ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಬಿಜೆಪಿಯೊಳಗೆ ಮತ್ತೊಂದು ಮಹತ್ವದ ಜವಾಬ್ದಾರಿ ಲಭಿಸಿದೆ. ಮುಂಬರುವ ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆ, ಬಿಜೆಪಿ ಹೈಕಮಾಂಡ್ ಶೋಭಾ ಕರಂದ್ಲಾಜೆಗೆ ಬಿಜೆಪಿಯ ಸಹ ಉಸ್ತುವಾರಿ (Co-Incharge) ಸ್ಥಾನವನ್ನು ನೀಡಿದೆ. ಈ ನಿರ್ಧಾರವು ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ವಹಿಸಿಕೊಂಡ ತಕ್ಷಣವೇ ಪ್ರಕಟವಾಗಿರುವುದು ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ.
ಶೋಭಾ ಕರಂದ್ಲಾಜೆ ಕೇರಳದ ಗಡಿಪ್ರದೇಶಕ್ಕೆ ಸಮೀಪದ ಹಿನ್ನೆಲೆಯವರಾಗಿದ್ದು, ಅವರಿಗೆ ಮಲಯಾಳಂ ಭಾಷೆಯ ತಿಳುವಳಿಕೆ ಇರುವುದೇ ಈ ಜವಾಬ್ದಾರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಮತದಾರರ ಮನೋಭಾವವನ್ನು ಅರಿಯುವ ಸಾಮರ್ಥ್ಯ ಕೇರಳದಂತಹ ರಾಜ್ಯದಲ್ಲಿ ಬಿಜೆಪಿ ಸಂಘಟನೆಯನ್ನು ಬಲಪಡಿಸಲು ನೆರವಾಗಲಿದೆ ಎಂಬ ಲೆಕ್ಕಾಚಾರವಿದೆ.
ಈ ಬಾರಿ ಕೇರಳದಲ್ಲಿ ಬಿಜೆಪಿ ಹೆಚ್ಚು ಗಂಭೀರ ತಯಾರಿಯೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ. ಸಂಘಟನೆ ಬಲಪಡಿಸುವುದು, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಶೋಭಾ ಕರಂದ್ಲಾಜೆಯ ಮೇಲಿದೆ ಎಂದು ಹೇಳಲಾಗುತ್ತಿದೆ.
ಕೇರಳದಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಿದರೆ, ಅದರ ಕ್ರೆಡಿಟ್ ಶೋಭಾ ಕರಂದ್ಲಾಜೆಗೆ ಲಭಿಸುವ ಸಾಧ್ಯತೆ ಹೆಚ್ಚು. ಇದು ಮುಂದಿನ ದಿನಗಳಲ್ಲಿ ಕೇಂದ್ರ ರಾಜಕೀಯದಲ್ಲಿ ಅವರ ಸ್ಥಾನಮಾನ ಇನ್ನಷ್ಟು ಗಟ್ಟಿಯಾಗಲು ಕಾರಣವಾಗಬಹುದು. ಹೀಗಾಗಿ, ಈ ಹೊಸ ಜವಾಬ್ದಾರಿಯನ್ನು ಶೋಭಾ ಕರಂದ್ಲಾಜೆಯ ರಾಜಕೀಯ ಬದುಕಿನ ಮಹತ್ವದ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ.
ಒಟ್ಟಿನಲ್ಲಿ, ಕೇರಳ ರಾಜಕೀಯದ ಅಖಾಡದಲ್ಲಿ ಶೋಭಾ ಕರಂದ್ಲಾಜೆಯ ಪಾತ್ರ ಹೇಗಿರಲಿದೆ? ಬಿಜೆಪಿ ಅಲ್ಲಿ ಹೊಸ ಇತಿಹಾಸ ಬರೆಯುತ್ತದೆಯೇ? ಎಂಬುದನ್ನು ಕಾದು ನೋಡಬೇಕಿದೆ.








