ನವದೆಹಲಿ: ಭಾರತದ ಸೇನಾ ಪಡೆಯ (Chief of Army Staff) 30ನೇ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ಸ್ವೀಕರಿಸಿದ್ದಾರೆ.
ಜನರಲ್ ಮನೋಜ್ ಸಿ ಪಾಂಡೆ ಅವರ ಸೇವಾವಧಿ ಮುಗಿದ ಹಿನ್ನೆಲೆಯಲ್ಲಿ ಉಪೇಂದ್ರ ದ್ವಿವೇದಿ ಸೇನಾ ಪಡೆಯ ಪರಮೋಚ್ಚ ಪದವಿಗೆ ಆಯ್ಕೆಯಾಗಿದ್ದರು. ಅವರು ಇದಕ್ಕೂ ಮುನ್ನ ನಾಲ್ಕು ತಿಂಗಳ ಕಾಲ ಸೇನಾ ಪಡೆಯ ವೈಸ್ ಚೀಫ್ ಆಗಿ ಕೆಲಸ ಮಾಡಿದ್ದರು. ಸೇನಾ ಪಡೆಯ ವಿವಿಧ ಸ್ತರ ಮತ್ತು ಹುದ್ದೆಗಳಲ್ಲಿ ಕೂಡ ಕೆಲಸ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ನೌಕಾಪಡೆ ಮುಖ್ಯಸ್ಥರಾಗಿರುವ ಅಡ್ಮಿರಲ್ ದಿನೇಶ್ ಕೆ ತ್ರಿಪಾಠಿ ಮತ್ತು ಈಗ ಸೇನಾ ಪಡೆ ಮುಖ್ಯಸ್ಥರಾಗಿರುವ ಉಪೇಂದ್ರ ದ್ವಿವೇದಿ ಇಬ್ಬರೂ ಒಂದು ಕಾಲದಲ್ಲಿ ಸಹಪಾಠಿಗಳಾಗಿದ್ದರು. 60 ವರ್ಷ ವಯಸ್ಸಿನ ಈ ಇಬ್ಬರು ಮಧ್ಯಪ್ರದೇಶದ ರೇವಾ ನಗರದ ಸೈನಿಕ್ ಶಾಲೆಯಲ್ಲಿ ಓದಿದ್ದರು. ಈಗ ರಕ್ಷಣಾ ಪಡೆಯಲ್ಲಿ ಕೂಡ ಸಹವರ್ತಿಗಳಾಗಿದ್ದಾರೆ.
1964ರ ಜುಲೈ 1ರಂದು ಹುಟ್ಟಿದ ಜನರಲ್ ಉಪೇಂದ್ರ ದ್ವಿವೇದಿ ಅವರು ಚೀನಾ ಮತ್ತು ಪಾಕಿಸ್ತಾನ ವಿಚಾರದಲ್ಲಿ ಸಾಕಷ್ಟು ಕಾರ್ಯಾಚರಣೆಯ ಅನುಭವ ಹೊಂದಿದ್ದಾರೆ. ಚೀನಾ ಗಡಿ ಭಾಗದಲ್ಲಿ ಕಾರ್ಯಾಚರಿಸುವ ನಾರ್ತರ್ನ್ ಕಮಾಂಡ್ ನ ಮುಖ್ಯ ಕಮಾಂಡರ್ ಆಗಿ 2022ರಿಂದ 2024ರವರೆಗೂ ಅವರು ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಭಾರತದ ಸೇನಾ ಪಡೆಯಲ್ಲಿ 13 ಲಕ್ಷ ಸೈನಿಕರಿದ್ದಾರೆ. ವಿಶ್ವದ ಅತಿದೊಡ್ಡ ಸೇನಾ ಪಡೆಗಳಲ್ಲಿ ಭಾರತವೂ ಒಂದು. ಇವತ್ತಿನ ದಿನಗಳಲ್ಲಿ ಯುದ್ಧದ ಸ್ವರೂಪವೇ ಬದಲಾಗುತ್ತಿದೆ. ಕೈಯಲ್ಲಿ ಬಂದೂಕು ಹಿಡಿದು ನುಗ್ಗಿ ಹೊಡೆದಾಡಬೇಕಾದ ಪ್ರಮೇಯ ಬಹಳ ಕಡಿಮೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇತ್ಯಾದಿ ಆಧುನಿಕ ತಂತ್ರಜ್ಞಾನಗಳನ್ನು ಬಳಸುವ ಮಿಲಿಟರಿ ಪಡೆಗಳೇ ಬಲಿಷ್ಠ ಎನಿಸುತ್ತವೆ. ಹೊಸ ಸೇನಾ ಮುಖ್ಯಸ್ಥರು ಇಂತಹ ಹೊಸ ತಂತ್ರಜ್ಞಾನ ಅಳವಡಿಕೆ ಬಗ್ಗೆ ಆಸಕ್ತಿ ಹೊಂದಿದವರಾಗಿದ್ದಾರೆ. ಇದು ಭಾರತೀಯ ಸೇನೆಗೆ ಹೆಚ್ಚಿನ ಬಲ ನೀಡುವಂತಿದೆ.