀಯ ನಿರ್ದೇಶಕರಿರಬಹುದು ಎಂದು ಸಂಜಯ್ ರಾವತ್ ಬಗ್ಗೆ ಕೊಂಕು ಮಾತುಗಳನ್ನಾಡಿದ್ದಾರೆ.

ನಟ ಸೋನು ಸೂದ್ ಅವರು ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ತವರು ರಾಜ್ಯಕ್ಕೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದ ರಾಜ್ಯಪಾಲರು ಕೂಡ ಕರೆದು ಬೆನ್ನು ತಟ್ಟಿದ್ದಾರೆ. ಇದನ್ನೆಲ್ಲಾ ನೋಡುವಾಗ ವಲಸೆ ಕಾರ್ಮಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಏನೂ ಮಾಡಿಲ್ಲ ಎಂದು ತೋರುತ್ತಿದೆ ಎಂದಿರುವ ಶಿವಸೇನಾ ವಕ್ತಾರ ಸಂಜಯ್ ರಾವತ್ ಲಾಕ್ ಡೌನ್ ಸಮಯದಲ್ಲಿ ನಟ ಸೋನು ಸೂದ್ ಅವರಿಗೆ ಬಸ್ಗಳು ಎಲ್ಲಿಂದ ದೊರೆತವು ಎಂದು ಪ್ರಶ್ನಿಸಿ ತಮ್ಮ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ಅಷ್ಟೇ ಅಲ್ಲ ಸೋನು ಸೂದ್ ಇಷ್ಟರಲ್ಲೇ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈನ ಸೆಲೆಬ್ರಿಟಿ ಮ್ಯಾನೇಜರ್ ಆಗಲಿದ್ದಾರೆ ಎಂದು ಕಿಡಿಕಾರಿದ್ದಾರೆ.








