ಮೈಸೂರು: ದಸರಾ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಆನೆಗಳ ತಾಲೀಮು ಕೂಡ ನಡೆಯುತ್ತಿದೆ. ಈ ಮಧ್ಯೆ ಗಜಪಡೆಯ (Mysuru Dasara Elephants) ಧನಂಜಯ ಆನೆಯು ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿಯಾಗಿ ದಾಳಿ ಮಾಡಿದೆ. ಈ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಆಗ ಕಂಜನ್ ಆನೆ ಅರಮನೆ ಆವರಣದಿಂದ ಓಡಿ ಹೋಗಿದೆ.
ಕಂಜನ್ ಕಾಲಿಗೆ ಕಟ್ಟಿದ್ದ ಸರಪಳಿಯನ್ನೂ ಕಿತ್ತು ಓಡಿ ಹೋಗಿದೆ. ಆಗ ಆನೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಹರಸಾಹಸ ಪಡುತ್ತಿರುವ ದೃಶ್ಯಗಳೂ ವೈರಲ್ ಆಗಿವೆ. ಆಗ ‘ಮಹೇಂದ್ರ’ ಆನೆಯು ಕಂಜನ್ ಆನೆ ನಿಯಂತ್ರಿಸಲು ಹಿಂದೆ ಓಡಿದೆ. ಇದನ್ನು ಕಂಡ ಜನರು ಭಯದಿಂದ ಓಡಿ ಹೋಗಿದ್ದಾರೆ.
ದೊಡ್ಡಕೆರೆ ಮೈದಾನದ ಬೆಂಗಳೂರು- ನೀಲಗಿರಿ ರಸ್ತೆಯಲ್ಲಿನ ವಾಹನಗಳನ್ನು ನೋಡುತ್ತಿದ್ದಂತೆ ಕಂಜನ್ ಬೆದರಿ ನಿಂತಿದ್ದಾನೆ. ಆಗ ಮಾವುತರು ಕಾವಾಡಿಗರು ಸಮಾಧಾನ ಪಡಿಸಿದ್ದಾರೆ. ಆದರೆ, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.
ಈ ಬಾರಿ ದಸರಾದಲ್ಲಿ 14 ಆನೆಗಳು ಸಕ್ರಿಯವಾಗಿ ಭಾಗಿಯಾಗುತ್ತಿವೆ. ನಾಲ್ಕು ಆನೆಗಳನ್ನು ಮೀಸಲು ಆನೆಗಳನ್ನಾಗಿ ಆಯ್ಕೆ ಮಾಡಲಾಗಿದೆ. ಒಂದು ವೇಳೆ ಈ 14 ಆನೆಗಳ ಆರೋಗ್ಯದಲ್ಲಿ ಏನಾದರೂ ವ್ಯತ್ಯಯ, ವ್ಯತ್ಯಾಸಗಳಾದರೆ ಮೀಸಲು ಆನೆ ಬಳಸಲು ತೀರ್ಮಾನಿಸಿರಲಾಗಿರುತ್ತದೆ.