ತುಳುವೆರೆ ಚಾವಡಿಗೆ 25ರ ಸಂಭ್ರಮ; ತುಳು ಭಾಷೆ ಅಧಿಕೃತ ಸ್ಥಾನಮಾನಕ್ಕಾಗಿ ಒಗ್ಗಟ್ಟಿನ ಮಂತ್ರ….
ಹೃದಯ ಭಾವನೆಗಳ ಇನ್ನೊಂದು ರೂಪವೇ ಭಾಷೆ. ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ.
ಈ ಎರಡು ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಓಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

ಬೆಂಗಳೂರಿನ ತುಳುವೆರೆ ಚಾವಡಿ 25ನೇ ವರ್ಷದ ಬೊಳ್ಳಿ ಪರ್ಬ ಕಾರ್ಯಕ್ರಮದಲ್ಲಿ ಜೋಕುಲೆ ಉಜ್ಜಾಲ್ ತುಳು ಪದ ಮಾಲೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ತುಳುಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರ ಕೂಡ ಹೋರಾಟದ ಹಾದಿಯಲ್ಲಿದೆ. ಆದ್ರೆ ಅದಕ್ಕಿಂತ ಮುನ್ನ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸಬೇಕು. ಈಗಾಗಲೇ ಸರ್ಕಾರ ಈ ಬಗ್ಗೆ ಅಧ್ಯಯನ ಸಮಿತಿಯನ್ನು ರಚಿಸಿದ್ದು, ಇದು ಆದಷ್ಟು ಬೇಗ ಜಾರಿಯಾಗಲು ತುಳುನಾಡಿನವರು ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದು ಹೇಳಿದ್ರು.
ಇನ್ನು ನಮ್ಮ ಮಾತೃಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಕರಾವಳಿಯ ಜನರಲ್ಲಿ ನಾಯಕತ್ವದ ಗುಣವಿದೆ. ಸದಾ ಕ್ರೀಯಾಶೀಲತೆಯಿಂದ ಇರುವ ಜನ ಆತ್ಮವಿಶ್ವಾಸದಿಂದ ಇರುತ್ತಾರೆ. ಹಾಗೇ ತುಳುಭಾಷೆ ಜಾತಿ ಧರ್ಮವನ್ನು ಮೀರಿ ನಿಂತಿದೆ ಎಂದು ತುಳುಭಾಷೆಯಲ್ಲಿ ಅಡಗಿರುವ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

ರಾಜ್ಯ ಸರ್ಕಾರ ಈಗಾಗಲೇ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿಸಲು ಅಧ್ಯಯನ ಸಮಿತಿಯನ್ನು ರಚಿಸಿದೆ. ಹಾಗೇ ತುಳು ಭಾಷೆಯ ಲಿಪಿಯೂ ಸರಿಯಾಗಬೇಕು. ಜೊತೆಗೆ ಶಾಲೆಗಳಲ್ಲಿ ತುಳು ಭಾಷೆಯನ್ನು ನಾಲ್ಕನೇ ತರಗತಿಯವರೆಗೆ ಆಯ್ಕೆಯ ಭಾಷೆಯನ್ನಾಗಿಸಬೇಕು ಎಂದು ಸಲಹೆ ನೀಡಿದ್ರು.
ಇದೇ ವೇಳೆ, ಖ್ಯಾತ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲ್, ಹಿರಿಯ ತುಳು ಸಾಹಿತಿಗಳಾದ ಕುಶಲಾಕ್ಷಿ ವಿ.ಕಣ್ವತೀರ್ಥ, ಸಮಾಜ ಸೇವೆಗಾಗಿ ರವಿ ಕಟಪಾಡಿ, , ಪ್ರಕಾಶ್ ಜೆ ಶೆಟ್ಟಿಗಾರ್ ಇವರಿಗೆ ತುಳುನಾಡ್ದ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಇಂಗ್ಲೀಷ್ ಮತ್ತು ಬೇರೆ ಭಾಷೆಯ ರೈಮ್ ಸ್ ಬದಲಾಗಿ ತುಳು ಭಾಷೆಯ ಸಾಹಿತ್ಯವನ್ನ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದೊಂದಿಗೆ ಜೋಕುಲೆ ಉಜ್ಜಾಲು ಪುಸ್ತಕ ಬಿಡುಗಡೆ ಮಾಡಲಾಯಿತು. ಇದರ ಜೊತೆಗೆ ಸಾಹಿತಿ ಪ್ರೊಫೆಸರ್ ಕೆ ಇ ರಾಧಾಕೃಷ್ಣ ಅವರ ಸತ್ಯಪ್ಪೆ ಬಾಲೆಲು ತುಳು ಕಥೆಯ ಆಡಿಯೋ ಪುಸ್ತಕವನ್ನ ಲೋಕಾರ್ಪಣೆಗೊಳಿಸಲಾಯಿತು.
ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಿರಿಯ ತುಳು -ಕನ್ನಡ ಸಾಹಿತಿ ಡಿ.ಕೆ.ಚೌಟ ಇವರ ಸಂಸ್ಮರರ್ಣಾಥವಾಗಿ ಹಿರಿಯ ತುಳು ಸಾಹಿತಿ ಉಗಪ್ಪ ಪೂಜಾರಿಯವರಿಗೆ ಪ್ರಶಸ್ತಿ ಮತ್ತು ಸಾಮಾಜಿಕ ಚಿಂತಕ ,ತುಳು ಹೊರಾಟಗಾರ ಡಾ.ಉದಯ ಧರ್ಮಸ್ಥಳ ಇವರ ಸಂಸ್ಮರರ್ಣಾಥವಾಗಿ ತುಳು ಸೇವೆ. ಯುವ ಪ್ರತಿಭೆ ಸತೀಶ್ ಅಗ್ಪಲ್ ರವರಿಗೆ ಪ್ರಶಸ್ತಿ ನೀಡಲಾಯ್ತು. ವಿಶೇಷ ಚೇತನ ಮೂವರು ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಉಮೇಶ್ ಪೂಂಜಾ ಸೇರಿದಂತೆ ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.
Bengaluru: Tuluvere Chavadi celebrates 25 years; Unity mantra for official status of Tulu language….








