ಬೆಂಗಳೂರು: ರಾಜಧಾನಿಯಲ್ಲಿ ಚಂಡಮಾರುತದ ಪರಿಣಾಮದಿಂದಾಗಿ ಉತ್ತಮವಾಗಿ ಮಳೆಯಾಗುತ್ತಿದೆ. ಎರಡು ದಿನ ರಜೆ ಪಡೆದಿದ್ದ ಮಳೆ ಈಗ ಮತ್ತೆ ಸುರಿಯುತ್ತಿದೆ.
ಶನಿವಾರ ರಾತ್ರಿ ಕೂಡ ಮಳೆಯಾಗಿದ್ದು, ಹಲವೆಡೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಕುಮಾರಸ್ವಾಮಿ ಲೇಔಟ್ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸುಮಾರು 10ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನ ಪರಿತಪಿಸುವಂತಾಗಿತ್ತು. ಇಡೀ ರಾತ್ರಿ ನೀರು ಹೊರಹಾಕಲು ನಿವಾಸಿಗಳು ಪರದಾಡಿದ್ದಾರೆ. ಆದರೆ ನೀರಿನ ಪ್ರಮಾಣ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ಜನ – ಜೀವನ ಅಸ್ತವ್ಯಸ್ಥಗೊಂಡಿದೆ.
ರಾತ್ರಿ ಸುರಿದ ಮಳೆಗೆ ಪರಪ್ಪನ ಅಗ್ರಹಾರ ಸರ್ಜಾಪುರ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ. ನಾಗನಾಥಪುರ ಬಳಿ ರಸ್ತೆಯಲ್ಲಿ ನೀರು ತುಂಬಿದೆ. ಸಾಯಿ ಲೇಔಟ್ ಮತ್ತೊಮ್ಮೆ ಜಲಾವೃತಗೊಂಡಿದೆ. ಹಲವೆಡೆ ವಿದ್ಯುತ್ ಸಂಪರ್ಕ ಬಂದ್ ಆಗಿದೆ. ನೀರಿನ ವ್ಯವಸ್ಥೆ ಕೂಡ ಇಲ್ಲದಾಗಿದೆ. ಕೆಂಗೇರಿ, ಆರ್.ಆರ್ ನಗರ ಸುತ್ತಮುತ್ತ ಕೂಡ ಉತ್ತಮವಾಗಿ ಮಳೆ ಸುರಿದಿದೆ. ಮಳೆಯಿಂದಾಗಿ ಎಲೆಕ್ಟ್ರಾನ್ ಸಿಟಿ ಫ್ಲೈ ಓವರ್ ಜಾಮ್ ಆಗಿತ್ತು. ಮಳೆಯಿಂದಾಗಿ ಕಿ.ಮೀಗಟ್ಟಲೆ ವಾಹನಗಳು ನಿಂತಿದ್ದವು.