ತುಮಕೂರು: ಕಲ್ಪತರು ನಾಡು ತುಮಕೂರಿನಲ್ಲಿ ಈಗ ಹೆಸರು ಬದಲಾವಣೆ ವಿಚಾರ ರಾಜಕೀಯ ರಣರಂಗಕ್ಕೆ ಕಾರಣವಾಗಿದೆ. ಜಿಲ್ಲಾ ಕೇಂದ್ರದಲ್ಲಿರುವ ಐತಿಹಾಸಿಕ ಮಹಾತ್ಮ ಗಾಂಧಿ ಕ್ರೀಡಾಂಗಣದ ಆವರಣದಲ್ಲಿನ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ (Indoor Stadium) ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರಿಟ್ಟಿರುವುದು ಈಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿಯ ನಡುವೆ ನೇರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ರಾಷ್ಟ್ರಪಿತನ ಹೆಸರನ್ನು ಮರೆಮಾಚಿ ಸಚಿವರ ಹೆಸರನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂಬ ಬಿಜೆಪಿ ಆರೋಪ ಒಂದೆಡೆಯಾದರೆ, ಗಾಂಧಿ ಹೆಸರು ಅಳಿಸಲು ನಾವೇನು ಹುಚ್ಚರೇ ಎಂದು ಗೃಹ ಸಚಿವರು ತಿರುಗೇಟು ನೀಡಿದ್ದಾರೆ.
ಬಿಜೆಪಿ ಆಕ್ರೋಶ ಮತ್ತು ಕ್ರೀಡಾಂಗಣದ ಬಳಿ ಹೈಡ್ರಾಮಾ
ನಗರದ ಹೃದಯಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಸರ್ಕಲ್ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಎದುರು ನಿನ್ನೆ ಮಧ್ಯಾಹ್ನ ಹೈಡ್ರಾಮಾ ಸೃಷ್ಟಿಯಾಗಿತ್ತು. ಕ್ರೀಡಾ ಇಲಾಖೆಯು ಕ್ರೀಡಾಂಗಣದ ಆವರಣದಲ್ಲಿರುವ ಕಟ್ಟಡಕ್ಕೆ ಡಾ. ಜಿ. ಪರಮೇಶ್ವರ್ ಇಂಡೋರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಎಂಬ ಬೃಹತ್ ನಾಮಫಲಕವನ್ನು ಅಳವಡಿಸುತ್ತಿದ್ದಂತೆಯೇ ಸುದ್ದಿ ತಿಳಿದ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದರು.
ಮಹಾತ್ಮ ಗಾಂಧಿಯವರ ಹೆಸರಿನ ಕ್ರೀಡಾಂಗಣದಲ್ಲಿ ಗೃಹ ಸಚಿವರ ಹೆಸರು ರಾರಾಜಿಸುವುದು ರಾಷ್ಟ್ರಪಿತನಿಗೆ ಮಾಡಿದ ಅವಮಾನ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ, ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಮುರಿದು ನಾಮಫಲಕವನ್ನು ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಪಡೆ ಮತ್ತು ಕಾರ್ಯಕರ್ತರ ನಡುವೆ ತೀವ್ರ ಸ್ವರೂಪದ ನೂಕಾಟ ಮತ್ತು ತಳ್ಳಾಟ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಎರಡು ಕೆಎಸ್ಆರ್ಪಿ ತುಕಡಿ ವಾಹನಗಳಲ್ಲಿ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಗಾಂಧಿ ಹೆಸರು ತೆಗೆಯಲು ನಾವೇನು ಹುಚ್ಚರೇ: ಪರಮೇಶ್ವರ್ ಸ್ಪಷ್ಟನೆ
ತಮ್ಮ ಹೆಸರಿನ ನಾಮಫಲಕದ ಕುರಿತು ಎದ್ದಿರುವ ವಿವಾದ ಹಾಗೂ ಬಿಜೆಪಿಯ ಪ್ರತಿಭಟನೆಯ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾತ್ಮ ಗಾಂಧಿ ಸ್ಟೇಡಿಯಂ ಹೆಸರನ್ನ ಯಾರಾದರೂ ತೆಗೆಯಲು ಸಾಧ್ಯವೇ? ನರೇಗಾ ಯೋಜನೆಯಲ್ಲಿ ಗಾಂಧೀಜಿ ಹೆಸರು ಉಳಿಯಬೇಕು ಎಂದು ಹೋರಾಟ ಮಾಡುತ್ತಿರುವವರು ನಾವು. ಅಂತಹುದರಲ್ಲಿ ನಾವೇ ಗಾಂಧಿ ಹೆಸರು ತೆಗೆಯುತ್ತಿದ್ದೇವೆ ಎಂದು ಯಾರಾದರೂ ಭಾವಿಸಿದರೆ ಅವರನ್ನು ಹುಚ್ಚರು ಎನ್ನಬೇಕು ಅಷ್ಟೇ ಎಂದು ತಿರುಗೇಟು ನೀಡಿದರು.
ತಮ್ಮ ಹೆಸರು ಇಡುತ್ತಿರುವ ಹಿಂದಿನ ಕಾರಣವನ್ನು ವಿವರಿಸಿದ ಸಚಿವರು, ಅದು ಇಡೀ ಸ್ಟೇಡಿಯಂ ಹೆಸರಲ್ಲ, ಕೇವಲ ಒಳಾಂಗಣ ಸಂಕೀರ್ಣಕ್ಕೆ ಮಾತ್ರ ಹೆಸರು ಇಡಲಾಗುತ್ತಿದೆ. ತುಮಕೂರಿಗೆ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ತರುತ್ತಿರುವುದು, ಟೆನ್ನಿಸ್ ಕೋರ್ಟ್ ನಿರ್ಮಾಣ ಹಾಗೂ ಕ್ರೀಡಾ ಇಲಾಖೆಗೆ ನಾನು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅಲ್ಲಿನ ಕ್ರೀಡಾಪಟುಗಳೇ ನನ್ನ ಹೆಸರಿಡಲು ಪತ್ರ ಬರೆದು ಒತ್ತಾಯಿಸಿದ್ದರು. ನನಗೆ ಈ ವಿಷಯ ಮೊನ್ನೆ ಮೊನ್ನೆಯವರೆಗೂ ಗೊತ್ತಿರಲಿಲ್ಲ. ಕ್ರೀಡಾಪಟುಗಳ ಪ್ರೀತಿಗೆ ಬೆಲೆಕೊಟ್ಟು ಒಪ್ಪಿಗೆ ನೀಡಿದ್ದೇನೆ. ಇದರಲ್ಲಿ ರಾಜಕೀಯ ಬೆರೆಸುವುದು ಬಿಜೆಪಿಯ ತಪ್ಪು ಕಲ್ಪನೆ ಎಂದು ಸ್ಪಷ್ಟಪಡಿಸಿದರು.
ಮುಂದುವರಿದ ಉದ್ವಿಗ್ನತೆ ಮತ್ತು ಪೊಲೀಸ್ ಪಹರೆ
ಸಚಿವರು ಸ್ಪಷ್ಟನೆ ನೀಡಿದರೂ ಸಹ ತುಮಕೂರಿನಲ್ಲಿ ವಾತಾವರಣ ಇನ್ನೂ ತಿಳಿಯಾಗಿಲ್ಲ. ನಾಮಫಲಕವನ್ನು ತೆರವುಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಘಟಕ ಎಚ್ಚರಿಕೆ ನೀಡಿದೆ. ಮುಂಜಾಗ್ರತಾ ಕ್ರಮವಾಗಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಾಗಿ ಈಗ ನಾಮಫಲಕ ರಾಜಕೀಯ (Name Board Politics) ತುಮಕೂರಿನಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.








