ತಪ್ಪು ನನ್ನದಲ್ಲ… ಕೆಕೆಆರ್ ಮ್ಯಾನೇಜ್ಮೆಂಟ್ನದ್ದು… 12 ವರ್ಷಗಳ ಬಳಿಕ ಗಂಗೂಲಿ ಹೇಳಿದ್ದೇನು ?
2008ರ ಐಪಿಎಲ್… ಅದು ಚೊಚ್ಚಲ ಐಪಿಎಲ್ ಟೂರ್ನಿ. ಆ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದವರು ಸೌರವ್ ಗಂಗೂಲಿ. ತವರಿನ ತಂಡದ ನಾಯಕನಾಗಿದ್ದ ಸೌರವ್ ಗಂಗೂಲಿಯ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಕೊಲ್ಕತ್ತಾದ ಮಹಾರಾಜ ಖ್ಯಾತಿಯ ಗಂಗೂಲಿಗೆ ತವರು ಅಭಿಮಾನಿಗಳ ಬೆಂಬಲವೂ ಇತ್ತು. ಆದ್ರೆ ಗಂಗೂಲಿ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಅಂದುಕೊಂಡಂತೆ ಕೆಕೆಆರ್ ತಂಡ ಮೊದಲ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ.
ಇದೀಗ ಗಂಗೂಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಕೆಕೆಆರ್ ತಂಡ ಆರಂಭದ ಮೂರು ಋತುಗಳಲ್ಲಿ ಯಾಕೆ ಕಳಪೆ ಪ್ರದರ್ಶನ ನೀಡಿತ್ತು ಎಂಬುದನ್ನು ಹೇಳಿದ್ದಾರೆ. ಗಂಗೂಲಿ ಹೇಳುವ ಪ್ರಕಾರ ತಂಡದ ಕಳಪೆ ನಿರ್ವಹಣೆಗೆ ಮುಖ್ಯ ಕಾರಣ ಟೀಮ್ ಮ್ಯಾನೇಜ್ಮೆಂಟ್. ಅದ್ರಲ್ಲೂ ಆಸ್ಟ್ರೇಲಿಯಾದ ಕೋಚ್ ಆಗಿದ್ದ ಜಾನ್ ಬುಕನನ್. ಜಾನ್ ಬುಕನನ್ ಅವರು ಬಹು ನಾಯಕತ್ವದ ಪದ್ಧತಿಯಿಂದಾಗಿ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಎರಡು ವರ್ಷಗಳ ಕಾಲ ಕೆಕೆಆರ್ ತಂಡ ಕೋಚ್ ಆಗಿ ಜಾನ್ ಬುಕನನ್ ಕಾರ್ಯನಿರ್ವಹಿಸಿದ್ದರು. ಆದಾದ ನಂತರ ಅವರನ್ನು ಕೆಕೆಆರ್ ವಜಾಗೊಳಿಸಿತ್ತು. ಆ ನಂತರ ಮತ್ತೆ ಸೌರವ್ ಗಂಗೂಲಿ ತಂಡದ ನಾಯಕತ್ವ ವಹಿಸಿದ್ದರು. ಆದ್ರೆ ಗಂಗೂಲಿಗೆ ಕೆಕೆಆರ್ ಟೀಮ್ ಮ್ಯಾನೇಜ್ಮೆಂಟ್ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿರಲಿಲ್ಲ.
ನನಗೆ ಕೆಕೆಆರ್ ಟೀಮ್ ಮ್ಯಾನೇಜ್ಮೆಂಟ್ ಸಂಪೂರ್ಣ ಸ್ವಾತಂತ್ರ್ಯ ನೀಡಿರಲಿಲ್ಲ. ನಾನು ಟೀಮ್ ಮ್ಯಾನೇಜ್ಮೆಂಟ್ ಬಳಿ ಮೊದಲೇ ಹೇಳಿದ್ದೆ. ತಂಡವನ್ನು ಕಟ್ಟುವುದು ಮತ್ತು ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ಬಿಟ್ಟು ಬಿಡಿ ಎಂದು. ಆದ್ರೆ ಕೆಕೆಆರ್ ಟೀಮ್ ಮ್ಯಾನೇಜ್ಮೆಂಟ್ ಅಂತಹ ಸ್ವಾತಂತ್ರ್ಯವನ್ನು ನೀಡಲಿಲ್ಲ. ಬದಲಾಗಿ ತಂಡದಲ್ಲಿ ನಾಲ್ವರು ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದರು. ಇದು ತಂಡದ ಒಟ್ಟಾರೆ ನಿರ್ವಹಣೆಯ ಮೇಲೆ ಪರಿಣಾಮ ಬೀರಿತ್ತು ಎಂದು ದಾದಾ ಹೇಳಿದ್ದಾರೆ.
ಗಂಗೂಲಿ ನಂತರ ಕೆಕೆಆರ್ ತಂಡದ ಸಾರಥಿಯಾಗಿ 20011ರಲ್ಲಿ ಗೌತಮ್ ಗಂಭೀರ್ ಆಯ್ಕೆಯಾದ್ರು. ಗಂಭೀರ್ ನೇತೃತ್ವದಲ್ಲಿ ಕೆಕೆಆರ್ ತಂಡ 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗ ಗಂಭೀರ್ ಅವರಿಗೆ ಪೂರ್ತಿ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಈ ವಿಚಾರವನ್ನು ಗಂಭೀರ್ ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಶಾರೂಕ್ ಖಾನ್ ಇಡೀ ತಂಡದ ನಿರ್ವಹಣೆಯನ್ನು ಬಿಟ್ಟುಕೊಟ್ಟಿದ್ದರು. ಇದು ನಿನ್ನ ತಂಡ. ನಾನು ಇದರಲ್ಲಿ ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ. ಇದೇ ಮಾತನ್ನು ಶಾರೂಕ್ ಬಳಿ ನಾನು ಹೇಳಿದ್ದೆ. ಆದ್ರೆ ನನಗೆ ಅವರು ಅವಕಾಶವನ್ನು ನೀಡಲಿಲ್ಲ. ಇದ್ರಲ್ಲಿ ನನ್ನ ತಪ್ಪು ಏನು ಇಲ್ಲ. ಟೀಮ್ ಮ್ಯಾನೇಜ್ಮೆಂಟಿನದ್ದು. ಅದ್ರಲ್ಲೂ ಕೋಚ್ ಜಾನ್ ಬುಕನನ್ ಅವರದ್ದು ಎಂದು ಗಂಗೂಲಿ ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಅಲ್ಲದೆ ಮೊದಲ ಮೂರು ಋತುಗಳಲ್ಲಿ ಕೆಕೆಆರ್ ಟೀಮ್ ಮ್ಯಾನೇಜ್ ಮೆಂಟ್ ಮಾಡಿರುವ ತಪ್ಪುಗಳನ್ನು ಅನಾವರಣಗೊಳಿಸಿದ್ರು.
ಕೆಕೆಆರ್ ತಂಡದ ಪರ ಮೂರು ವರ್ಷ ಆಡಿದ್ದ ನಂತರ ಗಂಗೂಲಿ ಪುಣೆ ವಾರಿಯರ್ಸ್ ತಂಡವನ್ನು ಸೇರಿಕೊಂಡ್ರು. 2012ರಲ್ಲಿ ಗಂಗೂಲಿ ಐಪಿಎಲ್ಗೂ ನಿವೃತ್ತಿ ಹೇಳಿದ್ರು. ಸದ್ಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿದ್ದಾರೆ. ಹಾಗೇ ಬಿಸಿಸಿಐ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.