ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಮಾಹಿತಿಯೊಂದನ್ನು ನೀಡಿದೆ. ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿಗಳನ್ನು ಪತ್ತೆಹಚ್ಚುವ ಕಾರ್ಯವನ್ನು ಚುರುಕುಗೊಳಿಸಿದ್ದು, ಮಾನದಂಡಗಳಿಗೆ ವಿರುದ್ಧವಾಗಿರುವ ಸಾವಿರಾರು ಬಿಪಿಎಲ್ (BPL) ಕಾರ್ಡ್ಗಳನ್ನು ರದ್ದುಪಡಿಸಿ ಎಪಿಎಲ್ (APL/NPHH) ಕಾರ್ಡ್ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ನಿಜವಾದ ಅರ್ಹ ಬಡ ಕುಟುಂಬಗಳ ಕಾರ್ಡ್ಗಳು ರದ್ದಾಗಿದ್ದರೆ ಅಥವಾ ಎಪಿಎಲ್ ಎಂದು ಬದಲಾಗಿದ್ದರೆ, ಅಂತಹ ಕುಟುಂಬಗಳಿಗೆ ನ್ಯಾಯ ಒದಗಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.
ಒಂದು ವೇಳೆ ನೀವು ಅರ್ಹರಾಗಿದ್ದು, ನಿಮ್ಮ ಬಿಪಿಎಲ್ ಪಡಿತರ ಚೀಟಿ ರದ್ದಾಗಿದ್ದರೆ ಅಥವಾ ಆದ್ಯತಾ ಪಡಿತರ ಚೀಟಿಯಿಂದ (PHH) ಆದ್ಯತೇತರ ಪಡಿತರ ಚೀಟಿಗೆ (NPHH) ಬದಲಾಗಿದ್ದರೆ, ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
45 ದಿನಗಳ ಒಳಗಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ
ಯಾವುದೇ ಅರ್ಹ ಬಡ ಕುಟುಂಬದ ಪಡಿತರ ಚೀಟಿಯು ತಪ್ಪಾಗಿ ರದ್ದಾಗಿದ್ದರೆ ಅಥವಾ ಎಪಿಎಲ್ ಗೆ ವರ್ಗಾವಣೆಯಾಗಿದ್ದರೆ, ಅಂತಹ ಕುಟುಂಬಗಳು ಆತಂಕಪಡುವ ಅಗತ್ಯವಿಲ್ಲ. ಕಾರ್ಡ್ ರದ್ದಾದ ಅಥವಾ ಬದಲಾದ ದಿನಾಂಕದಿಂದ 45 ದಿನಗಳ ಒಳಗಾಗಿ ನಿಮ್ಮ ತಾಲೂಕಿನ ತಹಶೀಲ್ದಾರ್ ಅವರಿಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತ ಮನವಿಯನ್ನು ಸಲ್ಲಿಸಬಹುದಾಗಿದೆ.
ಸಾರ್ವಜನಿಕರು ಸಲ್ಲಿಸಿದ ಮನವಿಯನ್ನು ತಹಶೀಲ್ದಾರ್ ಅವರು ಪರಿಶೀಲನೆ ನಡೆಸಲಿದ್ದಾರೆ. ಪರಿಶೀಲನೆಯ ಸಮಯದಲ್ಲಿ ಕುಟುಂಬವು ಸರ್ಕಾರದ ಮಾನದಂಡದ ಪ್ರಕಾರ ಬಡತನ ರೇಖೆಗಿಂತ ಕೆಳಗಿರುವುದು ದೃಢಪಟ್ಟರೆ, ತಕ್ಷಣವೇ ಜಾರಿಗೆ ಬರುವಂತೆ ಅಂತಹ ಕುಟುಂಬಗಳ ಪಡಿತರ ಚೀಟಿಯನ್ನು ಮರುಸ್ಥಾಪಿಸಿ (PHH Card) ಆದೇಶ ಹೊರಡಿಸಲಾಗುತ್ತದೆ.
ಬಿಪಿಎಲ್ ಕಾರ್ಡ್ ರದ್ದಾಗಲು ಅಥವಾ ಎಪಿಎಲ್ ಆಗಿ ಬದಲಾಗಲು ಕಾರಣಗಳೇನು
ರಾಜ್ಯ ಸರ್ಕಾರವು 2017 ರಲ್ಲಿ ರೂಪಿಸಿರುವ ಮಾನದಂಡಗಳ ಅನ್ವಯ, ಈ ಕೆಳಗಿನ ಅಂಶಗಳನ್ನು ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡಲಾಗುತ್ತದೆ. ಈ ಮಾನದಂಡಗಳ ಅನ್ವಯವೇ ಇದೀಗ ಅನರ್ಹರನ್ನು ಪತ್ತೆಹಚ್ಚಲಾಗುತ್ತಿದೆ.
1. ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿದಾರರು:
ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿ, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು, ಮಂಡಳಿಗಳು, ನಿಗಮಗಳು ಅಥವಾ ಸ್ವಾಯತ್ತ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗ ಹೊಂದಿದ್ದರೆ ಅಂತಹ ಕುಟುಂಬಗಳು ಬಿಪಿಎಲ್ ಕಾರ್ಡ್ಗೆ ಅರ್ಹರಲ್ಲ. ಇದಲ್ಲದೆ, ಆದಾಯ ತೆರಿಗೆ (Income Tax), ಸೇವಾ ತೆರಿಗೆ, ಜಿಎಸ್ಟಿ ಅಥವಾ ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳ ಕಾರ್ಡ್ಗಳನ್ನು ರದ್ದುಪಡಿಸಲಾಗುತ್ತದೆ.
2. ಭೂಮಿ ಮತ್ತು ವಸತಿ ವಿವರ:
ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್ಗಿಂತ ಹೆಚ್ಚು ಒಣಭೂಮಿ ಅಥವಾ ಅದಕ್ಕೆ ಸಮನಾದ ನೀರಾವರಿ ಭೂಮಿಯನ್ನು ಹೊಂದಿರುವ ಕುಟುಂಬಗಳು ಅನರ್ಹವಾಗಲಿವೆ. ಅದೇ ರೀತಿ, ನಗರ ಪ್ರದೇಶಗಳಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಪಕ್ಕಾ ಮನೆಯನ್ನು ಹೊಂದಿರುವ ಕುಟುಂಬಗಳನ್ನು ಬಿಪಿಎಲ್ ಪಟ್ಟಿಯಿಂದ ಕೈಬಿಡಲಾಗುತ್ತದೆ.
3. ವಾಹನ ಮಾಲೀಕತ್ವ:
ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ವಾಣಿಜ್ಯ ವಾಹನಗಳನ್ನು (ಉದಾಹರಣೆಗೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ) ಹೊರತುಪಡಿಸಿ, ಸ್ವಂತ ಬಳಕೆಗೆ ನಾಲ್ಕು ಚಕ್ರದ ವಾಹನಗಳನ್ನು (ಕಾರು ಇತ್ಯಾದಿ) ಹೊಂದಿರುವ ಎಲ್ಲಾ ಕುಟುಂಬಗಳನ್ನು ಅನರ್ಹ ಎಂದು ಪರಿಗಣಿಸಲಾಗುತ್ತದೆ.
4. ವಾರ್ಷಿಕ ಆದಾಯ ಮಿತಿ:
ಕುಟುಂಬದ ಒಟ್ಟು ವಾರ್ಷಿಕ ಆದಾಯವು 1.20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಅಂತಹ ಕುಟುಂಬಗಳು ಆದ್ಯತಾ ಪಡಿತರ ಚೀಟಿಗೆ (BPL) ಅರ್ಹರಾಗಿರುವುದಿಲ್ಲ.
ಆದ್ದರಿಂದ, ಮೇಲೆ ತಿಳಿಸಿದ ಯಾವುದೇ ಮಾನದಂಡಗಳ ಅಡಿಯಲ್ಲಿ ನೀವು ಬರುವುದಿಲ್ಲವಾದರೂ ನಿಮ್ಮ ಕಾರ್ಡ್ ರದ್ದಾಗಿದ್ದರೆ, ಕೂಡಲೇ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ನಿಮ್ಮ ದಾಖಲೆಗಳನ್ನು ಒದಗಿಸಿ ಪಡಿತರ ಚೀಟಿಯನ್ನು ಮರುಪಡೆಯಬಹುದಾಗಿದೆ.








