ಕೇರಳ: ಇಂದಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಕೇವಲ ವೀವ್ಸ್ ಮತ್ತು ಲೈಕ್ಸ್ ಪಡೆಯುವ ಹಪಹಪಿಕೆ ಎಂತಹ ದುರಂತಕ್ಕೆ ಕಾರಣವಾಗಬಹುದು ಎನ್ನುವುದಕ್ಕೆ ಕೇರಳದ ದೀಪಕ್ ಸಾವು ಒಂದು ಜ್ವಲಂತ ಮತ್ತು ಆಘಾತಕಾರಿ ಸಾಕ್ಷಿಯಾಗಿದೆ. ತಾನು ಮಾಡದ ತಪ್ಪಿಗೆ ಸಾರ್ವಜನಿಕವಾಗಿ ಅವಮಾನಿತನಾದ ದೀಪಕ್ ಎಂಬ ಅಮಾಯಕ ಯುವಕ ಮನನೊಂದು ಸಾವಿಗೆ ಶರಣಾಗಿದ್ದು, ಈ ಘಟನೆ ಇಡೀ ದೇಶದ ಜನಸಾಮಾನ್ಯರ ಮನಕಲಕಿದೆ. ಮಾನವೀಯತೆಯನ್ನು ಮರೆತು ವರ್ತಿಸಿದ ಆರೋಪಿ ಶಿಮ್ಜಿತಾ ಮುಸ್ತಫಾಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಜೀವ ಹೋದರೂ ಪಶ್ಚಾತ್ತಾಪವಿಲ್ಲ: ಮೃತ ದೀಪಕ್ ವಿರುದ್ಧವೇ ದೂರು
ತನ್ನ ಸುಳ್ಳು ಆರೋಪ ಮತ್ತು ವಿಡಿಯೋದಿಂದಾಗಿ ಒಬ್ಬ ವ್ಯಕ್ತಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎಂಬ ಅರಿವಿದ್ದರೂ, ಆರೋಪಿ ಶಿಮ್ಜಿತಾ ಮುಸ್ತಫಾ ಮಾತ್ರ ನಿಕೃಷ್ಟವಾಗಿ ವರ್ತಿಸಿದ್ದಾರೆ. ದೀಪಕ್ ಸಾವಿನ ಬಳಿಕವೂ ಆಕೆಗೆ ಪಶ್ಚಾತ್ತಾಪದ ಲವಲೇಶವೂ ಇಲ್ಲದಿರುವುದು ಆಕೆಯ ಇಮೇಲ್ ದೂರಿನಿಂದ ಸಾಬೀತಾಗಿದೆ. ಬಂಧನ ಭೀತಿಯಲ್ಲಿದ್ದ ಶಿಮ್ಜಿತಾ, ಜನವರಿ 21ರ ರಾತ್ರಿ ಪಯ್ಯನ್ನೂರು ಪೊಲೀಸರಿಗೆ ಇಮೇಲ್ ಮೂಲಕ ದೂರು ರವಾನಿಸಿದ್ದಾಳೆ.
ದೂರಿನಲ್ಲಿ ತಾನು ಪಯ್ಯನ್ನೂರು ರೈಲ್ವೆ ನಿಲ್ದಾಣದಿಂದ ಬಸ್ ಹತ್ತಿದ್ದಾಗ, ಪ್ರಯಾಣದ ವೇಳೆ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿದನು. ಅದಾದ ಬಳಿಕ ನಾನು ವಿಡಿಯೋ ಮಾಡಿ ಜಾಲತಾಣದಲ್ಲಿ ಹಾಕಿದೆ ಎಂದು ಸಮರ್ಥಿಸಿಕೊಂಡಿದ್ದಾಳೆ. ಆದರೆ ದೂರಿನಲ್ಲಿ ಆ ವ್ಯಕ್ತಿಯ ಹೆಸರನ್ನು ಆಕೆ ಉಲ್ಲೇಖಿಸಿಲ್ಲ. ಸತ್ತ ಮೇಲೂ ವ್ಯಕ್ತಿಯ ಮೇಲೆ ಆರೋಪ ಹೊರಿಸುವ ಈಕೆಯ ನಿರ್ಧಾರ ತನಿಖಾಧಿಕಾರಿಗಳಿಗೂ ಅಚ್ಚರಿ ಮೂಡಿಸಿದೆ.
ವಿದೇಶಕ್ಕೆ ಹಾರಲು ಸಂಚು: ಲುಕ್ ಔಟ್ ನೋಟಿಸ್ ಮತ್ತು ಬಂಧನ
ದೀಪಕ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆತನ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಂಡರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಶಿಮ್ಜಿತಾ ತಲೆಮರೆಸಿಕೊಂಡಿದ್ದಳು. ಆಕೆಗೆ ವಿದೇಶದಲ್ಲಿ ಪ್ರಭಾವಿ ಸಂಪರ್ಕಗಳಿದ್ದು, ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆಗಳಿದ್ದವು. ಇದನ್ನು ಮನಗಂಡ ಕೇರಳ ಪೊಲೀಸರು ಕೂಡಲೇ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು.
ತೀವ್ರ ಶೋಧ ಕಾರ್ಯದ ಬಳಿಕ, ವಡಕರದ ಮುತ್ತುಂಗಲ್ ಪಶ್ಚಿಮದಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಶಿಮ್ಜಿತಾ ಅವಿತು ಕುಳಿತಿರುವುದು ಪೊಲೀಸರಿಗೆ ಖಚಿತವಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಕೊಯಿಲಾಂಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಕುನ್ನಮಂಗಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯ ಆಕೆಯನ್ನು ಮಂಜೇರಿ ಮಹಿಳಾ ಜೈಲಿಗೆ ಕಳುಹಿಸಲಾಗಿದೆ.
ಏನಿದು ದೀಪಕ್ ಸಾವು ಪ್ರಕರಣ?
ಕೆಲವು ದಿನಗಳ ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಶಿಮ್ಜಿತಾ, ವ್ಯಕ್ತಿಯೊಬ್ಬ ತನ್ನನ್ನು ಅಸಭ್ಯವಾಗಿ ಮುಟ್ಟುತ್ತಿದ್ದಾನೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಳು. ಸತ್ಯಾಸತ್ಯತೆ ಪರಿಶೀಲಿಸದ ನೆಟ್ಟಿಗರು ಆ ವ್ಯಕ್ತಿಯ ವಿರುದ್ಧ ಹಿಗ್ಗಾಮುಗ್ಗಾ ಟೀಕಿಸಿ ಕಮೆಂಟ್ ಮಾಡಿದ್ದರು. ಕ್ಷಣಮಾತ್ರದಲ್ಲಿ ವಿಡಿಯೋ ವೈರಲ್ ಆಗಿ ದೀಪಕ್ ಅವರ ಮಾನ ಹರಾಜಾಗಿತ್ತು.
ತಾನು ಯಾವುದೇ ತಪ್ಪು ಮಾಡದಿದ್ದರೂ, ಸಮಾಜದ ಮುಂದೆ ಅಪರಾಧಿಯಂತೆ ಬಿಂಬಿತನಾದೆ ಎಂದು ನೊಂದ ದೀಪಕ್, ಈ ಅವಮಾನ ತಾಳಲಾರದೆ ಆತ್ಮಹತ್ಯೆಗೆ ಶರಣಾದರು. ಕೇವಲ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಲು ಅಮಾಯಕನ ಬಲಿ ಪಡೆದ ಈ ಘಟನೆ ಡಿಜಿಟಲ್ ಯುಗದ ಕರಾಳ ಮುಖವನ್ನು ಅನಾವರಣಗೊಳಿಸಿದೆ.
ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಈ ಪ್ರಕರಣ ಕೇವಲ ದೀಪಕ್ ಕುಟುಂಬದ ನೋವಾಗಿ ಉಳಿದಿಲ್ಲ. ಇದು ಪುರುಷರ ಮೇಲಿನ ಸುಳ್ಳು ಆರೋಪಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಪುರುಷರ ಹಕ್ಕುಗಳ ಸಂಘಟನೆಯು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇರಳ ಹೈಕೋರ್ಟ್ ಮೆಟ್ಟಿಲೇರಿದೆ. ಸುಳ್ಳು ಆರೋಪ ಮಾಡಿ ಅಮಾಯಕರ ಜೀವದ ಜೊತೆ ಆಟವಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ದೇಶಾದ್ಯಂತ ಕೇಳಿಬರುತ್ತಿದೆ.








