ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಗೊಂದಲ ಮತ್ತೆ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ಬ್ರೇಕ್ಫಾಸ್ಟ್ ಮೀಟಿಂಗ್ ಮೂಲಕ ತಾತ್ಕಾಲಿಕವಾಗಿ ಸಂಘರ್ಷಕ್ಕೆ ತೆರೆಬಿದ್ದಂತೆ ಕಂಡರೂ, ಈಗ ಮತ್ತೆ ಉದ್ವಿಗ್ನತೆ ತೀವ್ರಗೊಂಡಿದೆ.
ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರ ವಿವಾದಾತ್ಮಕ ಹೇಳಿಕೆ ಈ ರಾಜಕೀಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ. ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಎನ್ನುವ ಅವರ ಹೇಳಿಕೆ ಕಾಂಗ್ರೆಸ್ ಒಳಗೇ ಭಾರೀ ಚರ್ಚೆ, ತೀವ್ರ ಅಸಮಾಧಾನ ಮತ್ತು ಗುಂಪುಗಾರಿಕೆಗೆ ಕಾರಣವಾಗಿದೆ.
ಇದರ ಜೊತೆಗೆ ಶಾಸಕರಾದ ಬೈರತಿ ಸುರೇಶ್ ನೀಡಿದ “King is alive” ಎಂಬ ಹೇಳಿಕೆಯೂ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಎಬ್ಬಿಸಿದೆ. ಈ ಹೇಳಿಕೆಗಳು ಸಿಎಂ–ಡಿಸಿಎಂ ಶಿಬಿರಗಳ ನಡುವೆ ಮತ್ತೊಂದು ಅಸಮಾಧಾನದ ಹೊಗೆಗೆ ಕಾರಣವಾಗುತ್ತಿದೆ.
ಪವರ್ ಟ್ರಾನ್ಸ್ಫರ್ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಕೆಲವರು ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಇಳಿದಿದ್ದಾರೆ. ಮುಖ್ಯಮಂತ್ರಿ, ಹಾಗೂ ಉಪ ಮುಖ್ಯಮಂತ್ರಿ ಬೆಂಬಲಿಗ ಶಾಸಕರು ನೇರವಾಗಿ ವಾಗ್ವಾದ ನಡೆಸುತ್ತಿರುವುದು ಸರ್ಕಾರದ ಒಳಜಗಳ ಬಯಲಿಗೆಳೆದಿದೆ.
ಮುಂದಿನ ದಿನಗಳಲ್ಲಿ ಈ ರಾಜಕೀಯ ಗುದ್ದಾಟ ಯಾವ ದಿಕ್ಕಿಗೆ ತಿರುಗುತ್ತದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚುತ್ತಿದೆ.








