ಆನೇಕಲ್ : ವ್ಯಕ್ತಿಯೊಬ್ಬ ತನ್ನ ಮಗಳನ್ನೇ ಕೊಲೆ ಮಾಡಿದ ಘಟನೆ ನಡೆದಿದೆ.
ಈ ಘಟನೆ ನಗರದಲ್ಲಿ ನಡೆದಿದೆ. ತಂದೆಯೇ ಅಪ್ರಾಪ್ತ ಮಗಳನ್ನು ಮಚ್ಚಿನಿಂದ ಕೊಚ್ಚಿ ಮರ್ಯಾದಾ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಎಚ್.ಡಿ. ಕೋಟೆ ಮೂಲದ ಗಣೇಶ್ ಮತ್ತು ಶಾರದಾ ದಂಪತಿಯ ಪುತ್ರಿಯೇ ಕೊಲೆಯಾದವಳು. ಯುವತಿ ಪ್ರೀತಿಯ ಬಲೆಗೆ ಬಿದ್ದಿದ್ದರು. ಹೀಗಾಗಿ ಕುಟುಂಬಸ್ಥರು ಯುವತಿಯನ್ನು ನಾಗನಾಥಪುರದಲ್ಲಿನ ಮಾವನ ಮನೆಯಲ್ಲಿ ಬಿಟ್ಟಿದ್ದರು.
ಆದರೆ, ಹುಡುಗಿ ನಾಗನಾಥಪುರದ ಮಾವನ ಮನೆಯಿಂದ ಕಾಣೆಯಾಗಿದ್ದಳು. ಪ್ರೀತಿಸಿದ ಹುಡುಗನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ಹುಡುಗಿಯನ್ನು ಕರೆ ತಂದಿದ್ದರು. ಆಗ ಮಾವ ಮತ್ತೆ ಕರೆದುಕೊಂಡು ಹೋಗಿದ್ದರು.
ಈ ವೇಳೆ ತಂದೆ ಬಂದು ಗಲಾಟೆ ಆರಂಭಿಸಿದ್ದಾರೆ. ಆಗ ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಬಿಡಿಸಲು ಬಂದ ಮಾವ ಹಾಗೂ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಈ ವೇಳೆ ಮಗಳು ಸಾವನ್ನಪ್ಪಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.