ಆರೋಗ್ಯ ಮುಖ್ಯ… ಆಮೇಲೆ ಕ್ರಿಕೆಟ್… ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆ- ಸೌರವ್ ಗಂಗೂಲಿ
ಕೊರೋನಾ ಹಾವಳಿ ಭಾರತದಲ್ಲಿ ಮಿತಿ ಮೀರುತ್ತಿದೆ. ಹೀಗಾಗಿ ಕಳೆದ ಮೂರು ನಾಲ್ಕು ತಿಂಗಳಿಂದ ಭಾರತವಲ್ಲ ಇಡೀ ವಿಶ್ವವೇ ಸ್ತಬ್ದವಾಗಿದೆ. ಈ ನಡುವೆ ಇಂಗ್ಲೆಂಡ್ ನಲ್ಲಿ ಕ್ರಿಕೆಟ್ ಆಟಕ್ಕೆ ಚಾಲನೆ ನೀಡಲಾಗಿದೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಕೋವಿಡ್ -19 ಅವಾಂತರದ ನಡುವೆಯೇ ಟೆಸ್ಟ್ ಸರಣಿಯನ್ನು ಆಡುತ್ತಿದೆ.
ಇನ್ನು ಭಾರತದಲ್ಲಿ ಸದ್ಯದ ಪರಿಸ್ಥಿತಿ ನೋಡಿದ್ರೆ ಕ್ರಿಕೆಟ್ ಚಟುವಟಿಕೆಗಳು ಶುರುವಾಗುವ ಸಾಧ್ಯತೆಗಳು ತೀರಾ ಕಮ್ಮಿ. ಏನಿದ್ರೂ ಮುಂದಿನ ಮೂರು ನಾಲ್ಕು ತಿಂಗಳು ಕಾಯಲೇಬೇಕು. ಈಗಾಗಲೇ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ. ಶ್ರೀಲಂಕಾ ಸರಣಿಗಳನ್ನು ರದ್ದು ಮಾಡಿದೆ. ಅದೇ ರೀತಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯೂ ರದ್ದುಗೊಂಡಿದೆ. ಈ ನಡುವೆ ಟಿ-ಟ್ವೆಂಟಿ ವಿಶ್ವಕಪ್ ನ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಐಸಿಸಿ ನಿರ್ಧಾರದ ಮೇಲೆ ಐಪಿಎಲ್ನ ಭವಿಷ್ಯ ನಿಂತಿದೆ.
ಇನ್ನೊಂದೆಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಆಯೋಜನೆಯ ಬಗ್ಗೆ ಸುಳಿವನ್ನು ನೀಡ್ತಾರೆ. ಎಲ್ಲಾ ರೀತಿಯ ಅವಕಾಶಗಳನ್ನು ಬಳಸಿಕೊಳ್ಳಲಾಗುವುದು ಅಂತನೂ ಹೇಳ್ತಾರೆ. ಮತ್ತೊಂದೆಡೆ ಈ ವರ್ಷ ಕ್ರಿಕೆಟ್ ಚಟುವಟಿಕೆಗಳು ಶುರುವಾಗುವುದು ಅನುಮಾನ ಅಂತನೂ ಹೇಳ್ತಾರೆ. ಯಾವುದಕ್ಕೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಕೋವಿಡ್ -19 ಸಾಂಕ್ರಮಿಕ ರೋಗ ಬಿಡುತ್ತಿಲ್ಲ.
ಇನ್ನು ದೇಸಿ ಕ್ರಿಕೆಟ್ ಬಗ್ಗೆ ಮಾತನಾಡಿರುವ ಗಂಗೂಲಿ, ದೇಸಿ ಕ್ರಿಕೆಟ್ ಕೂಡ ಮುಖ್ಯ. ಆದ್ರೆ ಮೊದಲು ಸುರಕ್ಷತೆಗೆ ಆದ್ಯತೆ. ಆಮೇಲೆ ಕ್ರಿಕೆಟ್. ಕೋವಿಡ್-19 ಹತೋಟಿಗೆ ಬಂದು ಆಟಗಾರರ ಪ್ರಯಾಣ ಸುರಕ್ಷಿತವಾದಾಗ ಮಾತ್ರ ದೇಸಿ ಟೂರ್ನಿಗಳನ್ನು ಆಯೋಜಿಸುತ್ತೇವೆ. ಅಲ್ಲಿಯವರೆಗೆ ದೇಸಿ ಟೂರ್ನಿಗಳನ್ನು ಆಯೋಜನೆ ಮಾಡುವುದಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ದೇಸಿ ಟೂರ್ನಿಗಳಾದ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ, ಸೈಯ್ಯದ್ ಮುಷ್ತಾಕ್ ಆಲಿ ಟ್ರೋಫಿ ಸೇರಿದಂತೆ ಹಲವು ಟೂರ್ನಿಗಳನ್ನು ಆಯೋಜನೆ ಮಾಡಲಾಗುತ್ತದೆ. ಆದ್ರೆ ಆಟಗಾರರು ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಬೆಳೆಸಬೇಕಾಗುತ್ತದೆ. ಈ ನಡುವೆ ಕೊರೋನಾ ಹಾವಳಿ ಕೂಡ ಜಾಸ್ತಿಯಾಗುತ್ತಿದೆ. ಅದೂ ಅಲ್ಲದೆ ಬಹುತೇಕ ರಾಜ್ಯಗಳಲ್ಲಿ ನಿರ್ಬಂದಗಳಿವೆ. ಹೀಗಾಗಿ ಟೂರ್ನಿಯನ್ನು ಆಯೋಜಿಸಲು ಈಗ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಆಟಗಾರರ ಸುರಕ್ಷತೆ ಮುಖ್ಯವಾಗಿರುತ್ತದೆ. ಅದೇ ರೀತಿ ದೇಸಿ ಟೂರ್ನಿಗಳು ಮಹತ್ವ ಪಡೆದುಕೊಂಡಿವೆ. ಹಾಗಂತ ಕೊರೋನಾ ಸೋಂಕು ಕಡಿಮೆಯಾಗಿ ಹತೋಟಿಗೆ ಬರುವ ತನಕ ದೇಸಿ ಟೂರ್ನಿಯನ್ನು ಆಯೋಜನೆ ಮಾಡಲು ಅಸಾಧ್ಯ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.