ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಿಖ್ಖರ ಬಗ್ಗೆ ಭಾರತದಲ್ಲಿ ತಮ್ಮ ಹೇಳಿಕೆಗಳನ್ನು ಪುನರಾವರ್ತಿಸಬೇಕು. ಆಗ ಅವರನ್ನು ನ್ಯಾಯಾಲಯಕ್ಕೆ ತರುತ್ತೇವೆ ಎಂದು ಬಿಜೆಪಿ ವಕ್ತಾರ ಆರ್.ಪಿ. ಸಿಂಗ್ (RP Singh) ಹೇಳಿದ್ದಾರೆ.
ಆಕ್ರೋಶ ವ್ಯಕ್ತಪಡಿಸಿರುವ ಆರ್.ಪಿ. ಸಿಂಗ್, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ 1984 ರ ಗಲಭೆಯಲ್ಲಿ 3000 ಸಿಖ್ಖರು ಕೊಲೆಯಾದರು. ದೆಹಲಿಯಲ್ಲಿ 3 ಸಾವಿರ ಸಿಖ್ಖರನ್ನು ಕೊಲೆ ಮಾಡಲಾಯಿತು. ಹಲವರ ಪೇಟ ತೆಗೆಸಿ, ಕೂದಲು ಕತ್ತರಿಸಿ, ಗಡ್ಡ ಬೋಳಿಸಿದರು. ರಾಹುಲ್ ಗಾಂಧಿ ಅವರು ಸಿಖ್ಖರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಭಾರತದಲ್ಲಿ ಮತ್ತೊಮ್ಮೆ ಹೇಳಲಿ ಎಂದು ನಾನು ಸವಾಲು ಹಾಕುತ್ತೇನೆ. ನಂತರ ನಾನು ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ನ್ಯಾಯಾಲಯದ ಮುಂದೆ ತರುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಮಾತನಾಡಿ, ವಿರೋಧ ಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದಿಗೂ ವಿದೇಶದಲ್ಲಿ ಸರ್ಕಾರದ ಮೇಲೆ ದಾಳಿ ನಡೆಸಿಲ್ಲ. “ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ವಿಪಕ್ಷ ನಾಯಕನ ಸ್ಥಾನ ಹೊಂದಿದ್ದು, ಆ ಸ್ಥಾನವು ಜವಾಬ್ದಾರಿಯುತ ಸ್ಥಾನವಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರು ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾಗ, ವಿದೇಶದಲ್ಲಿ ಅವರು ಎಂದಿಗೂ ದೇಶದ ಪ್ರತಿಷ್ಠೆಯನ್ನು ಕೆಡಿಸಲು ಪ್ರಯತ್ನಿಸಲಿಲ್ಲ. ಆದರೆ, ರಾಹುಲ್ ದೇಶದ ಮಾನ ತೆಗೆಯಲು ಮುಂದಾಗಿದ್ದಾರೆ. ಸತತ ಮೂರನೇ ಬಾರಿ ಸೋಲು ಕಂಡಿದ್ದರಿಂದಾಗಿ ರಾಹುಲ್ ಮನಸ್ಸಿನಲ್ಲಿ ಬಿಜೆಪಿ, ಆರೆಸ್ಸೆಸ್ ಮತ್ತು ಮೋದಿ ವಿರೋಧಿ ಭಾವನೆಗಳು ಬೇರೂರಿವೆ. ಹೀಗಾಗಿ ಅವರು ಎಲ್ಲಿಯೇ ಹೋದರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.