ಪಾಟ್ನಾ: ಪಾಟ್ನಾದಲ್ಲಿ ಜೆಡಿಯು ನಾಯಕನನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಯುವ ನಾಯಕ ಸೌರಭ್ ಗುಂಡಿಗೆ ಬಲಿಯಾದ ಯುವ ನಾಯಕ. ಪಾಟ್ನಾದಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಸೌರಭ್, ನಿತೀಶ್ ಕುಮಾರ್ ನೇತೃತ್ವದ ಜನತಾ ದಳ ಯುನೈಟೆಡ್ (ಜೆಡಿಯು) ಯುವ ಮುಖಂಡನಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಘಟನೆಯಲ್ಲಿ ಸೌರಭ್ ತಲೆಗೆ ಎರಡು ಗುಂಡುಗಳು ತಗುಲಿವೆ. ದಾಳಿಯಲ್ಲಿ ಸೌರಭ್ ಸ್ನೇಹಿತ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ನೇಹಿತ ಮುನ್ಮುನ್ ಗೆ ಮೂರು ಗುಂಡುಗಳು ತಗುಲಿವೆ. ಕೂಡಲೇ ಸ್ಥಳೀಯರ ಸಹಾಯದಿಂದಾಗಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರು ಸೌರಭ್ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಆದರೆ, ಸ್ನೇಹಿತ ಮುನ್ಮುನ್ ಆಸ್ಪತ್ರೆಯಲ್ಲಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಘಟನೆ ಖಂಡಿಸಿದ ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ವಿಶೇಷ ತಂಡದ ಮೂಲಕ ತನಿಖೆ ಕೈಗೊಳ್ಳಲಾಗಿದೆ.