ಭಗವಂತನೇ ಕಾಪಾಡಬೇಕು.. ದೇವರ ಮೇಲೆ ಭಾರ ಹಾಕಿದ ಆರೋಗ್ಯ ಸಚಿವ ಶ್ರೀರಾಮುಲು
ಕೊರೋನಾ ಸೋಂಕಿನಿಂದ ಜನರನ್ನು ಆ ಭಗವಂತನೇ ಕಾಪಾಡಬೇಕು ಎಂದು ಹೇಳುವ ಮೂಲಕ ಆರೋಗ್ಯ ಸಚಿವ ಶ್ರೀರಾಮುಲು ದೇವರ ಮೊರೆ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಜಾಸ್ತಿಯಾಗುತ್ತಿದೆ. ಮುಂದಿನ ಎರಡು ತಿಂಗಳು ಜನರು ಹೆಚ್ಚಿನ ಜಾಗ್ರತೆ ವಹಿಸಬೇಕು. ಕೊರೋನಾ ಸೋಂಕು ಅನ್ನು ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು. ನಮ್ಮ ರಕ್ಷಣೆ ದೇವರ ಮೇಲಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ, ಕೊರೋನಾ ಸೋಂಕಿಗೆ ಬಡವ ಶ್ರೀಮಂತ ಅಂತ ಏನಿಲ್ಲ. ಯಾರಿಗೆ ಬೇಕಾದ್ರೂ ಈ ಸೋಂಕು ಬರಬಹುದು. ಹಾಗೇ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು. ಮುಂದಿನ ಎರಡು ತಿಂಗಳಲ್ಲಿ ನೂರಕ್ಕೆ ನೂರರಷ್ಟು ಸೋಂಕು ಜಾಸ್ತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದ್ರು.
ಸೋಂಕು ತಡೆಗಟ್ಟುವುದು ಯಾರ ಕೈಯಲ್ಲೂ ಇಲ್ಲ. ಆ ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವರು ಭಗವಂತನ ಮೇಲೆ ಭಾರ ಹಾಕಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಒಂದು ವಾರ ಲಾಕ್ ಡೌನ್ ಮಾಡಲಾಗಿದೆ. ಆದ್ರೆ ಜನರು ಲಾಕ್ಡೌನ್ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ. ಇನ್ನೊಂದೆಡೆ ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದರೂ ಪ್ರಯೋಜನವೇನೂ ಆಗುತ್ತಿಲ್ಲ. ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತನೇ ಇದೆ.