ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ನ ಬೃಹತ್ ಸಾಧನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯಲ್ಲಿ 26 ಅಮಾಯಕರ ಪ್ರಾಣಹಾನಿಯ ಕುರಿತು ಮಾತನಾಡಿದ ಖರ್ಗೆ, ಈ ಹತ್ಯಾಕಾಂಡಕ್ಕೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯವೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಏಪ್ರಿಲ್ 17ರಂದು ಮೋದಿ ಅವರು ಕಾಶ್ಮೀರ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಿಕೊಂಡಿದ್ದರು. ಆದರೆ, ಗುಪ್ತಚರ ಸಂಸ್ಥೆಗಳು ಭದ್ರತೆಗಾಗಿ ಎಚ್ಚರಿಕೆ ನೀಡಿದ್ದರಿಂದ ಮೋದಿಯವರು ಪ್ರವಾಸವನ್ನು ರದ್ದುಪಡಿಸಿದರು. ಮೋದಿ ಅವರಿಗೆ ಈ ಮಾಹಿತಿಯೆಲ್ಲಾ ಇದ್ದರೂ, ಪಹಲ್ಗಾಮ್ನಲ್ಲಿ ಜನರಿಗೆ ಭದ್ರತೆ ನೀಡುವ ಕುರಿತಾಗಿ ಯಾವುದೇ ಕ್ರಮಕೈಗೊಂಡಿರಲಿಲ್ಲ, ಎಂದು ಖರ್ಗೆ ಹೇಳಿದರು.
ಅವರು ಎಚ್ಚರಿಕೆ ನೀಡಿದಿದ್ದರೆ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದರೆ 26 ಅಮಾಯಕರ ಪ್ರಾಣ ಉಳಿಸಬಹುದಾಗಿತ್ತು. ಆದರೆ ಆ ಕೆಲಸವನ್ನ ಮಾಡಲಿಲ್ಲ. ಇವತ್ತಿಗೂ ಕೇಂದ್ರ ಸರ್ಕಾರ ಈ ಘಟನೆಯ ಜವಾಬ್ದಾರಿಯನ್ನು ಸ್ವೀಕರಿಸಿಲ್ಲ, ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಬಂಧ ರಾಜ್ಯದ ಕಾಂಗ್ರೆಸ್ ನಾಯಕರು ಕೂಡ ಖರ್ಗೆಗೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮವು ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಜನತೆಯ ಮುಂದೆ ಹಂಚಿಕೊಳ್ಳುವ ವೇದಿಕೆಯಾಗಿತ್ತು.
ಖರ್ಗೆಯ ಈ ಹೇಳಿಕೆ ಪಹಲ್ಗಾಮ್ ದಾಳಿಯ ವಿಚಾರದಲ್ಲಿ ಕೇಂದ್ರ ಸರ್ಕಾರದ ಭದ್ರತಾ ವ್ಯವಸ್ಥೆ ಮತ್ತು ರಾಜಕೀಯ ನಿರ್ವಹಣೆಯ ಮೇಲೆ ಪ್ರಶ್ನೆಗಳನ್ನು ಹುಟ್ಟಿಸಿದೆ.








