ಹೈದರಾಬಾದ್: ಮಹಾರಾಷ್ಟ್ರದ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವ ಮುನ್ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ 125ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೈದರಾಬಾದ್ ಮೂಲದ ಎಐಎಂಐಎಂ ಪಕ್ಷವು ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಗೆಲುವಿನ ಬೆನ್ನಲ್ಲೇ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಮ್ಮ ಮುಂದಿನ ರಾಜಕೀಯ ನಡೆ ಮತ್ತು ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟಪಡಿಸಿದ್ದು, ಭಾರತ ವಿಶ್ವಗುರುವಾಗಲು ಮುಸ್ಲಿಂ ನಾಯಕತ್ವವನ್ನು ಬೆಳೆಸುವುದು ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರದ ಫಲಿತಾಂಶ ಕೇವಲ ಸಂಖ್ಯೆಗಳ ಆಟವಲ್ಲ, ಅದು ಎಐಎಂಐಎಂ ಪಕ್ಷದ ಅಸ್ತಿತ್ವದ ಪ್ರಶ್ನೆಗೆ ಉತ್ತರವಾಗಿದೆ. ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಅಬ್ಬರದ ನಡುವೆಯೂ ಓವೈಸಿ ನೇತೃತ್ವದ ಪಕ್ಷ ತನ್ನದೇ ಆದ ಮತಬ್ಯಾಂಕ್ ಭದ್ರಪಡಿಸಿಕೊಂಡಿದೆ. ಎನ್ಸಿಪಿ (ಶರದ್ ಪವಾರ್ ಬಣ) ಮತ್ತು ರಾಜ್ ಠಾಕ್ರೆ ಅವರ ಎಂಎನ್ಎಸ್ ಪಕ್ಷಗಳು ಗಳಿಸಿದ ಒಟ್ಟು ಸ್ಥಾನಗಳಿಗಿಂತ ಎರಡರಷ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎಐಎಂಐಎಂ ಮಹಾರಾಷ್ಟ್ರ ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿದೆ.
ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ವಿಫಲ
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ಮತ್ತು ಇತರೆ ಜಾತ್ಯತೀತ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿಯನ್ನು ಎದುರಿಸಲು ಯಾವ ರಾಜಕೀಯ ಪಕ್ಷದ ಬಳಿಯೂ ಸ್ಪಷ್ಟವಾದ ಕಾರ್ಯತಂತ್ರವಿಲ್ಲ. ಸಂಘ ಪರಿವಾರವನ್ನು ಎದುರಿಸುವ ವಿಷಯದಲ್ಲಿ ಕಾಂಗ್ರೆಸ್ ಸೇರಿದಂತೆ ಯಾರಿಗೂ ನಿರ್ದಿಷ್ಟ ನೀತಿಯಿಲ್ಲ. ಆದರೆ ಎಐಎಂಐಎಂ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹೋರಾಡುತ್ತಿದೆ ಎಂದು ಓವೈಸಿ ಹೇಳಿದರು.
ನಮ್ಮದು ಇಂಡಿಯಾ ಟೀಂ ವಿನಃ ಬಿ ಟೀಂ ಅಲ್ಲ
ಎಐಎಂಐಎಂ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆಯುವವರ ವಿರುದ್ಧ ಕಿಡಿಕಾರಿದ ಓವೈಸಿ, ನಾವು ಯಾರ ಬಿ ಟೀಂ ಕೂಡ ಅಲ್ಲ. ನಾವು ಭಾರತದ ಟೀಂ. ನಮ್ಮದು ಸ್ವತಂತ್ರ ರಾಜಕೀಯ ಅಸ್ತಿತ್ವ ಎಂದು ತಿರುಗೇಟು ನೀಡಿದರು. ಮುಸ್ಲಿಮರು ಕೇವಲ ಕಾಂಗ್ರೆಸ್ ಅಥವಾ ಇತರೆ ಜಾತ್ಯತೀತ ಪಕ್ಷಗಳ ಓಟ್ ಬ್ಯಾಂಕ್ ಆಗಿ ಉಳಿಯಬಾರದು. ಅವರು ತಮ್ಮದೇ ಆದ ಸ್ವತಂತ್ರ ನಾಯಕತ್ವವನ್ನು ರೂಪಿಸಿಕೊಳ್ಳಬೇಕು. ಈ ದಿಸೆಯಲ್ಲಿ ಎಐಎಂಐಎಂ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಭಾರತ ಸೂಪರ್ ಪವರ್ ಆಗಲು ವಂಚಿತರ ಉದ್ಧಾರವಾಗಬೇಕು
ತಮ್ಮ ರಾಜಕೀಯದ ಅಂತಿಮ ಗುರಿಯನ್ನು ಬಿಚ್ಚಿಟ್ಟ ಓವೈಸಿ, ಭಾರತ ಜಾಗತಿಕ ಮಟ್ಟದಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮಬೇಕಾದರೆ ದೇಶದ ಅಲ್ಪಸ್ಯಾಂಖ್ಯಾತರು ಮತ್ತು ವಂಚಿತ ಸಮುದಾಯಗಳು ರಾಜಕೀಯ ಅಧಿಕಾರ ಪಡೆಯಬೇಕು ಎಂದರು. ಮುಸ್ಲಿಂ ನಾಯಕತ್ವ ಬೆಳೆಯುವುದು ರಾಷ್ಟ್ರದ ಹಿತಾಸಕ್ತಿಗೆ ಪೂರಕವೇ ಹೊರತು ಮಾರಕವಲ್ಲ. ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಬಹುತ್ವ ಮತ್ತು ವೈವಿಧ್ಯತೆಯ ತತ್ವವನ್ನು ನಾವು ಪಾಲಿಸುತ್ತಿದ್ದೇವೆ. ನಾನು ಸಾಯುವ ಮುನ್ನ ನನ್ನ ಸಮುದಾಯ ಮತ್ತು ದೇಶವನ್ನು ಮುನ್ನಡೆಸುವ ಸದೃಢ ನಾಯಕತ್ವವನ್ನು ನೋಡಲು ಬಯಸುತ್ತೇನೆ ಎಂದು ಓವೈಸಿ ಭಾವುಕರಾಗಿ ನುಡಿದರು.
ಮುಂದಿನ ಗುರಿ ಪಶ್ಚಿಮ ಬಂಗಾಳ ಮತ್ತು ರಾಷ್ಟ್ರ ರಾಜಕಾರಣ
ಮಹಾರಾಷ್ಟ್ರದ ಗೆಲುವು ಎಐಎಂಐಎಂ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಹೈದರಾಬಾದ್, ಮಹಾರಾಷ್ಟ್ರ, ಬಿಹಾರದ ಬಳಿಕ ಇದೀಗ ಪಕ್ಷದ ಚಿತ್ತ ಪಶ್ಚಿಮ ಬಂಗಾಳದತ್ತ ನೆಟ್ಟಿದೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲೂ ಪಕ್ಷ ಸ್ಪರ್ಧಿಸುವ ಇಂಗಿತವನ್ನು ಓವೈಸಿ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಬೆಳೆಯಲು ಎಐಎಂಐಎಂ ಸಜ್ಜಾಗಿದ್ದು, ಮುಸ್ಲಿಂ ಸಮುದಾಯದ ಸಬಲೀಕರಣವೇ ಪಕ್ಷದ ಮೂಲ ಮಂತ್ರವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಮಹಾರಾಷ್ಟ್ರದ ನಾಗರಿಕ ಸಂಸ್ಥೆಗಳ ಚುನಾವಣಾ ಫಲಿತಾಂಶ ಅಸಾದುದ್ದೀನ್ ಓವೈಸಿ ಅವರ ರಾಷ್ಟ್ರೀಯ ಮಹತ್ವಾಕಾಂಕ್ಷೆಗೆ ರೆಕ್ಕೆಪುಕ್ಕ ನೀಡಿದ್ದು, ಮುಂದಿನ ದಿನಗಳಲ್ಲಿ ಜಾತ್ಯತೀತ ಪಕ್ಷಗಳಿಗೆ ಮತ್ತು ಬಿಜೆಪಿಗೆ ದೊಡ್ಡ ಸವಾಲಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.








