ಗ್ರೆಗ್ ಚಾಪೆಲ್ ಮಾತ್ರವಲ್ಲ…ಇಡೀ ವ್ಯವಸ್ಥೆಯ ಪಿತೂರಿಗೆ ನನ್ನ ನಾಯಕತ್ವ ಬಲಿಯಾಯ್ತು – ಸೌರವ್ ಗಂಗೂಲಿ
2007ರ ವಿಶ್ವಕಪ್ ಗೆಲುವಿನ ಕನಸು ಹೇಗೆ ಭಗ್ನಗೊಂಡಿತ್ತು ಎಂಬುದನ್ನು ಗಂಗೂಲಿ ಹೇಳೋದು ಹೀಗೆ..!
ಅದ್ಯಾಕೋ ಸೌರವ್ ಗಂಗೂಲಿಗೆ ಈಗ ಹಳೆಯ ದಿನಗಳು ನೆನಪಾಗುತ್ತಿವೆ. ಇಷ್ಟು ದಿನ ಮೌನವಾಗಿದ್ದ ಗಂಗೂಲಿ ಒಂದೊಂದೇ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾದ ನಾಯಕನಾಗಿ ಬಲಿಷ್ಠ ತಂಡವನ್ನೇ ಕಟ್ಟಿದ್ದ ದಾದಾ ಅವರ ಕ್ರಿಕೆಟ್ ಬದುಕಿನಲ್ಲಿ ಕೆಲವೊಂದು ಕೆಟ್ಟ ಘಟನೆಗಳು ನಡೆದಿವೆ. ಇಲ್ಲಿಯವರೆಗೆ ತಾನು ಹೇಗೆ ತಂಡವನ್ನು ಕಟ್ಟಿದ್ದೇ. ಆಟಗಾರರಿಗೆ ಯಾವ ರೀತಿ ಸ್ವಾತಂತ್ರ್ಯ ಕೊಟ್ಟೆ.. ತಂಡವನ್ನು ಹೇಗೆ ಮುನ್ನೆಡೆಸಿದ್ದೆ.. ಯಾವ ಯಾವ ಯುವ ಆಟಗಾರರಿಗೆ ಪ್ರೋತ್ಸಾಹ ಕೊಟ್ಟೆ.. ತನ್ನ ಡ್ರೀಮ್ ಟೀಮ್ನಲ್ಲಿ ಯಾರೆಲ್ಲಾ ಇದ್ದಾರೆ ಹೀಗೆ ಒಂದೊಂದೇ ವಿಷ್ಯವನ್ನು ಹೇಳಿಕೊಂಡಿದ್ದಾರೆ.
ಅದೇ ರೀತಿ ಈಗ ಮತ್ತೊಂದು ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಅದು ಏನು ಅಂದ್ರೆ ಟೀಮ್ ಇಂಡಿಯಾದ ನಾಯಕತ್ವದಿಂದ ತನ್ನನ್ನು ಯಾವ ರೀತಿ ಕೆಳಗಿಳಿಸಲಾಯಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ಆ ಸಮಯದಲ್ಲಿ ತನಗೆ ಆಗಿರುವ ಅನ್ಯಾಯದ ಬಗ್ಗೆಯೂ ಬೇಸರಗೊಂಡಿದ್ದಾರೆ. ಜೊತೆಗೆ 2007ರ ವಿಶ್ವಕಪ್ ಗೆಲ್ಲಬೇಕು ಅಂತ ಕನಸು ಕಂಡಿದ್ದೆ. ಆದ್ರೆ ಆ ಕನಸು ನುಚ್ಚು ನೂರಾಯ್ತು. ಇಡೀ ವ್ಯವಸ್ಥೆಯ ಪಿತೂರಿಯಿಂದಾಗಿ ನಾನು ನಾಯಕತ್ವವನ್ನು ತ್ಯಜಿಸಬೇಕಾಯ್ತು ಅಂತ ಗಂಗೂಲಿ ಹೇಳಿದ್ದಾರೆ.
ನನ್ನ ಕ್ರಿಕೆಟ್ ಬದುಕಿನ ಅತ್ಯಂತ ದೊಡ್ಡ ಹಿನ್ನೆಡೆ ಅಂದ್ರೆ ಅದು 2005ರಲ್ಲಿ ನನ್ನನ್ನು ನಾಯಕತ್ವದಿಂದ ಕೆಳಗಿಸಿದ್ದು. ನಾಯಕತ್ವದಿಂದ ಕೆಳಗಿಳಿಸಿದ್ದು ದೊಡ್ಡ ಅನ್ಯಾಯ. ನನಗೆ ಗೊತ್ತು ಎಲ್ಲಾ ಸಮಯದಲ್ಲೂ ನ್ಯಾಯ ಸಿಗುವುದಿಲ್ಲ ಎಂಬುದು. ಆದ್ರೆ ಆಗ ನಾನು ತಂಡದ ನಾಯಕನಾಗಿದ್ದೆ. ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿ ತವರಿಗೆ ಬಂದಿಳಿದಾಗ ನನ್ನನ್ನು ನಾಯಕತ್ವವನ್ನೇ ಕಿತ್ತುಕೊಳ್ಳಲಾಗಿತ್ತು ಅಂತ ಸೌರವ್ ಗಂಗೂಲಿ ಬೆಂಗಾಳಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.
2007ರ ವಿಶ್ವಕಪ್ ಗೆಲ್ಲಬೇಕು ಎಂದು ನಾನು ಕನಸು ಕಂಡಿದ್ದೆ. 2003ರ ವಿಶ್ವಕಪ್ ನಲ್ಲಿ ನಾವು ಫೈನಲ್ ನಲ್ಲಿ ಸೋತಿದ್ದೇವು. ಇದೇ ಕಾರಣದಿಂದ ವಿಶ್ವಕಪ್ ಗೆಲ್ಲಬೇಕು ಎಂಬ ಕನಸು ನನ್ನಲ್ಲಿತ್ತು. ನನ್ನ ನಾಯಕತ್ವದಡಿಯಲ್ಲಿ ತಂಡವೂ ಶ್ರೇಷ್ಠ ಪ್ರದರ್ಶನವನ್ನೂ ನೀಡುತ್ತಿತ್ತು. ಅದೂ ಅಲ್ಲದೆ ಐದು ವರ್ಷಗಳ ಅವಧಿಯಲ್ಲಿ ನನ್ನ ಸಾರಥ್ಯದಲ್ಲಿ ಟೀಮ್ ಇಂಡಿಯಾ ದೇಸಿ ಮತ್ತು ವಿದೇಶಿ ನೆಲದಲ್ಲಿ ಉತ್ತಮ ನಿರ್ವಹಣೆಯನ್ನು ನೀಡಿತ್ತು. ಆದ್ರೆ ಸಡನ್ ಆಗಿ ನನ್ನನ್ನು ನಾಯಕತ್ವದಿಂದ ಕೈಬಿಡಲಾಗಿತ್ತು. ಹಾಗೇ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಿಂದಲೂ ನನ್ನನ್ನು ದೂರ ಮಾಡಲಾಗಿತ್ತು ಎಂದು ಗಂಗೂಲಿ ತನ್ನ ಕ್ರಿಕೆಟ್ ಬದುಕಿನ ಕಹಿ ಘಟನೆಗಳನ್ನು ಸ್ಮರಿಸಿಕೊಂಡು ಬೇಸರ ವ್ಯಕ್ತಪಡಿಸಿದ್ರು.
ಹಾಗಂತ ಈ ವಿಚಾರದಲ್ಲಿ ನಾನು ಆಗಿನ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ಒಬ್ಬರೇ ಕಾರಣ ಅಂತ ಹೇಳುತ್ತಿಲ್ಲ. ಆದ್ರೆ ನನ್ನನ್ನು ಮೊದಲು ಗುರಿಯಾಗಿರಿಸಿದ್ದು ಗ್ರೆಗ್ ಚಾಪೆಲ್ ಎಂಬುದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ ನನ್ನ ವಿರುದ್ಧ ಅವರು ಇಮೇಲ್ಗಳನ್ನು ಬಿಸಿಸಿಐ ಬೋರ್ಡ್ಗೆ ಕಳುಹಿಸುತ್ತಿದ್ದರು. ಹಾಗೇ ಅವರು ಕಳುಹಿಸುತ್ತಿದ್ದ ಇಮೇಲ್ಗಳು ಲೀಗ್ ಆಗುತ್ತಿದ್ದವು. ಒಂದು ಕ್ರಿಕೆಟ್ ತಂಡ ಅಂದ್ರೆ ಅದು ಕುಟುಂಬವಿದ್ದಂತೆ. ಅಲ್ಲಿ ಮನಸ್ತಾಪ, ಭಿನ್ನಾಭಿಪ್ರಾಯಗಳು ಬರೋದು ಸಹಜ. ಅದನ್ನು ಒಂದೇ ಮಾತಿನಲ್ಲಿ ಸರಿಪಡಿಸಬಹುದಿತ್ತು. ಒಬ್ಬ ತರಬೇತುದಾರನಾಗಿ ಗ್ರೆಗ್ ಚಾಪೆಲ್ಗೆ ನನ್ನ ತಪ್ಪುಗಳನ್ನು ಹೇಳಬಹುದಿತ್ತು. ಆದ್ರೆ ಅವರು ಹಾಗೇ ಮಾಡಲಿಲ್ಲ. ಹಾಗಂತ ಇದಕ್ಕೆಲ್ಲಾ ಕಾರಣ ಚಾಪೆಲ್ ಒಬ್ಬರೇ ಅಲ್ಲ. ಇಡೀ ವ್ಯವಸ್ಥೆಯೇ ಕಾರಣವಾಗಿತ್ತು ಎಲ್ಲರೂ ಸೇರಿಕೊಂಡು ನನ್ನನ್ನು ನಾಯಕತ್ವದಿಂದ ಕೆಳಗಿಳಿಸಿದ್ರು ಎಂದು ಗಂಗೂಲಿ ಹೇಳಿದ್ದಾರೆ.
ಆದ್ರೆ ನಾನು ಆಗ ಒತ್ತಡಕ್ಕೆ ಸಿಲುಕಿಲ್ಲ. ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. 2005ರಲ್ಲಿ ತಂಡದಿಂದ ಹೊರಗುಳಿದಿದ್ರೂ 2006ರಲ್ಲಿ ಮತ್ತೆ ತಂಡವನ್ನು ಸೇರಿಕೊಂಡೆ ಎಂದು ಗಂಗೂಲಿ ತಿಳಿಸಿದ್ರು.
2007ರ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋಲು ಅನುಭವಿಸಿತ್ತು. ಲೀಗ್ನಿಂದಲೇ ಹೊರಬಿದ್ದ ಕಾರಣ ಟೀಮ್ ಇಂಡಿಯಾದಲ್ಲೂ ಅನೇಕ ಬದಲಾವಣೆಗಳಾದವು. ಹಾಗೇ ಗ್ರೆಗ್ ಚಾಪೆಲ್ ಕೋಚ್ ಹುದ್ದೆಯ ಅವಧಿ ಮುಗಿದ ಕಾರಣ ಅವರು ತವರು ಮನೆ ಸೇರಿಕೊಂಡ್ರು. 2008ರಲ್ಲಿ ಗಂಗೂಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 311 ಏಕದಿನ ಪಂದ್ಯಗಳಲ್ಲಿ ಗಂಗೂಲಿ 11363 ರನ್ ದಾಖಲಿಸಿದ್ದಾರೆ. ಇದ್ರಲ್ಲಿ 22 ಶತಕಗಳಿವೆ. ಹಾಗೇ 113 ಟೆಸ್ಟ್ ಪಂದ್ಯಗಳಲ್ಲಿ 7212 ರನ್ ಗಳಿಸಿದ್ದಾರೆ. ಇದ್ರಲ್ಲಿ 16 ಶತಕಗಳು ಸೇರಿಕೊಂಡಿವೆ.