ಹಾಸನ: ಯುವಕ ಪ್ರೀತಿಸಿ ಕೈ ಕೊಟ್ಟಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಹಾಸನ(Hassan) ಜಿಲ್ಲೆಯ ಬೇಲೂರು ತಾಲ್ಲೂಕಿನ ಬೆಳ್ಳೋಟ್ಟೆ ಗ್ರಾಮದ ಆಶಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಬೇಲೂರಿನ ಸರ್ಕಾರಿ ವೈಡಿಡಿ ಪದವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಪದವಿ ಓದುತ್ತಿದ್ದ ಆಶಾ, ತನ್ನೊಂದಿಗೆ ಓದುತ್ತಿದ್ದ ಮಂಜುನಾಥ್ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದಳು. ಆನಂತರ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು.
ಆದರೆ, ಇತ್ತೀಚೆಗೆ ಮಂಜುನಾಥ್ ಆಶಾಳೊಂದಿಗೆ ಮತ್ತೊಂದು ಹುಡುಗಿಯೊಂದಿಗೆ ಪ್ರೀತಿ, ಪ್ರೇಮದ ನಾಟಕವಾಡಿದ್ದ ಎನ್ನಲಾಗಿದೆ. ೀ ವಿಷಯ ತಿಳಿಯುತ್ತಿದ್ದಂತೆ ಜಗಳವಾಗಿದೆ. ಆಗ ಮಂಜುನಾಥ್, ಆಶಾಗೆ ನೀನೆ ನನ್ನಿಂದ ದೂರವಾಗು. ಇಲ್ಲವಾದರೆ, ನಮ್ಮಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆಘಾತಗೊಂಡ ಆಶಾ, ಕಾಲೇಜಿಗೆ ಹೋದ ವೇಳೆಯೇ ವಿಷ ಸೇವಿಸಿದ್ದಾಳೆ.
ಆಗ ಮಂಜುನಾಥನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಎಂಟು ದಿನಗಳ ಕಾಲ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಆಶಾ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನ ಬಂಧಿಸಿ, ನಮಗೆ ನ್ಯಾಯ ಕೊಡಿಸಬೇಕೆಂದು ಯುವತಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.