ಪಾಕ್ ಕ್ರಿಕೆಟ್ ಮಂಡಳಿಗೆ ಶಾಕ್ ನೀಡಿದ ಸೌರವ್ ಗಂಗೂಲಿ
ಕ್ರಿಕೆಟ್ ವಿಚಾರದಲ್ಲೂ ಅಷ್ಟೇ.. ಭಾರತ ಪಾಕಿಸ್ತಾನವನ್ನು ಕ್ಯಾರೇ ಮಾಡುತ್ತಿಲ್ಲ. ಈಗಾಗಲೇ ಭಾರತ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದೀಗ ಬಿಸಿಸಿಐ ಸರದಿ. ವಿಶ್ವ ಕ್ರಿಕೆಟ್ ನ ದೊಡ್ಡಣ್ಣ ಖ್ಯಾತಿಯ ಬಿಸಿಸಿಐ ಪಾಕ್ ಕ್ರಿಕೆಟ್ ಮಂಡಳಿಯನ್ನು ಕೇಳದೇ ಏಕಾಏಕಿ ತೀರ್ಮಾನವನ್ನು ತೆಗೆದುಕೊಂಡಿದೆ.
ಹೌದು, 2020ರ ಏಷ್ಯಾಕಪ್ ಟೂರ್ನಿ ರದ್ದುಗೊಂಡಿದೆ ಎಂದು ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಹೇಳಿದ್ದಾರೆ. ಸೆಪ್ಟಂಬರ್ ನಲ್ಲಿ ನಡೆಯಬೇಕಿದ್ದ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದ್ರೆ ಪಾಕ್ ಆತಿಥ್ಯ ವಹಿಸಿದ್ರೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಆಡುವುದು ಅನುಮಾನವಾಗಿತ್ತು. ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳಿಂದ ಭಾರತ ಪಾಕ್ ನೆಲದಲ್ಲಿ ಆಡಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸಲು ಚಿಂತನೆ ಮಾಡಿತ್ತು. ಈ ನಡುವೆ, ಶ್ರೀಲಂಕಾ ಕ್ರಿಕೆಟ್ ಮಂಡಳಿ ಏಷ್ಯಾಕಪ್ ಟೂರ್ನಿಯನ್ನು ಆಯೋಜಿಸಲು ಮುಂದೆ ಬಂದಿತ್ತು.
ಇದೆಲ್ಲದರ ನಡುವೆ ಗಂಗೂಲಿ ಏಷ್ಯಕಪ್ ಟೂರ್ನಿ ರದ್ದುಗೊಂಡಿದೆ ಎಂದು ಖಾಸಗಿ ಲೈವ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಈ ನಡುವೆ, ಐಸಿಸಿಯು ಮುಂಬರುವ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಗ್ಗೆ ಇನ್ನೂ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಸದ್ಯದ ಸ್ಥಿತಿಯಲ್ಲಿ ಟಿ-ಟ್ವೆಂಟಿ ಟೂರ್ನಿ ನಡೆಯುವುದು ಅನುಮಾನವಾಗಿದೆ. ಅದೇ ರೀತಿ ಸೆಪ್ಟಂಬರ್ -ಅಕ್ಟೋಬರ್- ನವೆಂಬರ್ ನಲ್ಲಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಆದ್ರೆ ಕೋವಿಡ್ -19 ಸಾಂಕ್ರಮಿಕ ರೋಗದ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿರುವುದರಿಂದ ಈ ವರ್ಷ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆಯುವುದು ಕೂಡ ಅನುಮಾನವಾಗಿದೆ.
ಗಂಗೂಲಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಸಿಬಿ
ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯಿಸಿದೆ. ಪಿಸಿಬಿಯ ಮಾಧ್ಯಮ ನಿರ್ದೇಶಕರಾದ ಸಮಿಯುಲ್ ಹಸನ್ ಬರ್ನಿ ಅವರು, ಗಂಗೂಲಿ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. 2020ರ ಏಷ್ಯಾಕಪ್ ಟೂರ್ನಿಯ ಭವಿಷ್ಯವನ್ನು ನಿರ್ಧಾರ ಮಾಡುವುದು ಏಷ್ಯನ್ ಕ್ರಿಕೆಟ್ ಸಮಿತಿ. ಹೀಗಾಗಿ ಏಷ್ಯನ್ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾದ ನಝ್ಮುಲ್ ಹಸನ್ ಅವರು ಈ ಬಗ್ಗೆ ನಿರ್ಧಾರವನ್ನು ಪ್ರಕಟಿಸುತ್ತಾರೆ. ಮುಂದಿನ ಎಸಿಸಿ ಸಭೆಯಲ್ಲಿ ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಗಂಗೂಲಿ ಹೇಳಿಕೆಯನ್ನು ಗಮನಿಸಿದಾಗ ಭಾರತ ಏಷ್ಯಾಕಪ್ ಟೂರ್ನಿಯಲ್ಲಿ ಆಡುತ್ತಿಲ್ಲ. ಬದಲಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಸಂಘಟಿಸುವತ್ತ ಹೆಚ್ಚಿನ ಗಮನ ಹರಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.