T20 World Cup ಗೆಲ್ಲಬೇಕೆನ್ನುವ ಭಾರತೀಯರ ಕನಸು ನನಸಾಗಿದೆ. 2013 ರಿಂದ ಟೀಮ್ ಇಂಡಿಯಾ (Team India) ಪಾಲಿಗೆ ಮರೀಚಿಕೆಯಾಗಿದ್ದ ಐಸಿಸಿ ಟ್ರೋಫಿ ಈಗ ಮತ್ತೆ ಮರಳಿ ಸಿಕ್ಕಿದೆ. ನಾಯಕನಾಗಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಿದ್ದ ರೋಹಿತ್, ಈಗ ಟ್ರೋಫಿ ಗೆದ್ದು ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.
ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾನ ನಾಯಕತ್ವದ ಭಾರತ ತಂಡವು 7 ರನ್ಗಳ ರೋಚಕ ಜಯ ಸಾಧಿಸಿತು. ಈ ರೋಚಕ ಗೆಲುವಿನ ಬೆನ್ನಲ್ಲೇ ಭಾವುಕರಾದ ರೋಹಿತ್ ಶರ್ಮಾ ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸಿದ್ದಾರೆ.
ಕಣ್ಣೀರಿನೊಂದಿಗೆ ತನ್ನ ಬಹುಕಾಲದ ಕನಸು ಈಡೇರಿಸಿದ ಕೆನ್ಸಿಂಗ್ಟನ್ ಓವಲ್ ಮೈದಾನದ ಪಿಚ್ ಗೆ ಧನ್ಯವಾದ ಅರ್ಪಿಸಿ ನಮಿಸಿದ್ದಾರೆ. ಅಲ್ಲದೆ ಪಿಚ್ ನಲ್ಲಿನ ಹುಲ್ಲನ್ನು ಕಿತ್ತು ತಿನ್ನುವ ಮೂಲಕ ಸ್ಮರಣೀಯ ಸಮಯವನ್ನು ಮನದಲ್ಲಿ ಹುದುಗಿಸಿಟ್ಟುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ಈ ಭಾವುಕ ಕ್ಷಣಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ, ಈ ಗೆಲುವಿನ ಮೂಲಕ ರೋಹಿತ್ ಶರ್ಮಾ ಅವರು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಈ ಗೆಲುವಿನ ಮೂಲಕ ಭಾರತದ ಪರ ವಿಶ್ವಕಪ್ ಗೆದ್ದ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. 1983 ರಲ್ಲಿ ಕಪಿಲ್ ದೇವ್ ಮೊದಲ ಬಾರಿಗೆ ಈ ಸಾಧನೆ ಮಾಡಿದರೆ, 2007 ಮತ್ತು 2011 ರಲ್ಲಿ ಭಾರತ ತಂಡ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಗೆದ್ದಿತ್ತು. ಈಗ 2024 ರಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.