ಎಸ್ಸಿಸಿಪಿ/ಟಿಎಸ್ಪಿ (Scheduled Caste Component Plan / Tribal Sub Plan) ಅನುದಾನವನ್ನು ಈ ಸರ್ಕಾರ ಡೈವರ್ಟ್ ಮಾಡಿದೆ ಎಂಬ ಆರೋಪಕ್ಕೆ ಮಂತ್ರಿ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಡೈವರ್ಸ್ನ್ ನಡೆದಿದೆ ಅನ್ನೋದಾದ್ರೆ, ಬಿಜೆಪಿ ಸಾಕ್ಷ್ಯಾಧಾರಗಳೊಂದಿಗೆ ದಾಖಲೆಗಳನ್ನು ನೀಡಲಿ. ಸರ್ಕಾರ ಕ್ರಮ ಜರುಗಿಸಲು ಹಿಂದೆಮುಂದೆ ನೋಡುವುದಿಲ್ಲ. ಕೇವಲ ಆಧಾರವಿಲ್ಲದೆ ಸಾರ್ವಜನಿಕರನ್ನು ಗೊಂದಲಕ್ಕೆ ಒಳಪಡಿಸುವ ಕೆಲಸ ಬೇಡ, ಎಂದು ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಬಿಜೆಪಿ ಸರ್ಕಾರದ ಕಾಲದಲ್ಲೇ SCCP/TSP ಅನುದಾನವನ್ನು ಬೇರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗಿತ್ತು ಅನ್ನೋದನ್ನ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಒಪ್ಪಿಕೊಂಡಿದ್ದರು. ಈಗ ಅದೇ ಬಿಜೆಪಿ ನಾಯಕರು ತಾವು ಮಾಡಿದ ತಪ್ಪುಗಳನ್ನು ಲೇಪಿಸಿ ನಂಬಲಾಗದ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ನಿಖರವಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರು ಅನುದಾನ ಹಂಚಿಕೆಯ ಬಗ್ಗೆ ಮಾಡಿದ ಆರೋಪಗಳಿಗೆ ನಾವು ವಿಧಾನಸಭೆಯಲ್ಲೇ ವಿವರವಾದ ಉತ್ತರವನ್ನು ನೀಡಿದ್ದೇವೆ. ಎಲ್ಲಾ ದಾಖಲೆಗಳು ಲಭ್ಯವಿವೆ. ಯಾವುದೇ ರೀತಿ ಡೈವರ್ಸ್ನ್ ಅಥವಾ ಅನುದಾನ ದುರುಪಯೋಗವಾಗಿಲ್ಲ. ಯೋಜಿತವಾಗಿ ನಿಗದಿತ ಸಮುದಾಯಗಳಿಗೆ ಅನುದಾನ ಮುಟ್ಟಿಸುವ ಜವಾಬ್ದಾರಿ ನಮ್ಮದು. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೇವೆ, ಎಂದು ಖರ್ಗೆ ಸ್ಪಷ್ಟಪಡಿಸಿದರು.
ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ಬಿಜೆಪಿ ವಿರುದ್ಧ ತೀವ್ರ ರಾಜಕೀಯ ವಾಗ್ದಾಳಿಯಾಗಿ ಪರಿಗಣಿಸಲಾಗಿದೆ. ವಾಸ್ತವಕ್ಕೆ ದೂರವಾದ ಆರೋಪಗಳನ್ನು ಮಾಡುವುದು ಬಿಜೆಪಿಯ ನೂರೊಂದು ಪ್ರಯತ್ನಗಳಲ್ಲಿ ಒಂದಾಗಿದೆ. ಆದರೆ ಇಂತಹ ತಂತ್ರಗಳು ನಮ್ಮ ಸರ್ಕಾರದ ಕಾರ್ಯಪದ್ಧತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಈ ಕುರಿತು ಮತ್ತಷ್ಟು ದಾಖಲೆಗಳು ಬೇಕಾದರೆ ಸಾರ್ವಜನಿಕವಾಗಿ ಬಹಿರಂಗಪಡಿಸೋಣ ಎಂದು ಅವರು ಸವಾಲು ಹಾಕಿದ್ದಾರೆ.








