shraddha murder
ದೇಶದಾದ್ಯಂತ ಸಂಚಲನ ಮೂಡಿಸಿದ ಮುಂಬೈ ನಿವಾಸಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಲ್ಲಿ ದಿನನಿತ್ಯ ಹೊಸ ಹೊಸ ಆಘಾತಕಾರಿ ಸಂಗತಿಗಳು ಹೊರಬೀಳುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಮುಂದೆ ವಿಚಾರಣೆಯ ಸಮಯದಲ್ಲಿ ಆಫ್ತಾಬ್ ಕೆಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ. ತನಿಖೆ ವೇಳೆ ತಾನು ಡ್ರಗ್ಸ್ಗೆ ಅಡಿಕ್ಟ್ ಆಗಿರುವುದಾಗಿ ಒಪ್ಪಿಕೊಂಡಿದ್ದು, ನಶೆಯಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ. ತಾನು ಪ್ರತಿನಿತ್ಯ ಗಾಂಜಾ ಸೇವಿಸುತ್ತಿದ್ದೆ, ನಶೆಯಲ್ಲಿ ತೇಲಾಡುತ್ತಿದ್ದೆ. ಅಷ್ಟೇ ಅಲ್ಲ ಆಗಾಗ ಇಬ್ಬರ ನಡುವೆ ಖರ್ಚಿನ ವಿಷಯದಲ್ಲಿ ಜಗಳವಾಗುತ್ತಿತ್ತು.
ಕೊಲೆಯಾದ ದಿನ ಕೂಡ ತೀವ್ರ ಮಾತಿನ ಜಕಮಕಿ ನಡೆದಿದ್ದು, ಜಗಳದ ನಡುವೆ ನಾನು ಮನೆಯಿಂದ ಹೊರ ಹೋಗಿ ಗಾಂಜಾ ಸೇವಿಸಿ ಮನೆಗೆ ವಾಪಸ್ ಆಗಿದ್ದೆ. ಆ ವೇಳೆ ಶ್ರದ್ಧಾ ಮತ್ತೆ ಜಗಳ ಮಾಡಿದ್ದು, ಗಾಂಜಾ ನಶೆಯಲ್ಲಿದ್ದ ನಾನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿ, ರಾತ್ರಿಯಿಡೀ ಗಾಂಜಾ ತುಂಬಿದ ಸಿಗರೇಟ್ ಸೇದುತ್ತಾ ಶ್ರದ್ಧಾ ದೇಹದ ಬಳಿಯೇ ಇದ್ದೆ ಎಂದು ಅಫ್ತಾಬ್ ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರ ವಶದಲ್ಲಿರುವ ಆಫ್ತಾಬ್ ಗೆ 5 ದಿನಗಳ ಒಳಗೆ ಮಂಪರು ಪರೀಕ್ಷೆಗೆ ಒಳಪಡಿಸುವಂತೆ ರೋಹಿಣಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ನ್ಯಾಯಾಲಯವು ಆದೇಶಿಸಿದೆ.
ಮಂಪರು ಪರೀಕ್ಷೆ ನಿರ್ಧಾರದ ಬಳಿಕ ಅಫ್ತಾಬ್ ತನ್ನ ಹೇಳಿಕೆಯನ್ನು ಬದಲಿಸಿದ್ದು, ಶ್ರದ್ಧಾ ದೇಹವನ್ನು 35 ಭಾಗವಲ್ಲ ಬದಲಿಗೆ 16 ಭಾಗಗಳಾಗಿ ತುಂಡರಿಸಿದ್ದಾಗಿ ಹೇಳಿಕೊಂಡಿದ್ದಾನೆ. ತಲೆಯನ್ನು ಗುರುತು ಸಿಗದಂತೆ ಸುಟ್ಟು ಎಸೆದಿರುವುದಾಗಿ ತಿಳಿಸಿದ್ದಾನೆ.
ಈಗಾಗಲೇ ಪೊಲೀಸರು ಶ್ರದ್ಧಾಳ ದೇಹದ ಕೆಲವು ಭಾಗಗಳನ್ನು ಗುರುತಿಸಿ, ಡಿಎನ್ಎ ಟೆಸ್ಟ್ಗೆ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದಾರೆ.








