ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸವಾಲು ಹಾಕಿದ್ದಾರೆ.
ನನ್ನ ವಿರುದ್ಧ ಯಾವುದೇ ದಾಖಲೆ, ವಿಡಿಯೋ, ಆಡಿಯೋ ಇದ್ದರೆ ಶುಭ ಮುಹೂರ್ತ ನೋಡದೆ, ಒಂದು ಕ್ಷಣವೂ ಯೋಚಿಸದೆ ಬಿಡುಗಡೆ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರ ನಿವಾಸದಲ್ಲಿ ಸಭೆ ನಡೆಯಿತು. ಸಭೆಯ ನಂತರ ವಿಜಯೇಂದ್ರ ಅವರು ಈ ಹೇಳಿಕೆ ನೀಡಿದ್ದಾರೆ.
ವಿಪಕ್ಷಗಳೊಂದಿಗೆ ವಿಜಯೇಂದ್ರ ಹೊಂದಾಣಿಕೆ ಮಾಡಿಕೊಂಡಿರುವ ಕುರಿತು ಸಾಕ್ಷ್ಯಾಧಾರ ಇದೆ, ಬಿಡುಗಡೆ ಮಾಡ್ಲಾ? ಎಂಬ ಯತ್ನಾಳ್ ಹೇಳಿಕೆಗೆ ವಿಜಯೇಂದ್ರ ಈ ರೀತಿ ತಿರುಗೇಟು ನೀಡಿದ್ದಾರೆ. ಯತ್ನಾಳ್ ಒಂದು ಕ್ಷಣವೂ ಯೋಚನೆ ಮಾಡೋದು ಬೇಡ. ನನ್ನ ವಿರುದ್ಧ ದಾಖಲೆ, ವೀಡಿಯೋ ಇದ್ದರೆ ಬಿಡುಗಡೆ ಮಾಡಲಿ. ಕಾಂಗ್ರೆಸ್ (Congress) ಹೊಂದಾಣಿಕೆ ನನಗೆ ಅವಶ್ಯಕತೆ ಇಲ್ಲ. ಆದರೆ ಹೊಂದಾಣಿಕೆ ರಾಜಕಾರಣ ಅಂತಾ ಪಕ್ಷ ಸಂಘಟನೆಗೆ ಪೆಟ್ಟು ಕೊಡುತ್ತಿದ್ದಾರೆ. ಅವರಿಗೆಲ್ಲ ಒಳ್ಳೆಯದಾಗಲಿ. ಆದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎನ್ನುವುದು ಕಾರ್ಯಕರ್ತರ ಆಗ್ರಹವಾಗಿದೆ. ಯಾರೂ ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ.
ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವಾರು ಶಾಸಕರು ಮನವಿ ಮಾಡುತ್ತಿದ್ದಾರೆ. ಕೆಲವರು ಯತ್ನಾಳ್ ಹೆಗಲ ಮೇಲೆ ಗನ್ ಇಟ್ಟುಕೊಂಡು ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಅವರದ್ದು ಏನೇ ಉದ್ದೇಶ ಇದ್ದರೂ ಸಫಲ ಆಗಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು ಎಂಬುವುದು ಮಾತ್ರ ನಮ್ಮ ಉದ್ಧೇಶವಾಗಿದೆ. ಯತ್ನಾಳ್ ಅವರು ಯಡಿಯೂರಪ್ಪ ಮತ್ತೆ ವಿಜಯೇಂದ್ರಗೆ ಬೈಯ್ಯೋದೆ ಒಂದು ಕಾಯಕ ಮಾಡಿಕೊಂಡಿದ್ದಾರೆ ಎಂದಿದ್ದಾರೆ.








