ಎಲ್ಲರೊಳೊಂದಾಗಿ ಎಲ್ಲರಿಗೂ ನೆರವಾಗೋಣ
ಗಣೇಶ್ ಜಾಲ್ಸೂರು
ಇದೀಗ ಎಲ್ಲೆಲ್ಲೂ ಜನರು ಕ್ಷಣ ಕ್ಷಣದ ತಮ್ಮಜೀವನದ ಸ್ಥಿತಿಗತಿಗಳ ಬಗ್ಗೆ ಆತಂಕಕ್ಕೊಳಗಾಗಿದ್ದಾರೆ. ಇನ್ನೇನೂ ? ಮುಂದೇನೂ ? ಬದುಕಿನ ನೆಮ್ಮದಿ ಮೂಲವೇನು ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ವೇನೆಂದು ಪ್ರತಿಯೊಬ್ಬರೂ ಯೋಚಿಸುತ್ತಿದ್ದಾರೆ. ಇದಕ್ಕೆ ಕಾರಣ ಅವ್ಯಾಹತವಾಗಿ ಹಬ್ಬುತ್ತಿರುವ ಕೊರೋನಾ. ಇದರ ರಣಕೇಕೆಯಂತೂ ದಿನದಿಂದ ದಿನಕ್ಕೆ ತನ್ನದೇ ಆದ ಶಾಕ್ ಕೊಡುತ್ತಲೇ ಮುಂದುವರಿದೆ . ಅಂತೂ ನಾಗರಿಕರಿಗೆ ಒಂದಲ್ಲೊಂದು ಸಮಸ್ಯೆಗಳೇ ಸರದಿಯಂತೆ ಬರುತ್ತಿರುವುದು, ಗಾಯದ ಮೇಲೆ ಗಾಯವೋ, ಉರಿವ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದಯೋ ಹೇಗೇ ಹೇಳಬೇಕೋ ಒಂದೂ ಅರ್ಥವಾಗುತ್ತಿಲ್ಲ. ಈ ಕುರಿತಂತೆ ಸರಕಾರವೂ ಜನರ ಪ್ರಾಣರಕ್ಷಣೆಗೆ ಪಣತೊಟ್ಟು ಪ್ರತೀ ನಿತ್ಯವೂ ಕ್ಷಣಕ್ಷಣವೂ ಮಾಹಿತಿ ಸಂಗ್ರಹಿಸಿ ರಕ್ಷಣೆಯ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಜನರ ಜೀವ ರಕ್ಷಣೆ ಗೆ ಪಣತೊಟ್ಟಿದೆ .ಈ ಮಧ್ಯೆ ಪ್ರಕೃತಿಯ ಸ್ಥಿತ್ಯಂತರವೂ ಭೂಕಂಪ ,ಗ್ರಹಣ ,ಚಂಡಮಾರುತ, ಭಾರೀ ಮಳೆ ಎಂದೆಲ್ಲಾ ಸಹಜವಾಗಿಯೇ ಬಂದು ಹೋಗುತಿದೆ. ಜನಜೀವನ ಪ್ರಕೃತಿ ವೈಪರೀತ್ಯದ ಅನುಭವದ ಸವಾಲುಗಳನ್ನು ಎದುರಿಸಿ ಅನಾಹುತಗಳಿಂದ ಪಾರಾಗುತ್ತಾ ಮುಂದಡಿಯಿಡುತ್ತಿದ್ದಾರೆ.

ಆದರೂ ಎಲ್ಲೆಂದರಲ್ಲಿ ಕೇಳಿ ಬರುವ ಆತಂಕ ಸುದ್ದಿಯಿಂದಲೇ ಅಧೈರ್ಯವನ್ನು ಕಂಡುಕೊಳ್ಳುವಂತಾಗಿದೆ. ಕಷ್ಟವೋ ಸುಖವೋ ಇದ್ದುದರಲ್ಲಿ ತೃಪ್ತಿಪಟ್ಟು ಬದುಕನ್ನು ಸುಂದರವಾಗಿಸೋಣ ಎಂದು ಜೀವನಗಾಡಿಯಲ್ಲಿ ಮುಂದುವರಿಯುತ್ತಿದ್ದ ಪ್ರಯಾಣ ಕೊರೋನಾ ಅಡೆತಡೆಗಳ ಎಡೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.ಇದೀಗ ನಗರದ ಕೆಲವು ಮಂದಿಗಳೆಲ್ಲಾ ಸಾಕಪ್ಪಾ ಸಾಕು ಎಂದು ನಗರಕ್ಕೆ ಗುಡ್ ಬೈ ಹೇಳುತ್ತಿದ್ದೇವೆ ನಮ್ಮ ಊರನ್ನು ಸೇರಿಕೊಳ್ಳುತ್ತಿದ್ದೇವೆಂದು ಪಯಣ ಆರಂಭಿಸಿದ್ದಾರೆ. ಇನ್ನೂ ಕೆಲವರು ಮುಂಜಾಗ್ರತಾವಾಗಿ ಎಚ್ಚರವಹಿಸೋಣ ದಿಟ್ಟತನದಿ ಹೋರಾಡೋಣವೆಂದು ಅಚಲ ನಿರ್ಧಾರವನ್ನು ವ್ಯಕ್ತಪಡಿಸಿದ್ದಾರೆ. ಸರಕಾರವೂ ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಆತ್ಮವಿಶ್ವಾಸವನ್ನು ತುಂಬುತ್ತಿದೆ. ಇದು ಬೆಂಗಳೂರಿನ ಪ್ರಸ್ತುತ ಚಿತ್ರಣವೂ ಹೌದು. ಹಾಗಂತ ತಮ್ಮ ಊರು ಹಳ್ಳಿಗಳಲ್ಲಾದರೂ ನೆಮ್ಮದಿ ಇದೆಯೇ ಅದು ಇಲ್ಲವಾಗಿದೆ. ಅನಿವಾರ್ಯವಾಗಿ ಮನೆಯಿಂದ ಪೇಟೆಗೆ ಬಂದು ಹೋಗುವ ಮುಗ್ಧ ಜನರು ಕೂಡ ಕೇಳಿದ ಹೇಳಿದ ಓದಿದ ಸಂಗತಿಗಳಿಂದಲೂ ಭಯಭೀತರಾಗಿದ್ದಾರೆ. ಹಳ್ಳಿಗಳಲ್ಲೂ ಕೊರೋನಾ ಅಲ್ಲೊಂದು ಇಲ್ಲೊಂದು ಕೇಸ್ ದಾಖಲೆಯಾಗುತ್ತಲೇ ಮುಂದುವರಿದಿದೆ. ಆದರೆ ಪ್ರಸ್ತುತ ವಿದ್ಯಮಾನವನ್ನು ಕಂಡಾಗ ಜನರಲ್ಲಿ ಈ ರೀತಿಯ ಪ್ರತಿಕ್ರಿಯೆ ಇರುವುದು ಸಹಜವಲ್ಲವೇ?.
ಜನರ ಈ ಹಿಂದಿನ ದಿನಚರಿಯನ್ನು ನೆನಪಿಸುವುದಾದರೇ ಮನೆಯಿಂದ ಬರುವುದು ತಮ್ಮ ತಮ್ಮ ಅವಶ್ಯಕತೆ ಗಳನ್ನು ಪೂರೈಸುವುದರೊಂದಿಗೆ ಮನಸ್ಸಿಗೆ ಖುಷಿಕೊಡುವ ಕೆಲವೊಂದು ಸಂಭ್ರಮದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಆ ಕ್ಷಣವನ್ನು ಪರಸ್ಪರ ಹಂಚಿಕೊಳ್ಳುತ್ತಾ ಆರಾಮವಾಗಿರುತ್ತಿದ್ದರು. ಆದರೆ ಈಗ ಇದೆಲ್ಲವೂ ಸ್ತಬ್ಧವಾಗಿ ಹೋಯಿತು. ಕೊರೋನಾ ದಿನದಿಂದ ದಿನಕ್ಕೆ ತನ್ನ ಮೂಲಸ್ವರೂಪವನ್ನು ಮರೆಮಾಚುತ್ತಾ ಮಾನವನ ಪಕ್ಕೆಲುಬು ಮಾತ್ರವಲ್ಲ ಜೀವನವನ್ನೇ ಮುಗಿಸಿ ಬಿಡುವನೆಂಬ ಆಕ್ರೋಶದ ಭರದಿಂದ ನಾಡೆಲ್ಲ ವ್ಯಾಪಿಸುಕೊಳ್ಳುವಂತಾಗಿದೆ. ಮಾನವ ಕುಲವು ಇದರ ಹೆಡೆಮುರಿಕಟ್ಟಿ ಬಿಸಾಕುವ ಶತ ಪ್ರಯತ್ನದಲ್ಲಿ ತೊಡಗಿದರೂ ತಜ್ಞರ ವೈದ್ಯರ ಶೋಧನೆಗೂ ಕೊರೋನಾ ತನ್ನ ಒಳಗುಟ್ಟನ್ನು ಬಿಟ್ಟು ಕೊಡುತ್ತಿಲ್ಲ ಮತ್ತು ವೈದ್ಯರ ಕಣ್ತಪ್ಪಿಸಿ ಕೊಳ್ಳುತ್ತಿದೆ. ಅಲ್ಲದೇ ಅವರಿಗೂ ಕಾಟಕೊಟ್ಟು ತನ್ನ ಅಟ್ಟಹಾಸದ ರಣಕೇಕೆಯನ್ನು ಮುಂದುವರಿಸಿದೆ. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ತಮ್ಮ ಜಾಗ್ರತೆಯನ್ನು ಮಾಡುತ್ತಾ ತಮ್ಮ ಬಳಿ ಸುಳಿಯದಂತೆ ಎಚ್ಚರ ವಹಿಸಬೇಕಾಗಿದೆ. ಅನಾವಶ್ಯಕ ಓಡಾಟ ,ಜನಸಂದಣಿಯ ಮಧ್ಯೆ ಸೇರದಿರುವುದು . ಮಾಸ್ಕ್ ಧರಿಸಿಕೊಂಡೇ ಓಡಾಡುವ ಬಗ್ಗೆ ಗಮನವಿರಬೇಕು. ನಮ್ಮ ಪ್ರತೀ ಚಟುವಟಿಕೆಯು ಮೊದಲಿನಂತೆ ಬಿಂದಾಸಾಗಿ ಸಾಗುತ್ತಿಲ್ಲ.
ಆದರೂ ದಿನೇ ದಿನೇ ಏರುತ್ತಿರುವ ಸೋಂಕಿತರ ಸಂಖ್ಯೆಯಲ್ಲೂ ಆಸ್ಪತ್ರೆಗಳೂ ತುಂಬಿ ತುಳುಕುವಂತಾದದು ವಿಪರ್ಯಾಸ. ಇದು ಸಮಾಜದ ಸ್ವಾಸ್ಥ್ಯ ದ ವಿಚಾರದಲ್ಲಿ ಒಳ್ಳೆಯ ಲಕ್ಷಣಗಳಲ್ಲ . ಈಗೀಗ ನಮ್ಮನ್ನು ಕಾಪಾಡುವ ವೈದ್ಯರಿಗೆ, ನರ್ಸ್ ಗಳಿಗೆ, ರಕ್ಷಿಸುವ ಪೊಲೀಸ್ ಸಿಬ್ಬಂದಿಗಳಿಗೆ, ಸೇವೆಗೆ ತೊಡಗಿದ ಜನಪ್ರತಿನಿಧಿಗಳಿಗೂ ಈ ಸೋಂಕು ವಕ್ಕರಿಸಿದೆಯೆಂದರೆ ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲೂ ನಾವುಗಳೆಲ್ಲರೂ ಸದಾ ಎಚ್ಚರಿವಾಗಿರಬೇಕು ಎಂಬುದು ಮುಖ್ಯ ಸೂಚನೆಯಾಗಿದೆ.

ಸೋಂಕು ಒಳಗಾದರೆಂದರೆ ಮುಂದೆ ದಾರಿ ಇಲ್ಲವೆಂದರ್ಥವಲ್ಲ. ಬದಲಾಗಿ ಕೆಲವು ಸೋಂಕಿತರಿಗೆ ಬೇರೆ ಆರೋಗ್ಯ ಸಮಸ್ಯೆಯಿಂದ ಈ ಸಂದರ್ಭದಲ್ಲಿ ಅವರ ದೇಹಾರೋಗ್ಯ ಸ್ಪಂದಿಸುತ್ತಿಲ್ಲವಾದರಿಂದ ಜೀವಕ್ಕೆ ಕುತ್ತು ಬಂದಿರಬಹುದೆಂದು ಹೇಳಬಹುದು. ಹಾಗಾಗಿ ವೈದ್ಯರು ಸರಕಾರವೂ ಆಗಾಗ ಎಚ್ಚರ ವಹಿಸುವಂತೆ ಸೂಚಿಸುತ್ತಲೇ ಬರುತ್ತಿದ್ದಾರೆ. ಬಹಳ ವೇದನೆಯ ಮೇಲೆ ವೇದನೆಯೆಂದರೆಸೋಂಕಿತರು ಮೃತಪಟ್ಪಾಗ ಅವರ ಅಂತ್ಯಸಂಸ್ಕಾರ ರೀತಿಯೂ ರೋಸಿ ಹೋದ ಈ ಪರಿಸ್ಥಿತಿಯಲ್ಲಿ ಹೇಳುವವರಿಲ್ಲ ,ಕೇಳುವವರಿಲ್ಲ ಎಂಬಂತಾದುದು. ಹಾಗೆಯೇ ಮಾನವೀಯತೆಯ ನೆಲೆಗಟ್ಟಿನಲ್ಲಿ ಅಂತ್ಯಸಂಸ್ಕಾರದ ರೀತಿ ತುಂಬ ನೋವನ್ನುಂಟು ಮಾಡಿದೆ. ಮುಂದೆ ಹೀಗಾಗಬಾರದೆಂಬ ಎಚ್ಚರವನ್ನು ನೀಡಿ ಸರಕಾರವೂ ತತ್ತಕ್ಷಣವಾಗಿ ಕ್ರಮಕೈಗೊಂಡಿದೆ.
ಈ ಘೋರ ಆತಂಕದ ಮಧ್ಯೆ ಪ್ರಾಕೃತಿಕವಾಗಿ ಮುಂದಿನ ಮೂರು ತಿಂಗಳು ಸುರಿಯುವ ಮಳೆಗಾಲದ ಪರಿಸ್ಥಿತಿಯಲ್ಲೂ ನಾವೆಲ್ಲರೂ ದಿಗ್ಭ್ರಾಂತರಾಗದೇ ಸಂಬಂಧಿಸಿದ ಆಡಳಿತ ಇಲಾಖೆಯ ಗಮನಕ್ಕೆ ತಂದು ಅಧಿಕಾರಿಗಳ ಸೂಚನೆಗೆ ಸ್ಪಂದಿಸಿ ಅದರಿಂದ ಪಾರಾಗುವ ಬಗೆಯನ್ನು ಕಂಡುಕೊಳ್ಳಬೇಕಾಗಿದೆ.

ಆಕಸ್ಮಿಕವಾಗಿ ತಂದ ದೊಡ್ಡ ಆಘಾತದ ಘಟನೆ ಜುಲೈ 5ರಂದು ಮಂಗಳೂರಿನ ಗುರುಪುರದ ಬಂಗ್ಲೆಗಡ್ಡೆಯಲ್ಲಾದ ಗುಡ್ಡಕುಸಿತ ದುರ್ಘಟನೆ ಹೃದಯಕಲಕುವಂತಹುದು. ನಾಲ್ಕಾರು ಮನೆಗಳು ಭೂಸಮಾಧಿಯಾದುದು ಇರುವ ಮನೆಗಳು ಅಪಾಯದಲ್ಲಿರುವುದು. ವಿಧಿಯಾಟಕ್ಕೆ ಎರಡು ಮುಗ್ಧ ಎಳೆಯ ಜೀವಗಳು ನಿದ್ದೆ ಮಾಡಿದಲ್ಲೇ ಮೂವತ್ತು ಅಡಿ ಆಳಕ್ಕೆ ಸಿಲುಕಿ ಮರಣಿಸಿದ ಸುದ್ದಿ ಜನರ ಹೃದಯವೇ ಕಿತ್ತು ಬರುವಂತಹದು. ಏನು ಹೇಳುವುದಿದೆ ವಿಧಾತನ ಘೋರ ಆಟದಲ್ಲಿ ನಾವೆಲ್ಲರೂ ಪಾತ್ರಧಾರಿಗಳಷ್ಷೇ ಆಗಿ ಹೋದೆವು. ಆ ಪರಿಸರದಲ್ಲಾಗಲೀ ಬೇರೆ ಎಲ್ಲಿಯಾದರೂ ಮುಂದೆ ರೀತಿಯ ಘಟನೆ ಮರುಕಳಿಸದಿರಲಿ. ಕಂದಮ್ಮಗಳ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವನ್ನು ಸಹಿಸುವ ಶಕ್ತಿ ಭಗವಂತ ದಯಾ ಪಾಲಿಸಲಿ.ಈ ಘಟನೆ ಸುದ್ದಿ ಕೇಳಿ ಜಾತಿ ಮತ ಪಕ್ಷ ಬೇಧವಿಲ್ಲದೆ ಮಿಡಿದ ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಜನರೂ ಕೂಡಲೇ ಸಹಕರಿಸಿದ ರೀತಿ ಮಾನವ ಸಮುದಾಯದ ಆತ್ಮಬಲ ಮಾನವ ಭ್ರಾತೃತ್ವದ ನೈಜರೂಪವನ್ನು ಕಂಡಂತಾಯಿತು.

ಆಂತೂ ಬಂದದೆಲ್ಲಾ ಬರಲಿ ಗೋವಿಂದನ ದಯೆ ಇರಲಿ. ಧೈರ್ಯ ಸರ್ವತ್ರ ಸಾಧನವಾಗಲಿ. ಯಾವುದೇ ಪರಿಸರದಲ್ಲಿ ಯಾವುದೇ ಸಂದರ್ಭದಲ್ಲಿ ಏನೇ ದುರ್ಘಟನೆ ನಡೆದರೂ ಮಿಡಿವ ಹೃದಯಿಗಳಾದ ನಾವುಗಳು ಅವರ ಕಷ್ಟಕ್ಕೆ ಸ್ಪಂದಿಸೋಣ ಅಳುವ ಜನರ ಕಣ್ಣೀರಿನನ್ನು ಒರೆಸೋಣ. ಸಾಂತ್ವನ ಹೇಳೋಣ. ಮಾನವ ಜಾತಿ ಮಾನವ ಕುಲವೊಂದೇ ಎಂದು ಭಾವಿಸಿ ಮಾನವನು ಮಾಧವನಗುಣಗಳಿಂದ ಎಲ್ಲರಿಗೂ ಧೈರ್ಯ ಅಭಯವನ್ನು ನೀಡುವಂತಾಗಲಿ. ದೇಶ ಸೇವೆಯೇ ಈಶ ಸೇವೆಯಾಗಲಿ. ಜನತೆಯ ಸೇವೆಯೇ ಜನಾರ್ದನನ ಸೇವೆಯಾಗಲಿ. ಎಲ್ಲರೊಳೊಂದಾಗಿ ಎಲ್ಲರಿಗೂ ನೆರವಾಗೋಣ.








