ಬೆಂಗಳೂರು: ನೀವು ಅಡುಗೆ ಅನಿಲ ಅಥವಾ ಎಲ್ಪಿಜಿ ಸಿಲಿಂಡರ್ ಬಳಕೆದಾರರಾಗಿದ್ದರೇ ನಿಮಗೊಂದು ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರವು ಎಲ್ಪಿಜಿ ಬಳಕೆದಾರರಿಗೆ ಕಠಿಣ ಸೂಚನೆಯೊಂದನ್ನು ರವಾನಿಸಿದ್ದು, ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಗ್ಯಾಸ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಹೌದು, ಎಲ್ಪಿಜಿ ಗ್ರಾಹಕರು ತಮ್ಮ ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಈಗ ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರದಿಂದ ಖಡಕ್ ಆದೇಶ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗ್ಯಾಸ್ ಸಿಲಿಂಡರ್ ವಿತರಣೆಯಲ್ಲಿ ಪಾರದರ್ಶಕತೆ ತರಲು ಮತ್ತು ಅಕ್ರಮಗಳನ್ನು ತಡೆಗಟ್ಟಲು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ನಕಲಿ ಖಾತೆಗಳನ್ನು ತಡೆಯಲು ಮತ್ತು ಅರ್ಹರಿಗೆ ಮಾತ್ರ ಸಬ್ಸಿಡಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಗ್ರಾಹಕರು ಬಯೋಮೆಟ್ರಿಕ್ ಅಥವಾ ಆಧಾರ್ ಆಧಾರಿತ ಕೆವೈಸಿಯನ್ನು ಮಾಡಲೇಬೇಕು ಎಂದು ಆದೇಶಿಸಿದೆ.
ನಿರ್ಲಕ್ಷ್ಯ ಮಾಡಿದರೆ ಏನಾಗುತ್ತದೆ?
ಒಂದು ವೇಳೆ ಗ್ರಾಹಕರು ನಿಗದಿತ ಸಮಯದೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಭಾರೀ ಬೆಲೆ ತೆರಬೇಕಾಗುತ್ತದೆ.
1. ಗ್ಯಾಸ್ ಸಂಪರ್ಕ ರದ್ದು: ನಿಮ್ಮ ಹೆಸರಿನಲ್ಲಿರುವ ಗ್ಯಾಸ್ ಸಂಪರ್ಕವನ್ನು ಏಜೆನ್ಸಿಗಳು ರದ್ದುಗೊಳಿಸುವ ಸಾಧ್ಯತೆಯಿದೆ.
2. ಸಬ್ಸಿಡಿ ಸ್ಥಗಿತ: ಸರ್ಕಾರದ ವತಿಯಿಂದ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣ ಶಾಶ್ವತವಾಗಿ ನಿಂತುಹೋಗಲಿದೆ.
3. ಬುಕ್ಕಿಂಗ್ ಸಮಸ್ಯೆ: ಮುಂದಿನ ದಿನಗಳಲ್ಲಿ ಸಿಲಿಂಡರ್ ಬುಕ್ ಮಾಡುವಾಗ ಅಥವಾ ರೀಫಿಲ್ ಮಾಡುವಾಗ ತಾಂತ್ರಿಕ ಅಡಚಣೆಗಳು ಉಂಟಾಗಬಹುದು.
ಆನ್ಲೈನ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?
ಮನೆಯಲ್ಲಿಯೇ ಕುಳಿತು ನೀವು ಈ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು:
1. ಅಧಿಕೃತ ವೆಬ್ಸೈಟ್ ಭೇಟಿ ನೀಡಿ: https://pmuy.gov.in/index.aspx ವೆಬ್ಸೈಟ್ಗೆ ಲಾಗಿನ್ ಆಗಿ.
2. ಮುಖಪುಟದಲ್ಲಿ ಕಾಣುವ KYC (ಕೆವೈಸಿ) ಆಯ್ಕೆಯನ್ನು ಕ್ಲಿಕ್ ಮಾಡಿ.
3. ನಿಮ್ಮ ಗ್ಯಾಸ್ ಕಂಪನಿಯ (ಇಂಡೇನ್, ಎಚ್ಪಿ ಅಥವಾ ಭಾರತ್ ಗ್ಯಾಸ್) ಅಧಿಕೃತ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
4. ಇದರ ಜೊತೆಗೆ ಆಧಾರ್ ಫೇಸ್ ಆರ್ಡಿ (Aadhaar Face RD) ಆ್ಯಪ್ ಅನ್ನು ಸಹ ಇನ್ಸ್ಟಾಲ್ ಮಾಡಿಕೊಳ್ಳಿ.
5. ನಿಮ್ಮ ಗ್ಯಾಸ್ ಏಜೆನ್ಸಿಯಲ್ಲಿ ನೋಂದಾಯಿತವಾಗಿರುವ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ.
6. eKYC ವಿಭಾಗಕ್ಕೆ ಹೋಗಿ, ಆಧಾರ್ ಸಂಖ್ಯೆ ಮತ್ತು ಅಗತ್ಯ ವಿವರಗಳನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಿ.
ಆಫ್ಲೈನ್ ಮೂಲಕ ಮಾಡುವುದು ಹೇಗೆ?
ಸ್ಮಾರ್ಟ್ ಫೋನ್ ಬಳಸಲು ಬಾರದವರು ಚಿಂತಿಸುವ ಅಗತ್ಯವಿಲ್ಲ.
ಡೆಲಿವರಿ ಬಾಯ್ ಮೂಲಕ: ನಿಮ್ಮ ಮನೆಗೆ ಸಿಲಿಂಡರ್ ತಲುಪಿಸಲು ಬರುವ ಸಿಬ್ಬಂದಿಯ ಬಳಿ ಬಯೋಮೆಟ್ರಿಕ್ ಯಂತ್ರವಿರುತ್ತದೆ. ಅವರಿಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳಿನ ಗುರುತು ನೀಡುವ ಮೂಲಕ ಸ್ಥಳದಲ್ಲಿಯೇ ಕೆವೈಸಿ ಮಾಡಿಸಬಹುದು.
ಏಜೆನ್ಸಿ ಭೇಟಿ: ನೇರವಾಗಿ ನಿಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ, ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್ಬುಕ್ ನೀಡಿ ಕೆವೈಸಿ ಅಪ್ಡೇಟ್ ಮಾಡಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ
ಗ್ರಾಹಕರಿಗೆ ಯಾವುದೇ ಗೊಂದಲಗಳಿದ್ದರೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ. ಹೆಚ್ಚಿನ ವಿವರಗಳಿಗಾಗಿ 18002333555 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ರಾಜ್ಯ ಸರ್ಕಾರಗಳ ಯೋಜನೆಗಳಿಗೂ ಕಂಟಕ
ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದಾದ್ಯಂತ ಈಗಾಗಲೇ ಶೇ. 75 ರಷ್ಟು ಗ್ರಾಹಕರು ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಇನ್ನುಳಿದ ಶೇ. 25 ರಷ್ಟು ಮಂದಿ ತಕ್ಷಣವೇ ಇದನ್ನು ಮಾಡಬೇಕಿದೆ. ಪ್ರಮುಖವಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ ಸರ್ಕಾರ ನೀಡುವ ಉಚಿತ ಸಿಲಿಂಡರ್ ಅಥವಾ 500 ರೂಪಾಯಿಗೆ ಸಿಲಿಂಡರ್ ಯೋಜನೆಗಳ ಲಾಭ ಪಡೆಯಲು ಈ ಕೆವೈಸಿ ಕಡ್ಡಾಯವಾಗಿದೆ. ಇಲ್ಲದಿದ್ದರೆ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವುದಿಲ್ಲ. ಇದೇ ನಿಯಮ ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಸಾಮಾನ್ಯ ಸಬ್ಸಿಡಿಗೂ ಅನ್ವಯಿಸುತ್ತದೆ.
ತಡಮಾಡಬೇಡಿ, ಇಂದೇ ನಿಮ್ಮ ಗ್ಯಾಸ್ ಏಜೆನ್ಸಿ ಸಂಪರ್ಕಿಸಿ ಅಥವಾ ಮೊಬೈಲ್ ಮೂಲಕ ಇ-ಕೆವೈಸಿ ಖಚಿತಪಡಿಸಿಕೊಳ್ಳಿ.








