ಕಾನ್ಪುರ: ಮಗಳ ಹಿಂದೆ ಯುವಕನೊಬ್ಬ ಓಡಾಡುತ್ತಿದ್ದಾನೆಂದು ವಕೀಲನೊಬ್ಬ ಆತನನ್ನು ಕಿಡ್ನಾಪ್ ಮಾಡಿಸಿ, ಥಳಿಸಿ, ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ.
ತನ್ನ ಮಗಳೊಂದಿಗೆ ತಿರುಗಾಡುತ್ತಿದ್ದಾಗ ಸಿಕ್ಕಿಬಿದ್ದ ನಂತರ ವಕೀಲ ಮತ್ತು ಅವರ ಸಹಾಯಕರು ಆತನನ್ನು ಅಮಾನುಷವಾಗಿ ಥಳಿಸಿದ್ದಾರೆ. ಕಾನ್ಪುರದಲ್ಲಿ ಫಾರ್ಮಾ ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಅಮಾನುಷವಾಗಿ ಚಿತ್ರಹಿಂಸೆ ನೀಡಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ರಕ್ಷಿಸಿದ್ದು, ವಕೀಲರನ್ನು ಬಂಧಿಸಲಾಗಿದೆ. ಎಂಟು ಜನರ ಗುಂಪು ವಿದ್ಯಾರ್ಥಿಯನ್ನು ಅಪಹರಿಸಿ, ತೀವ್ರವಾಗಿ ಥಳಿಸಿ, ಚಿತ್ರಹಿಂಸೆ ನೀಡಿದೆ. ಆ ಗುಂಪು ಅವನನ್ನು ಕಾಡಿಗೆ ಕರೆದೊಯ್ದು ದೊಣ್ಣೆ, ಕಬ್ಬಿಣದ ರಾಡ್ ಮತ್ತು ಬೆಲ್ಟ್ನಿಂದ ಹೊಡೆದಿದೆ ಎಂದು ಆತ ಹೇಳಿದ್ದಾನೆ.
ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಗುಂಪು ಆತನನ್ನು ಕೊಂದು ಶವವನ್ನು ಗಂಗಾ ನದಿಗೆ ಎಸೆಯುವುದಾಗಿ ಬೆದರಿಕೆ ಹಾಕಿದೆ ಎಂದು ಪೊಲೀಸರು ಹೇಳಿದ್ದಾರೆ.