ಕಲಬುರಗಿ: ಕೆಪಿಎಸ್ಸಿ ವಿವಿಧ ಇಲಾಖೆಗಳ ಪರೀಕ್ಷೆ ನಡೆಯುತ್ತಿದ್ದು, ಯುವಕರು ಕಳ್ಳ ಮಾರ್ಗ ಹಿಡಿದು ಜೈಲು ಸೇರಿರುವ ಘಟನೆ ನಡೆದಿದೆ.
ಬ್ಲೂಟೂತ್ ಬಳಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದು, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬ್ಲೂಟೂತ್ ಬಳಸಿಯೇ ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದವರು ಸಿಕ್ಕಿಬಿದ್ದಿದ್ದಾರೆ. ಯುವಕನೋರ್ವ 80 ಸಾವಿರ ರೂಪಾಯಿ ಸಂಬಳ ಬಿಟ್ಟು ಸರ್ಕಾರಿ ನೌಕರಿ ಆಸೆಗೆ ಬಿದ್ದು ಈಗ ಜೈಲು ಸೇರುವಂತಾಗಿದೆ.
ಆಕಾಶ ಮಂಠಾಳೆ ಈ ರೀತಿ ಜೈಲು ಸೇರಿರುವ ವ್ಯಕ್ತಿ. ಈ ಯುವಕ ಬಿಇ ಮೆಕ್ಯಾನಿಕಲ್ ಪೂರೈಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಸರ್ಕಾರಿ ನೌಕರಿ ಬಯಸಿ, ಅಕ್ರಮವಾಗಿ ಪರೀಕ್ಷೆ ಬರೆಯುತ್ತಿದ್ದ ಎನ್ನಲಾಗಿದೆ. 25 ಲಕ್ಷ ರೂ. ಆರ್.ಡಿ ಪಾಟೀಲ್ ಜೊತೆ ಡೀಲ್ ಮಾಡಿಕೊಂಡು ಈ ಪೈಕಿ 8 ಲಕ್ಷ ರೂ. ಅಡ್ವಾನ್ಸ್ ಸಹ ನೀಡಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಅಡ್ಡಹಾದಿ ಹಿಡಿದ ಯುವಕ ಸದ್ಯ ಜೈಲು ಪಾಲಾಗಿದ್ದಾನೆ.