ಕಾವಾಡಿ ದಂಪತಿ ಆನೆ ಮರಿಗೆ ತಾಯಿಯಾಗಿ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಗೆ ‘ವೇದಾ’ ಮೊದಲನೇ ಹೆಣ್ಣು ಮಗಳು ಆಗಿದ್ದಾಳೆ. ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆ ಮರಿಯೇ ಈ ವೇದಾ.ಈಗ ರಾಜು ಮತ್ತು ರಮ್ಯ ಮಡಿಲು ಸೇರಿರುವ ವೇದಾ ಇವರಿಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.
ಏಳು ತಿಂಗಳ ಹಿಂದೆ ನುಗು ಅರಣ್ಯ ಪ್ರದೇಶದಲ್ಲಿ ಈ ಆನೆ ಮರಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟಾಗ 14 ದಿನಗಳ ಮಗು. ನಿಂತ ಜಾಗದಲ್ಲಿಯೇ ನಿಂತು ಕಾದು ಕನಲಿದರೂ ಅಮ್ಮ ಬರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನು ರಕ್ಷಣೆ ಮಾಡಿತ್ತು. ಮೈಸೂರು ಮೃಗಾಲಯಕ್ಕೆ ಕಳುಹಿಸಲು ನಿರ್ಧರಿಸಿ ಕೊನೆಗೆ ರಾಂಪುರ ಶಿಬಿರಕ್ಕೆ ಕರೆತರಲಾಯಿತು.
ರಾಜು ರಮ್ಯ ದಂಪತಿಗೆ ಅರಣ್ಯ ಇಲಾಖೆ ಆನೆ ಮರಿಯ ಪೋಷಣೆ ಜವಾಬ್ದಾರಿಯನ್ನು ನೀಡಿದ್ದು, 7 ತಿಂಗಳಿಂದ ಕಾವಾಡಿ ದಂಪತಿ ಆನೆ ಮರಿಯನ್ನು ಜತನದಿಂದ ಕಾಪಾಡುತ್ತಿದ್ದಾರೆ. ಪುಟಾಣಿ ಆನೆಗೆ ನಿತ್ಯ ಹಾಲು ಕುಡಿಸುವುದು, ಸ್ನಾನ ಮಾಡಿಸುವುದು, ವಾಕಿಂಗ್ ಕರೆದೊಯ್ಯುವುದು, ಹುಲ್ಲು ತಿನ್ನುವ ಅಭ್ಯಾಸ ಮಾಡಿಸುವುದು ಹೀಗೆ ಅದರೆ ಪಾಲನೆ, ಪೋಷಣೆಯಲ್ಲಿ ರಾಜು-ರಮ್ಯ ನಿರತರಾಗಿದ್ದಾರೆ.